80 ತಾಸಿನ ಸಿಎಂ ಆದ ಫಡ್ನವೀಸ್: ಅನಂತ್ ಕುಮಾರ್ ಬಾಯ್ಬಿಟ್ರು 40 ಸಾವಿರ ಕೋಟಿಯ ರಹಸ್ಯ!
ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ| 80 ತಾಸಿನ ಸಿಎಂ ಆದ ಫಡ್ನವೀಸ್| ಇದೆಲ್ಲಾ ಬಿಜೆಪಿ ಹುನ್ನಾರ, ಎಲ್ಲಾ 40 ಸಾವಿರ ಕೋಟಿಗಾಗಿ ಎಂದ ಅನಂತ್ ಕುಮಾರ್ ಹೆಗಡೆ| ಏನಿದು ರಹಸ್ಯ? ಇಲ್ಲಿದೆ ಸಂಪೂರ್ಣ ವಿವರ
ಮಹಾರಾಷ್ಟ್ರ[ಡಿ.02]: ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಹೈಡ್ರಾಮಾವೇ ನಡೆದಿದೆ. ಬಿಜೆಪಿ ಲೆಕ್ಕಾಚಾರ ತಲೆಕೆಳಗಾಗಿಸಿರುವ ಶಿವಸೇನೆ, NCP ಹಾಗೂ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೇರಿದೆ. ಹೀಗಿರುವಾಗ ಮಹಾರಾಷ್ಟ್ರ ರಾಜಕೀಯಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಅನಂತ್ ಕುಮಾರ್ ಹೆಗಡೆ ನೀಡಿರುವ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಫಡ್ನವೀಸ್ ಕೇಂದ್ರ ಸರ್ಕಾರಕ್ಕೆ ಹಣ ಮರಳಿಸಿರುವ ರಹಸ್ಯವನ್ನು ಅನಂತ್ ಕುಮಾರ್ ಹೆಗಡೆ ಬಾಯ್ಬಿಟ್ಟಿದ್ದಾರೆ.
ಹೌದು ಈ ಬಾರಿ ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ರಚಿಸುವ ನಿರೀಕ್ಷೆ ಇತ್ತು. ಆದರೆ ಶಿವಸೇನೆ ಸಿಎಂ ಪಟ್ಟ ನೀಡಬೇಕೆಂಬ ಬೇಡಿಕೆ ಇಟ್ಟ ಹಿನ್ನೆಲೆ ಈ ಒಪ್ಪಂದ ಮುರಿದು ಬಿದ್ದಿತ್ತು. ಹೀಗಿರುವಾಗ ಬಿಜೆಪಿಯ ಫಡ್ನವೀಸ್ ರಾತ್ರೋ ರಾತ್ರಿ NCP ನಾಯಕ ಅಜಿತ್ ಪವಾರ್ ಜೊತೆ ಒಪ್ಪಂದ ನಡೆಸಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಕ್ಷಿಪ್ರ ಬೆಳವಣಿಗೆ ದೇಶದಾದ್ಯಂತ ಎಲ್ಲರನ್ನೂ ಅಚ್ಚರಿಗೀಡು ಮಾಡಿತ್ತು. ಆದರೆ ಕೇವಲ 80 ತಾಸಿನೊಳಗೇ ಫಡ್ನವೀಸ್ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಬಂದೊದಗಿತ್ತು. ಹೀಗಿರುವಾಗ ಬಿಜೆಪಿ ಬಹುಮತವಿಲ್ಲದೇ ಇಷ್ಟು ತರಾತುರಿಯಲ್ಲಿ ಸರ್ಕಾರ ಯಾಕೆ ರಚಿಸಿತ್ತು ಎಂಬ ಅನುಮಾನ ಕಾಡಲಾರಂಭಿಸಿತ್ತು.
ಅತಿ ಶೀಘ್ರವಾಗಿ ಮನೆ ಖಾಲಿ ಮಾಡಿದ ಫಡ್ನವೀಸ್ ಕುಟುಂಬ
ಸದ್ಯ ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ಫೇಮಸ್ ಆಗಿರುವ ಬಿಜೆಪಿ ನಾಯಕ ಅನಂತ್ ಕುಮಾರ್ ಹೆಗಡೆ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಬಿಸಿದೆ. ಇದರಲ್ಲಿ ಫಡ್ನವೀಸ್ ವಿರುದ್ಧ ಗಂಭೀರ ಆರೋಪ ಮಾಡಿರುವ ಅನಂತ್ ಕುಮಾರ್ ಹೆಗಡೆ 'ರಾಜ್ಯ ಅಭಿವೃದ್ಧಿಗೆಂದು ಮೀಸಲಿಟ್ಟಿದ್ದ 40 ಸಾವಿರ ಕೋಟಿ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ಮರಳಿಸಲೆಂದು ಫಡ್ನವೀಸ್ ತರಾತುರಿಯಲ್ಲಿ ಪ್ರಮಾಣವಚನ ಸ್ವೀಕರಿಸಿ, 80 ತಾಸು ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು' ಎಂದಿದ್ದಾರೆ.
ಅಲ್ಲದೇ 'ಮಹಾ ಅಘಾಡಿ ಸರ್ಕಾರ, ಶಿವಸೇನೆ, ಕಾಂಗ್ರೆಸ್ ಹಾಗೂ NCP ನೇತೃತ್ವದ ಮೈತ್ರಿಗೆ ಈ ಮೊತ್ತ ಸಿಗಬಾರದೆಂದು ಬಿಜೆಪಿಯೇ ಈ ರಾಜಕೀಯ ಹೈಡ್ರಾಮಾ ಸಿದ್ಧಪಡಿಸಿತ್ತು. ಒಂದು ವೇಳೆ ಮಹಾ ಅಘಾಡಿ ಸರ್ಕಾರಕ್ಕೆ ಈ ಮೊತ್ತ ಸಿಕ್ಕರೆ ಅವರು ಈ ಹಣವನ್ನು ರಾಜ್ಯದ ಅಭಿವೃದ್ಧಿಗೆ ವಿನಿಯೋಗಿಸುವುದಿಲ್ಲ ಎಂಬ ಸತ್ಯ ಫಡ್ನವೀಸ್ ಗೆ ತಿಳಿದಿತ್ತು' ಎಂದಿದ್ದಾರೆ.
ಫಡ್ನವೀಸ್ ಸಿಎಂ ಆದ ಕುರಿತು ಪ್ರತಿಕ್ರಿಯಿಸಿರುವ ಅನಂತ್ ಕುಮಾರ್ ಹೆಗಡೆ 'ಫಡ್ನವೀಸ್ ಯಾಕಷ್ಟು ಡ್ರಾಮಾ ಮಾಡಿದ್ರು? ತಮ್ಮ ಬಳಿ ಬಹುಮತ ಇಲ್ಲವೆಂದದು ತಿಳಿದಿದ್ದರೂ ಪ್ರಮಾಣವಚನ ಯಾಕೆ ಸ್ವೀಕರಿಸಿದರು? ಈ ಪ್ರಶ್ನೆ ಎಲ್ಲರೂ ಕೇಳುತ್ತಿದ್ದಾರೆ' ಎಂದಿದ್ದಾರೆ.
"
ಮಾತೋಶ್ರೀ ಸಂಬಂಧಕ್ಕೆ ಇತಿಶ್ರೀ: ರಾಜೀನಾಮೆ ನೀಡಿದ ಫಡ್ನವೀಸ್ ಹೇಳಿದ್ದಿಷ್ಟು!
ಸೋಶಿಯಲ್ ಮೀಡಿಯಾದಲ್ಲೂ ವೈರಲ್
ಇನ್ನು ಫಡ್ನವೀಸ್ ರಾಜ್ಯ ಅಭಿವೃದ್ಧಿಗೆಂದು ಇಟ್ಟಿದ್ದ ಹಣವನ್ನು ಕೇಂದ್ರಕ್ಕೆ ಮರಳಿಸಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಆದರೆ ಇದರ ಸತ್ಯಾಸತ್ಯತೆ ಏನು ಎಂಬುವುದು ಮಾತ್ರ ತಿಳಿದು ಬಂದಿಲ್ಲ.
ಫಡ್ನವೀಸ್ ಸ್ಪಷ್ಟನೆ
ಬಿಜೆಪಿ ನಾಯಕ ಅನಂತ್ ಕುಮಾರ್ ಹೆಗಡೆ ತಮ್ಮ ವಿರುದ್ಧ ಮಾಡಿರುವ ಗಂಭೀರ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ 'ಸಿಎಂ ಆಗಿದ್ದ ಸಂದರ್ಭದಲ್ಲಿ ಇಂತಹ ಯಾವುದೇ ನಿರ್ಧಾರ ನಾನು ತೆಗೆದುಕೊಂಡಿಲ್ಲ. ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರ' ಎಂದಿದ್ದಾರೆ
ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್ನಲ್ಲಿ ಎಲ್ಲಾ ಸುದ್ದಿಗಳು