ಸ್ವಾತಂತ್ರ್ಯ ಸಿಕ್ಕ ದಿನ ಪಾಕ್‌ನಲ್ಲಿ ಇರಲು ಬಯಸಿದ್ದರು ಗಾಂಧಿ!| ಕೊಂದರೆ ನಗುಮುಖದಿಂದಲೇ ಸಾಯುವೆ ಎಂದಿದ್ದರು| ಎಂ.ಜೆ. ಅಕ್ಬರ್‌ ಪುಸ್ತಕ

ನವದೆಹಲಿ[ಜ.20]: ಭಾರತಕ್ಕೆ 1947ರ ಆ.15ರಂದು ಸ್ವಾತಂತ್ರ್ಯ ಸಿಕ್ಕಿತು. ಆದರೆ ಆ ದಿನವನ್ನು ಭಾರತದ ಬದಲು ಅದರಿಂದ ಹೋಳಾಗಿ ರಚನೆಯಾದ ಪಾಕಿಸ್ತಾನದಲ್ಲಿ ಕಳೆಯಲು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಯಸಿದ್ದರು ಎಂದು ಕೇಂದ್ರದ ಮಾಜಿ ಸಚಿವ, ಪತ್ರಕರ್ತ ಎಂ.ಜೆ. ಅಕ್ಬರ್‌ ತಮ್ಮ ಪುಸ್ತಕದಲ್ಲಿ ಬರೆದಿರುವುದು, ಚರ್ಚೆಗೆ ಕಾರಣವಾಗಿದೆ.

Add Asianetnews Kannada as a Preferred SourcegooglePreferred

ಬಹುಧರ್ಮದ ಭಾರತದಿಂದ ಇಬ್ಭಾಗವಾಗಿ, ಇಸ್ಲಾಂ ಎಂಬ ಒಂದು ಧರ್ಮದ ಹೆಸರಿನಲ್ಲಿ ಸ್ಥಾಪನೆಯಾದ ದೇಶಕ್ಕೆ ಸಾಂಕೇತಿಕ ಅಥವಾ ಸೌಹಾರ್ದಯುತ ಬೆಂಬಲ ನೀಡುವುದು ಅವರ ಈ ಉದ್ದೇಶವಾಗಿರಲಿಲ್ಲ. ಬದಲಾಗಿ, ದೇಶ ವಿಭಜನೆಯಿಂದ ಮೂಲಭೂತವಾಗಿ ಬಲಿಪಶುಗಳಾಗುವ ಪಾಕಿಸ್ತಾನದ ಹಿಂದುಗಳು ಹಾಗೂ ಭಾರತದ ಮುಸ್ಲಿಮರ ಬಗ್ಗೆ ಅವರಿಗೆ ಚಿಂತೆಯಾಗಿತ್ತು ಎಂದು ‘ಗಾಂಧೀಸ್‌ ಹಿಂದುಯಿಸಂ: ದ ಸ್ಟ್ರಗಲ್‌ ಎಗೇನ್ಸ್ಟ್‌ ಜಿನ್ನಾಸ್‌ ಇಸ್ಲಾಮ್‌’ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.

'ಮಹಾತ್ಮ ಗಾಂಧೀಜಿ ಕನಸು ಕೂಡ ಹಿಂದುತ್ವದ್ದೇ ಆಗಿತ್ತು'

1946ರಲ್ಲಿ ನಡೆದ ಗಲಭೆಯಲ್ಲಿ ಹಿಂದೂಗಳು ಕ್ರೂರ ಯಾತನೆ ಅನುಭವಿಸಿದ ಪೂರ್ವ ಪಾಕಿಸ್ತಾನದ ನೋಖಾಲಿ ಎಂಬಲ್ಲಿ ಗಾಂಧಿ ಸ್ವಾತಂತ್ರ್ಯ ದಿನದಂದು ಇರಲು ಇಚ್ಛಿಸಿದ್ದರು. ಅಂಥ ಘಟನೆ ಮತ್ತೆ ಮರುಕಳಿಸಬಾರದು ಎನ್ನುವುದು ಅವರ ಆಶಯವಾಗಿತ್ತು. ಈ ಬಗ್ಗೆ 1947ರ ಮೇ 31 ರಂದು ಗಡಿನಾಡ ಗಾಂಧಿ ಖಾನ್‌ ಅಬ್ದುಲ್‌ ಗಫಾರ್‌ ಖಾನ್‌ ಅವರೊಂದಿಗೆ ಹೇಳಿದ್ದರು. ದೇಶದ ವಿಭಜನೆಯಲ್ಲಿ ನನಗೆ ನಂಬಿಕೆಯಿಲ್ಲ. ನಾನು ಅಲ್ಲಿಗೆ ಹೋಗುತ್ತೇನೆ. ಅದಕ್ಕೆ ಯಾರ ಅನುಮತಿಯನ್ನೂ ಕೇಳುವುದಿಲ್ಲ. ಇದಕ್ಕಾಗಿ ನನ್ನನ್ನು ಕೊಂದರೆ ನಗುಮುಖದಿಂದಲೇ ಸಾವನ್ನಪ್ಪುತ್ತೇನೆ ಎಂದು ಖಾನ್‌ ಅವರೊಂದಿಗೆ ಗಾಂಧಿ ಹೇಳಿದ್ದಾಗಿ ಅಕ್ಬರ್‌ ಬರೆದಿದ್ದಾರೆ.

ಅಲ್ಲದೇ ತಮ್ಮ ಕೃತಿಯಲ್ಲಿ ಗಾಂಧಿ ಹಾಗೂ ಜಿನ್ನಾ ನಡುವಣ ವ್ಯತ್ಯಾಸಗಳ ಕುರಿತೂ ಅಕ್ಬರ್‌ ಹೇಳಿದ್ದು, ಭಾರತದ ಏಕತೆ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ನಂಬಿದ್ದ ಗಾಂಧಿಯವರ ವೈಯಕ್ತಿಕ ಮತ್ತು ರಾಜಕೀಯ ಜೀವನ ಬೆಸೆಯಲ್ಪಟ್ಟಿತ್ತು. ಭಾರತ ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು, ಪಾರ್ಸಿಗಳ ಮನೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿದ್ದ ಜಿನ್ನಾ ತಮ್ಮ ರಾಜಕೀಯ ಉದ್ದೇಶಗಳಿಗೆ ತಕ್ಕಂತೆ ಊಸರವಳ್ಳಿ ವ್ಯಕ್ತಿತ್ವದವನಾಗಿದ್ದರು. ತಮ್ಮನ್ನು ತಾವು ಮುಸ್ಲಿಮರ ನಾಯಕನನ್ನಾಗಿ ಬಿಂಬಿಸಿಕೊಂಡಿದ್ದರು ಎಂದು ಬರೆದಿದ್ದಾರೆ.

ಮಹಾತ್ಮ ಗಾಂಧಿ ಸಾವು ಆಕಸ್ಮಿಕ: ಶಾಲಾ ಕಿರುಪುಸ್ತಕದ ವಿರುದ್ಧ ಭುಗಿಲೆದ್ದ ಆಕ್ರೋಶ!