ರಕ್ಷಣಾ ವ್ಯವಹಾರದಲ್ಲಿ ಲಂಚ: ಜಯಾ ಜೇಟ್ಲಿಗೆ 4 ವರ್ಷ ಜೈಲು!
ಜಯಾ ಜೇಟ್ಲಿಗೆ 4 ವರ್ಷ ಜೈಲು: ಕೆಲ ತಾಸಲ್ಲೇ ತಡೆ| ರಕ್ಷಣಾ ವ್ಯವಹಾರದಲ್ಲಿನ ಲಂಚ ಪ್ರಕರಣ
ನವದೆಹಲಿ(ಜು.31): ರಕ್ಷಣಾ ವ್ಯವಹಾರದಲ್ಲಿ 20 ವರ್ಷ ಹಿಂದೆ ನಡೆದಿದ್ದ ಲಂಚಾವತಾರಕ್ಕೆ ಸಂಬಂಧಿಸಿದಂತೆ ಸಮತಾ ಪಾರ್ಟಿ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ಹಾಗೂ ಇತರ ಇಬ್ಬರಿಗೆ ದಿಲ್ಲಿ ಸಿಬಿಐ ನ್ಯಾಯಾಲಯ 4 ವರ್ಷಗಳ ಜೈಲು ಸಜೆ ವಿಧಿಸಿದೆ. ಈ ಹಗರಣದ ಮೂಲಕ ಇವರು ಇಡೀ ದೇಶದ ಭದ್ರತಾ ವ್ಯವಸ್ಥೆಯೊಂದಿಗೇ ರಾಜಿ ಮಾಡಿಕೊಂಡಿದ್ದಾರೆ ಎಂದು ಅದು ಕಿಡಿಕಾರಿದೆ.
ಜೇಟ್ಲಿ ಅವರ ಜತೆ, ಅವರ ಮಾಜಿ ಸಹೋದ್ಯೋಗಿ ಗೋಪಾಲ್ ಪಚೇರ್ವಾಲ್ ಹಾಗೂ ಮೇ| ಜ| (ನಿವೃತ್ತ) ಎಸ್.ಪಿ. ಮುರ್ಗಾಯಿ ಅವರಿಗೂ ಕಾರಾಗೃಹ ಶಿಕ್ಷೆ ನೀಡಲಾಗಿದೆ. ಭ್ರಷ್ಟಾಚಾರ, ಕ್ರಿಮಿನಲ್ ಸಂಚು ಆರೋಪದ ಮೇರೆಗೆ ಇವರಿಗೆ ಕೋರ್ಟು ಜೈಲು ಸಜೆ ಹಾಗೂ ತಲಾ 1 ಲಕ್ಷ ರು. ದಂಡ ವಿಧಿಸಿದೆ. ತೆಹೆಲ್ಕಾ ನಿಯತಕಾಲಿಕೆ ನಡೆಸಿದ ರಹಸ್ಯ ಕಾರ್ಯಾಚರಣೆ ಆಧರಿಸಿ ಸಿಬಿಐ ಇದರ ವಿಚಾರಣೆ ನಡೆಸಿತ್ತು.
ಸಾಕಾಗಿ ಕೊನೆಗೂ ಸಿಡಿದೆದ್ದ ಕುಮಾರಸ್ವಾಮಿ, ಕಾಂಗ್ರೆಸ್–ಬಿಜೆಪಿಗೆ ತಲಾ 5 ಪ್ರಶ್ನೆಗಳು...!
ಈ ಕುರಿತ ತೀರ್ಪು ಪ್ರಕಟಿಸಿದ ಸಿಬಿಐ ವಿಶೇಷ ನ್ಯಾಯಾಧೀಶ ವೀರೇಂದ್ರ ಭಟ್, ‘ರಕ್ಷಣಾ ವ್ಯವಹಾರದಲ್ಲಿ ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಇರಬೇಕು. ಭ್ರಚ್ಟಾಚಾರದಿಂದ ದೇಶದ ಸಾರ್ವಭೌಮತೆ ಹಾಗೂ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ’ ಎಂದು ಹೇಳಿದರು. ಬಳಿಕ ಗುರುವಾರ ಸಂಜೆ 5 ಗಂಟೆಯೊಳಗೆ ಶರಣಾಗಲು ಸೂಚಿಸಿದರು.
ಆದರೆ, ದೋಷಿಗಳು ಕೂಡಲೇ ದಿಲ್ಲಿ ಹೈಕೋರ್ಟ್ ಮೊರೆ ಹೋದ ಪರಿಣಾಮ, ತೀರ್ಪಿಗೆ ಹೈಕೋರ್ಟ್ ತಡೆ ನೀಡಿದೆ. ಹೀಗಾಗಿ ಜೇಟ್ಲಿ ಸೇರಿದಂತೆ ಮೂವರಿಗೂ ತಾತ್ಕಾಲಿಕ ನಿರಾಳತೆ ಲಭಿಸಿದೆ.
ಪ್ರಕರಣ ಏನು?:
ರಕ್ಷಣಾ ಇಲಾಖೆಗೆ ಸಂಬಂಧಿಸಿದ ‘ಹ್ಯಾಂಡ್ ಹೆಲ್ಡ್ ಥರ್ಮಲ್ ಇಮೇಜರ್’ಗಳನ್ನು ಖರೀದಿಸುವ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಜನವರಿ 2001ರಲ್ಲಿ ‘ತೆಹೆಲ್ಕಾ’ ನಿಯತಕಾಲಿಕೆ ಬಯಲು ಮಾಡಿತ್ತು. ಇದಕ್ಕಾಗಿ ‘ಆಪರೇಷನ್ ವೆಸ್ಟ್ಎಂಡ್’ ಎಂಬ ರಹಸ್ಯ ಕಾರ್ಯಾಚರಣೆ ನಡೆಸಿತ್ತು. 2000ನೇ ಡಿಸೆಂಬರ್ ಹಾಗೂ 2001ರ ಜನವರಿಯಲ್ಲಿ ಈ ಅಕ್ರಮ ನಡೆದಿದೆ ಎಂದು ಅದು ವರದಿ ಮಾಡಿತ್ತು.
'ಶ್ರೀರಾಮುಲು ಕೊಟ್ಟ ಲೆಕ್ಕವನ್ನು ಎಷ್ಟೇ ಕೂಡಿಸಿ ಕಳೆದ್ರೂ 100 ಕೋಟಿ ರೂ. ದಾಟುವುದಿಲ್ಲ'
ಈ ಕುರಿತ ವಿಚಾರಣೆ ನಡೆಸಿದ ಕೋರ್ಟ್, ‘ಥರ್ಮಲ್ ಇಮೇಜರ್ ಖರೀದಿ ವ್ಯವಹಾರದಲ್ಲಿ ಜೇಟ್ಲಿ ಅವರು ತಮ್ಮ ಸಹೋದ್ಯೋಗಿ ಪಚೇರ್ವಾಲ್ ಮುಖಾಂತರ ವೆಸ್ಟ್ಎಂಡ್ ಕಂಪನಿ ಪ್ರತಿನಿಧಿಯಿಂದ 2 ಲಕ್ಷ ರು. ಲಂಚ ಸ್ವೀಕರಿಸಿದ್ದಾರೆ. ಮುರ್ಗಾಯಿ ಅವರು 20 ಸಾವಿರ ರು. ಪಡೆದಿದ್ದಾರೆ. ಸೇನೆಗೆ ಥರ್ಮಲ್ ಇಮೇಜರ್ಗಳನ್ನು ಪೂರೈಸುವ ‘ಸಪ್ಲೈ ಆರ್ಡರ್’ ಪಡೆಯಲು ಇವರು ರುಷುವತ್ತು ಪಡೆದಿದ್ದಾರೆ’ ಎಂದು ಹೇಳಿದ್ದು, ಸಿಬಿಐ ದೋಷಾರೋಪ ದೃಢೀಕರಿಸಿದೆ.