ಭಾರತದ 50 ಕೊರೋನಾ ಸೋಂಕಿತ ವಿಜ್ಞಾನಿಗಳು ವಿದೇಶದಿಂದ ರಕ್ಷಣೆ| ಮಧ್ಯ ಏಷ್ಯಾದ ದೇಶವೊಂದರಲ್ಲಿ ಸಿಲುಕಿದ್ದ ವಿಜ್ಞಾನಿಗಳು
ನವದೆಹಲಿ(ನ.30): ವಿದೇಶದಲ್ಲಿ ಸಿಲುಕಿದ್ದ 50 ಮಂದಿ ಕೊರೋನಾಪೀಡಿತ ಭಾರತೀಯ ವಿಜ್ಞಾನಿಗಳನ್ನು ಯಶಸ್ವಿ ಕಾರ್ಯಾಚರಣೆ ನಡೆಸುವ ಮೂಲಕ ವಾಯುಪಡೆ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದಿದೆ. ಇವರೆಲ್ಲ ಮಧ್ಯ ಏಷ್ಯಾದ ದೇಶವೊಂದರಲ್ಲಿ ಅತಂತ್ರರಾಗಿದ್ದರು ಎಂದು ಮೂಲಗಳು ತಿಳಿಸಿದ್ದು, ಆ ದೇಶದ ಹೆಸರನ್ನು ಬಹಿರಂಗಪಡಿಸಿಲ್ಲ.
ಮಧ್ಯ ಏಷ್ಯಾದ ದೇಶವೊಂದರಲ್ಲಿ ಸಂಶೋಧನೆ ನಡೆಸುತ್ತಿದ್ದ ಒಂದೇ ತಂಡದ ಈ ವಿಜ್ಞಾನಿಗಳೆಲ್ಲರಿಗೂ ಕೆಲ ದಿನಗಳ ಹಿಂದೆ ಕೊರೋನಾ ತಗಲಿತ್ತು. ಆದರೆ ಆ ದೇಶದಲ್ಲಿ ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದ ಮತ್ತು ಅಲ್ಲಿನ ಆರೋಗ್ಯ ವ್ಯವಸ್ಥೆ ದಕ್ಷವಾಗಿ ಇಲ್ಲದಿರುವುದರಿಂದ ಈ ವಿಜ್ಞಾನಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿರಲಿಲ್ಲ. ಹೀಗಾಗಿ ತಮ್ಮನ್ನು ಭಾರತಕ್ಕೆ ಕರೆದೊಯ್ಯುವಂತೆ ಇವರು ಆ ದೇಶದಲ್ಲಿದ್ದ ಭಾರತೀಯ ದೂತಾವಾಸವನ್ನು ಕೇಳಿಕೊಂಡಿದ್ದರು. ಅದರಂತೆ ಭಾರತೀಯ ವಾಯುಪಡೆಯು ಸಿ-17 ಗ್ಲೋಬ್ಮಾಸ್ಟರ್ ಭಾರಿ ಸರಕು ಸಾಗಣೆ ವಿಮಾನವನ್ನು 19 ಗಂಟೆಗಳ ಕಾಲ ಹಾರಿಸಿ ಆ ದೇಶದಿಂದ ವಿಜ್ಞಾನಿಗಳನ್ನು ದಕ್ಷಿಣ ಭಾರತದ ನಗರವೊಂದಕ್ಕೆ ಕರೆತಂದಿದೆ ಎಂದು ಮೂಲಗಳು ಹೇಳಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ.
ಯಾವ ದೇಶದಲ್ಲಿ ಸಿಲುಕಿದ್ದರು?:
ಮಧ್ಯ ಏಷ್ಯಾದಲ್ಲಿ ಖಜಕ್ಸ್ತಾನ, ಕಿರ್ಗಿಸ್ತಾನ, ತುರ್ಕ್ಮೆನಿಸ್ತಾನ, ಉಜ್ಬೆಕಿಸ್ತಾನ ಮತ್ತು ತಜಿಕಿಸ್ತಾನ ದೇಶಗಳು ಬರುತ್ತವೆ. ಈ ವಿಜ್ಞಾನಿಗಳು ಯಾವ ದೇಶದಲ್ಲಿ ಸಿಲುಕಿದ್ದರು ಎಂಬುದು ತಿಳಿದುಬಂದಿಲ್ಲ.
ಕೊರೋನಾ ಅವಧಿಯಲ್ಲಿ ತುರ್ತು ಕಾರ್ಯಾಚರಣೆಗೆ ಬೇಕಾಗುತ್ತದೆ ಎಂಬ ಉದ್ದೇಶದಿಂದಲೇ ಗ್ಲೋಬ್ಮಾಸ್ಟರ್ ವಿಮಾನವನ್ನು ಈ ಹಿಂದೆ ವೈದ್ಯಕೀಯ ಅಗತ್ಯಗಳಿಗೆ ಪೂರಕವಾಗಿ ಸಜ್ಜುಗೊಳಿಸಲಾಗಿತ್ತು. ಆ ದೇಶದ ದೂತಾವಾಸದಿಂದ ಸಂದೇಶ ಬಂದ ತಕ್ಷಣ ವಾಯುಪಡೆಯ ಪೈಲಟ್ಗಳು ದೆಹಲಿಯ ಸಮೀಪದ ವಾಯುನೆಲೆಯಿಂದ ಇದನ್ನು ಸತತ 9 ತಾಸು ಹಾರಿಸಿ ಅಲ್ಲಿಗೆ ತೆರಳಿದರು. ಅಲ್ಲಿನ ವಿಮಾನನಿಲ್ದಾಣದಲ್ಲಿ 2 ತಾಸು ವಿರಾಮ ನೀಡಿ, ವಿಜ್ಞಾನಿಗಳನ್ನು ಕರೆದುಕೊಂಡು ದಕ್ಷಿಣ ಭಾರತಕ್ಕೆ ಆಗಮಿಸಿದರು. ಸಂತ್ರಸ್ತ ವಿಜ್ಞಾನಿಗಳಲ್ಲಿ ಕೆಲವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಮಧ್ಯ ಏಷ್ಯಾದ ಆ ಗಣರಾಜ್ಯದ ಜೊತೆಗೆ ಭಾರತಕ್ಕೆ ಹತ್ತಿರದ ಸಂಬಂಧಗಳಿವೆ. ಎತ್ತರ ಪ್ರದೇಶದಲ್ಲಿನ ಕೃಷಿ ಸೇರಿದಂತೆ ಹಲವು ವಿಷಯಗಳಲ್ಲಿ ಉಭಯ ದೇಶಗಳ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 30, 2020, 10:01 AM IST