ಕೊರೋನಾ ಕಾರಣ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಎರಡು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ವಿಮಾನ ಸೇವೆಗೆ ಗ್ರೀನ್ ಸಿಗ್ನಲ್ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಾರ ವಿಮಾನ ಸಂಚಾರ ಸೇವೆ
ನವದೆಹಲಿ(ಮಾ.08): ಕೊರೋನಾ ಕಾರಣ ಕಳೆದೆರಡು ವರ್ಷದಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಬಂದ್ ಆಗಿತ್ತು. ಕೋವಿಡ್ ವೈರಸ್ ಹಾವು ಏಣಿ ಆಟವಾಡುತ್ತಿದ್ದ ಕಾರಣ ಭಾರತ ವಿಮಾನಯಾನ ಸಚಿವಾಲಯ ನಿರ್ಬಂಧ ವಿಧಿಸುತ್ತಲೇ ಬಂದಿತ್ತು. ಕೊನೆಗೂ ಭಾರತ ಅಂತಾರಾಷ್ಟ್ರೀಯ ವಿಮಾನ ಸಂಚಾರ ಆರಂಭಕ್ಕೆ ಮುಹೂರ್ತ ಫಿಕ್ಸ್ ಮಾಡಿದೆ. ಮಾರ್ಚ್ 27 ರಿಂದ ವಾಣಿಜ್ಯ ಹಾಗೂ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಗೊಳ್ಳಲಿದೆ ಎಂದು ವಿಮಾನಯಾನ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
ಫೆಬ್ರವರಿ 28 ರಂದು ವಿಮಾನಯಾನ ಸಚಿವಾಲಯ ಕೊರೋನಾ ಕಾರಣ ವಿಧಿಸಿದ್ದ ನಿರ್ಬಂಧವನ್ನು ಮತ್ತೆ ಮುಂದೂಡಿಕೆ ಮಾಡಿತ್ತು. ಇದು ಕೊನೆಯ ಬಾರಿಗೆ ವಿಧಿಸಿದ್ದ ನಿರ್ಬಂಧವಾಗಿದೆ. ಇದೀಗ ಭಾರತ ಸೇರಿದಂತೆ ವಿಶ್ವದಲ್ಲೇ ಕೊರೋನಾ ಅಬ್ಬರ ಇಳಿಕೆಯಾಗಿದೆ. ಇದರ ಬೆನ್ನಲ್ಲೇ ಭಾರತ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಿಸುತ್ತಿದೆ.
Omicron: ವಿಳಂಬವೇಕೆ? ವಿದೇಶೀ ವಿಮಾನಗಳನ್ನು ರದ್ದು ಮಾಡಲು ಮೋದಿಗೆ ಕೇಜ್ರೀವಾಲ್ ಮನವಿ!
2021ರಿಂದ ಭಾರತ ಏರ್ಬಬಲ್ ಮೂಲಕ ವಿಮಾನಯಾನ ಸೇವೆ ನೀಡುತ್ತಿತ್ತು. ಏರ್ ಬಬಲ್ ವ್ಯವಸ್ಥೆಯಡಿ 31 ದೇಶಗಳಿಗೆ ಮಾತ್ರ ವಿಮಾನ ಸೇವೆ ನೀಡಲಾಗುತ್ತಿತ್ತು. ಕೊರೋನಾ ವೈರಸ್ ಕಾರಣ 2020ರ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರ ಮೊದಲ ಲಾಕ್ಡೌನ್ ಹೇರಿತ್ತು. ಈ ವೇಳೆ ಅಂತಾರಾಷ್ಟ್ರೀಯ ವಿಮಾನ ಸೇವೆಗೂ ನಿರ್ಬಂಧ ವಿಧಿಸಲಾಗಿತ್ತು. ಬಳಿಕ ವಿಮಾಯಾನ ಸಚಿವಾಲಯ ನಿರ್ಬಂಧ ಮುಂದೂಡುತ್ತಲೇ ಬಂದಿತ್ತು.
ಡಿ.31ರಿಂದ ಆರಂಭವಾಗಬೇಕಿದ್ದ ಅಂತಾರಾಷ್ಟ್ರೀಯ ವಿಮಾನ ಸೇವೆ
ಕೊರೋನಾ ಅಬ್ಬರ ಇಳಿಕೆಯಾಗುತ್ತಿದ್ದಂತೆ ಅಂತಾರಾ 2021ರ ಡಿಸೆಂಬರ್ ತಿಂಗಳಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಆರಂಭಗೊಳ್ಳಲಿದೆ ಎಂದು ಕೇಂದ್ರ ಹೇಳಿತ್ತು. ಆದರೆ ದಿಢೀರ್ ಒಮಿಕ್ರಾನ್ ಹಾಗೂ ಕೊರೋನಾ ವೈರಸ್ ಆತಂಕ ಹೆಚ್ಚಾಗಿತ್ತು. ವಿಶ್ವಾದ್ಯಂತ ರೂಪಾಂತರಿ ‘ಒಮಿಕ್ರೋನ್’ ಪ್ರಭೇದದ ಆತಂಕ ಹೆಚ್ಚಿರುವ ಬೆನ್ನಲ್ಲೇ, ಡಿ.15ರಿಂದ ಆರಂಭಿಸಲು ಉದ್ದೇಶಿಸಿದ್ದ ಅಂತಾರಾಷ್ಟ್ರೀಯ ವಿಮಾನ ಸಂಚಾರದ ನಿರ್ಧಾರವನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿತ್ತು.
ತಾಲಿಬಾನ್ ಆಕ್ರಮಣದ ಬಳಿಕ ಆಫ್ಘಾನ್ನಲ್ಲಿ ಇಳಿಯಿತು ಮೊದಲ ಅಂತಾರಾಷ್ಟೀಯ ವಿಮಾನ!
ಕೊರೋನಾ ವ್ಯಾಪಿಸಿದ ಬಳಿಕ 2020ರ ಮಾ.23ರಂದು ಬಂದ್ ಆಗಿರುವ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಡಿ.15ರಿಂದ ಆರಂಭಿಸುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಆದರೆ ವಿಶ್ವಾದ್ಯಂತ ಒಮಿಕ್ರೋನ್ ಆತಂಕದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನದ ಪ್ರಧಾನ ನಿರ್ದೇಶನಾಲಯ(ಡಿಜಿಸಿಎ), ಹೊಸ ಸೋಂಕಿನ ಕುರಿತಾಗಿ ಹೆಚ್ಚಿನ ನಿಗಾ ವಹಿಸಲಾಗಿದೆ. ಅಲ್ಲದೆ ವಿಮಾನಯಾನಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಜತೆ ಮಾತುಕತೆ ನಡೆಸಲಾಗಿದ್ದು, ಅಂತಾರಾಷ್ಟ್ರೀಯ ವಾಣಿಜ್ಯಾತ್ಮಕ ವಿಮಾನಗಳ ಸೇವೆ ಆರಂಭವನ್ನು ನಿರ್ಧರಿಸಲಾಗುತ್ತದೆ ಎಂದಿತ್ತು.
ಭಾರತದಲ್ಲಿ ‘ಬೋಟ್ಸ್ವಾನಾ’ (ಒಮಿಕ್ರೋನ್) ಕೋವಿಡ್ ರೂಪಾಂತರಿ ಕಾಣಿಸಿಕೊಂಡ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿ ಅಂತಾರಾಷ್ಟ್ರೀಯ ವಿಮಾನ ಸೇವೆ ಪುನರ್ ಆರಂಭ ನಿರ್ಧಾರ ಮರುಪರಿಶೀಲಿಸಲು ಸೂಚಿಸಿದ್ದರು. ಇದೇ ವೇಳೆ ವಿದೇಶದಿಂದ ಬರುವವರ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಬೇಕು ಎಂದಿದ್ದರು. ಹೀಗಾಗಿ ಮತ್ತೆ ಅಂತಾರಾಷ್ಟ್ರೀಯ ವಿಮಾನ ಸೇವ ನಿರ್ಬಂಧ ವಿಸ್ತರಿಸಲಾಗಿತ್ತು.
ದೆಹಲಿ-ಬೆಳಗಾವಿ ಮಧ್ಯೆ ವಿಮಾನ ಶುರು
ದೇಶದ ವಿವಿಧ ನಗರಗಳಿಗೆ ವಿಮಾನ ಹಾರಾಟ ಹೆಚ್ಚುವ ಮೂಲಕ ಗಮನ ಸೆಳೆದಿದ್ದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ, ಇದೀಗ ಮತ್ತೊಮ್ಮೆ ಗಮನ ಸೆಳೆಯಲು ಮುಂದಾಗಿದೆ. ಬೆಳಗಾವಿಯಿಂದ ನೇರವಾಗಿ ದೆಹಲಿಗೆ ವಿಮಾನ ಹಾರಾಟ ನಡೆಸಲು ದಿನಗಣನೆ ಆರಂಭವಾಗಿದೆ.
ಬೆಳಗಾವಿ ನಗರ ನೆರೆಯ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕ ಕೊಂಡಿಯಾಗಿದೆ. ಬೆಳಗಾವಿಯಿಂದ ಪುಣೆ, ಚೆನ್ನೈ, ಹೈದ್ರಾಬಾದ್, ಬೆಂಗಳೂರು, ತಿರುಪತಿ, ಕಡಪಾ, ಇಂದೋರ್, ಮೈಸೂರು, ಮುಂಬೈ, ಅಹಮದಾಬಾದ, ನಾಸಿಕ್, ಸೂರತ್ ಹಾಗೂ ಜೋದಪುರ ನಗರಗಳಿಗೆ ನೇರ ಸಂಪರ್ಕ ಕಲ್ಪಿಸುವ ಮೂಲಕ ವಿಮಾನಯಾಣ ಪ್ರಯಾಣಿಕರಿಗೆ ಅತ್ಯಂತ ಹತ್ತಿರವಾಗಿತ್ತು.
ಇದೀಗ ದೆಹಲಿ ಹಾಗೂ ಬೆಳಗಾವಿ ಮಧ್ಯೆ ನೇರವಾಗಿ ವಿಮಾನ ಹಾರಾಟ ನಡೆಸಲಿದೆ. ಈಗಾಗಲೇ ರಾಜ್ಯ ಹಾಗೂ ದೇಶದ ವಿವಿಧ ನಗರಗಳು ಸೇರಿದಂತೆ 12 ಪ್ರಮುಖ ನಗರಗಳಿಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ನೇರ ವಿಮಾನಯಾನ ಸೇವೆ ಈಗಾಗಲೇ ಇದೆ. ಇದೀಗ ಆ. 13ರಿಂದ ವಾರದಲ್ಲಿ ಎರಡು ದಿನ ದೆಹಲಿ ಹಾಗೂ ಬೆಳಗಾವಿ ವಿಮಾನ ಸೇವೆ ನಡೆಸಲು ವಿಮಾನ ಯಾನ ಇಲಾಖೆ ಮುಂದಾಗಿದ್ದು, ಸ್ಪೈಸ್ ಜೆಟ್ ವಿಮಾನ ಕಂಪನಿಯು ಕೂಡ ಮುಂದೆ ಬಂದಿದೆ. ವಾರದಲ್ಲಿ ಪ್ರತಿ ಸೋಮವಾರ ಹಾಗೂ ಶುಕ್ರವಾರ ವಿಮಾನ ಹಾರಾಟ ಮಾಡಲಿದೆ.
