ಬಿರುಬಿಸಿಲಿನಲ್ಲಿ ಸೈಕಲ್ನಲ್ಲೇ ಫುಡ್ ಡೆಲಿವರಿ ಮಾಡುತ್ತಿದ್ದ ದುರ್ಗಾ, ನೆಟ್ಟಿಗರ ಉದಾರತೆಯಿಂದ ಸಿಕ್ತು ಬೈಕ್!
ಸೋಶಿಯಲ್ ಮೀಡಿಯಾ ಅನ್ನೋದೊಂದು ಮಾಯಾಲೋಕ ಇಲ್ಲಿ ಅನೇಕ ಬಗೆಯ ವಿಷಯಗಳು ವೈರಲ್ ಆಗುತ್ತವೆ. ಇದು ರಾತ್ರೋ ರಾತ್ರಿ ಅನೇಕರ ಹಣೆಬರಹವನ್ನೇ ಬದಲಾಯಿಸುತ್ತೆ. ಇಲ್ಲಿ ಕಷ್ಟದಲ್ಲಿದ್ದವರಿಗೆ ಸಹಾಯ ಸಿಕ್ಕಿ, ನಗು ಮರಳುವಂತೆ ಮಾಡಿದರೆ, ಉದ್ದಟತನ ತೋರುವವರ ಅಹಂ ಇಳಿಸುತ್ತದೆ. ಅಷ್ಟು ಶಕ್ತಿ ಇದೆ ಈ ಪುಟ್ಟ ಪ್ರಪಂಚಕ್ಕೆ. ಸದ್ಯ ಶಿಕ್ಷಕನೊಬ್ಬನ ನೋವಿಗೆ ಮಿಡಿದ ನೆಟ್ಟಿಗರು ಅವರ ಸಹಾಯಕ್ಕೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ.
ನವದೆಹಲಿ(ಏ.12): ಹೌದು ಝೊಮಾಟೊ ಕಾರ್ಯನಿರ್ವಾಹಕನ ಹೃದಯ ವಿದ್ರಾವಕ ಕಥೆಯೊಂದನ್ನು 18 ವರ್ಷದ ಆದಿತ್ಯ ಶರ್ಮಾ ಮನಸ್ಸನ್ನು ದಿಗ್ಭ್ರಮೆಗೊಳಿಸಿದ್ದು, ಅವರು ಈ ವಿಚಾರವನ್ನು ಏಪ್ರಿಲ್ 11ರಂದು ಟ್ವಿಟರ್ ಮೂಲಕ ಎಲ್ಲರೊಂದಿಗೂ ಹಂಚಿಕೊಂಡಿದ್ದರು. ತಮ್ಮ ಈ ಸಂದೇಶದಲ್ಲಿ ದುರ್ಗಾ ಮೀನಾ ಅವರಿಗೆ ಸಹಾಯ ಮಾಡುವಂತೆಯೂ ಕೋರಿದ್ದರು. ಇದೀಗ ಈ ಮನವಿಗೆ ಸ್ಪಂದಿಸಿದ ನೆಟ್ಟಿಗರು ದುರ್ಗಾ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ.
ಈ ಯುವಕನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಆದಿತ್ಯ ಶರ್ಮಾ, ಈತನ ಹೆಸರು ದುರ್ಗಾ ಮೀನಾ, 31 ವರ್ಷ. ಕಳೆದ 4 ತಿಂಗಳಿನಿಂದ ಡೆಲಿವರಿ ಬಾಯ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು ಒಂದು ತಿಂಗಳಿಗೆ 10 ಸಾವಿರ ಗಳಿಸುತ್ತಿದ್ದಾರೆ. ದುರ್ಗಾ ಶಿಕ್ಷಕನಾಗಿದ್ದು, ಕಳೆದ 12 ವರ್ಷಗಳಿಂದ ಬೋಧನೆ ಮಾಡುತ್ತಿದ್ದಾರೆ. ಆದರೆ ಕೊರೋನಾ ಸಂದರ್ಭದಲ್ಲಿ ಅವರು ತಮ್ಮ ಉದ್ಯೋಗ ಕಳೆದುಕೊಂಡರು. ಇವರು ನನ್ನೊಂದಿಗೆ ಇಂಗ್ಲೀಷ್ ಭಾಷೆಯಲ್ಲೇ ಮಾತನಾಡಿದರು ಎಂದಿದ್ದಾರೆ.
ಬಿ. ಕಾಂ ಪದವಿ ಪಡೆದಿರುವ ದುರ್ಗಾ ಎಂಕಾಂ ಪೂರೈಸುವ ಆಕಾಂಕ್ಷೆ ಹೊಂದಿದ್ದಾರೆ. ಆದರೆ ಆರ್ಥಿಕ ಮುಗ್ಗಟ್ಟಿನ ಸ್ಥಿತಿ ಇದ್ದ ಕಾರಣ ಜೊಮ್ಯಾಟೋದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಆರಂಭಿಸಿದ್ದಾರೆ. ಇಂಟರ್ನೆಟ್ ಬಗ್ಗೆ ಸಂಪೂರ್ಣವಾಗಿ ತಿಳಿದಿರುವ ದುರ್ಗಾ, ತನ್ನ ಬಳಿ ತನ್ನದೇ ಆದ ಲ್ಯಾಪ್ಟಾಪ್ ಇರಬೇಕೆಂದು ಬಯಸುತ್ತಿದ್ದಾರೆ. ಅಲ್ಲದೇ ಉತ್ತಮ ವೈಫೈ ಸೌಲಭ್ಯ ಪಡೆದು ಈ ಮೂಲಕ ವಿದಯಾರ್ಥಿಗಳಿಗೆ ಕಲಿಸುವ ಬಯಕೆ ಹೊಂದಿದ್ದಾರೆ. ಯಾಕೆಂದರೆ ಇಂದು ಎಲ್ಲರೂ ಆನ್ಲೈನ್ ಕಡೆ ಮುಖ ಮಾಡುತ್ತಿದ್ದಾರೆಂಬುವುದು ದುರ್ಗಾ ಮಾತಾಗಿದೆ.
ಇನ್ನು ದುರ್ಗಾ ಅನೇಕ ಬ್ಯಾಂಕ್ಗಳಿಂದ ಸಾಲ ಪಡೆದಿದ್ದಾರೆ. ಹಣ ಉಳಿಸಲು ಪ್ರಯತ್ನಿಸುತ್ತಿರುವ ದುರ್ಗಾ ಈ ಹಣದಿಂದ ಒಂದು ಬೈಕ್ ಖರೀದಿಸಬೇಕೆಂದುಕೊಂಡಿದ್ದಾರೆ. ಹೀಗಿರುವಾಗ ಬೈಕ್ ಯಾಕೆ ಬೇಕೆಂದು ನಾನು ಕೇಳಿದ್ದೆ, ಇದಕಕ್ಕೆ ಉತ್ತರಿಸಿದ ದುರ್ಗಾ 'ಸರ್ ಈಗ ಪ್ರತಿ ದಿನ 10-12 ಡೆಲಿವರಿ ಮಾಡುತ್ತೇನೆ. ಈ ನಡುವೆ ನಿಟ್ಟುಸಿರು ಬಿಡುವುದೇ ಕಷ್ಟವಾಗಿದೆ. ಹೀಗಿರುವಾಗ ಬೈಕ್ ಇದ್ದರೆ ಕೊಂಚ ಆರಾಮಾಗಿರುತ್ತಿತ್ತು. ಸರ್ ನೀವು ನನ್ನ ಡೌನ್ಪೇಮೆಂಟ್ ಪಾವತಿಸಿದರೆ, ನಾನು ಇಎಂಐ ಕಟ್ಟುತ್ತೇನೆ. ಅಲ್ಲದೇ ನಾಲ್ಕು ತಿಂಗಳೊಳಗೆ ಡೌನ್ಪೇಮೆಂಟ್ ಬಡ್ಡಿ ಸಮೇತ ಮರಳಿ ಕೊಡುತ್ತೇನೆ' ಎಂದಿದ್ದಾರೆ
ದುರ್ಗಾ ಕಷ್ಟವನ್ನರಿತ ಆದಿತ್ಯ ಆತನ ಕಷ್ಟಕ್ಕೆ ಮಿಡಿದು 75 ಸಾವಿರ ಕ್ರೌಡ್ಫಂಡಿಂಗ್ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಆದಿತ್ಯ 75 ಸಾವಿರ ದೊಡ್ಡ ಮೊತ್ತ ಎಂದು ನನಗೆ ತಿಳಿದಿದೆ. ಆದರೆ ಈ ಸಂದೇಶ ಕನಿಷ್ಠ ಪಕ್ಷ 75 ಸಾವಿರ ಮಂದಿಗೆ ತಲುಪಿ, ಎಲ್ಲರೂ ಒಂದು ರೂಪಾಯಿ ಕೊಡುಗೆ ನೀಡಿದರೆ, ಆತನ ಕನಸು ಈಡೇರಿಸುವಲ್ಲಿ ನಾವು ಸಫಲರಾದಂತಾಗುತ್ತದೆ. ಅಲ್ಲದೇ ತಾನು ಹಣ ಮರುಪಾವತಿಸುತ್ತೇನೆ ಎಂದೂ ದುರ್ಗಾ ಹೇಳಿದ್ದಾರೆ. ಇದು ಆತ ಶ್ರಮಜೀವಿ ಎನ್ನುವುದಕ್ಕೆ ಸಾಕ್ಷಿ ಎಂದಿದ್ದಾರೆ. ಜೊತೆಗೆ ದುರ್ಗಾ ಬ್ಯಾಂಕ್ ಖಾತೆ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.
ಸದ್ಯ ದುರ್ಗಾ ಕಷ್ಟಕ್ಕೆ ನೆಟ್ಟಿಗರು ಸ್ಪಂದಿಸಿದ್ದು, ಅನೇಕ ಮಂದಿ ಅವರ ನೆರವಿಗೆ ಧಾವಿಸಿದ್ದಾರೆ. ಇದೊಂದು ಅಭಿಯಾನದಂತೆ ಮುಂದುವರೆದಿದ್ದು, ಬಡ ಯುವಕನ ಕನಸು ಈಡೇರಿಸಲು ಅನೇಕ ಮಂದಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಕೇವಲ ಆರ್ಥಿಕ ಸಹಾಯವಷ್ಟೇ ಅಲ್ಲದೇ, ದುರ್ಗಾ ಶಿಕ್ಷಿತರಾಗಿರುವುದರಿಂದ ಅನೇಕ ಮಂದಿ ಅವರಿಗೆ ಉದ್ಯೋಗ ಮಾಡಲೂ ಆಫರ್ ನೀಡಿದ್ದಾರೆ. ಅಲ್ಲದೇ ನೋಡ ನೋಡುತ್ತಿದ್ದಂತೆಯೇ ದುರ್ಗಾ ಖಾತೆಗೆ ಅವರು ಕೇಳಿದ್ದಕ್ಕಿಂತ ದುಪ್ಪಟ್ಟು ಹಣವನ್ನು ಕಳುಹಿಸಿದ್ದಾರೆ.
ನೆರವು ಹರಿದು ಬರುತ್ತಿರುವುದನ್ನು ಕಂಡು ಅಚ್ಚರಿಗೊಂಡ ದುರ್ಗಾ ತನಗೆ ಅಅಗತ್ಯವಿದ್ದಷ್ಟು ಹಣ ತಲುಪಿದೆ. ಇನ್ನು ಸಾಆಖು ಎಂಬ ಸಂದೇಶವನ್ನು ನೀಡಿದ್ದಾರೆ. ಈ ಬಗ್ಗೆಯೂ ಸಂದೇಶ ಹಂಚಿಕೊಂಡಿರುವ ಆದಿತ್ಯ ಶರ್ಮಾ ಗೆಳೆಯರೇ ದುರ್ಗಾ ಓರ್ವ ವಿನಮ್ರ ವ್ಯಕ್ತಿ. ಆತ ಹಣ ಕಳುಉಹಿಸದಂತೆ ಮನವಿ ಮಾಡಿದ್ದಾನೆ. ಕಳಹುಸಿದ ಹಣ ಬಹಳವಾಗಿದೆ. ಈ ಬಗ್ಗೆ ಆನಂದಭಾಷ್ಪ ಸುರಿಸುತ್ತಾ ಇಂದು ಭಗವಂತನನ್ನು ಕಂಡೆ ಎಂದಿದ್ದಾರೆ. ಈಗಾಗಲೇ ನಾವು ಈ ನಿಟ್ಟಿನಲ್ಲಿ ಸಂಗ್ರಹಿಸುತ್ತಿದ್ದ ಕ್ರೌಡ್ಫಂಡಿಂಗ್ ನಿಲ್ಲಿಸಿದ್ದೇವೆ ಎಂದಿದ್ದಾರೆ.