ಲೋಕಸಭೆಯಲ್ಲಿ ನಾರಿಶಕ್ತಿ ವಂದನಾ ಮಸೂದೆ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದ್ದಾರೆ. ಮಸೂದೆ ವಿಫಲವಾಗಲು ಕಾಂಗ್ರೆಸ್, ಡಿಎಂಕೆ ಸೇರಿದಂತೆ ವಿಪಕ್ಷಗಳೇ ಕಾರಣ ಎಂದು ಆರೋಪಿಸಿದ ಅವರು, ವಿಪಕ್ಷಗಳು ನಾರಿಶಕ್ತಿಗೆ ಅವಮಾನ ಮಾಡಿವೆ ಎಂದು ವಾಗ್ದಾಳಿ ನಡೆಸಿದರು.
ನವದೆಹಲಿ: ನಾರಿಶಕ್ತಿ ವಂದನಾ ಬಿಲ್ ಮಂಡನೆಯಾಗದ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಆರಂಭದಲ್ಲಿಯೇ ಲೋಕಸಭೆಯಲ್ಲಿ ನಾರಿ ಶಕ್ತಿ ವಂದನಾ ಮಸೂದೆ ಫೇಲ್ ಆಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದರು. ಶನಿವಾರ ಲೋಕಸಭೆಯಲ್ಲಿ ನಡೆದ ಘಟನೆಯನ್ನು ನೋಡಿ ನನಗೆ ವೈಯಕ್ತಿಕವಾಗಿ ದುಃಖವಾಯ್ತು. ಮಸೂದೆ ಅಂಗೀಕಾರವಾಗಕ್ಕೆ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಸೇರಿದಂತೆ ವಿಪಕ್ಷಗಳು ಚಪ್ಪಾಳೆ ತಟ್ಟುವ ಮೂಲಕ ದೇಶದ ಮಹಿಳೆಯರನ್ನು ಅವಮಾನಿಸಿವೆ. ನಾರಿಶಕ್ತಿಗೆ ಕಾಂಗ್ರೆಸ್ ಮತ್ತು ಡಿಎಂಕೆ ಅವಮಾನ ಮಾಡಿವೆ. ನಾರಿಶಕ್ತಿ ಮಸೂದೆ ಮಂಡನೆಯಾಗದ್ದಕ್ಕೆ ವಿಪಕ್ಷಗಳು ಸಂಭ್ರಮಿಸುತ್ತಿವೆ ಎಂದು ಪ್ರಧಾನಿಗಳು ವಾಗ್ದಾಳಿ ನಡೆಸಿದರು
21ನೇ ಶತಮಾನದ ಮಹಿಳೆಯರು ಪ್ರತಿಯೊಂದು ಘಟನೆಯನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂಬುದನ್ನು ವಿಪಕ್ಷಗಳು ಮರೆಯುತ್ತಿವೆ. ಮಸೂದೆಯನ್ನು ವಿರೋಧಿಸುವ ಮೂಲಕ ವಿಪಕ್ಷಗಳು ಮಹಾ ಪಾಪ ಮಾಡಿವೆ. ಈ ಮಸೂದೆ ಯಾರಿಂದಲೂ ಏನನ್ನು ಕಿತ್ತುಕೊಳ್ಳುತ್ತಿರಲಿಲ್ಲ. ಎಲ್ಲರಿಗೂ ಏನನ್ನಾದ್ರೂ ನೀಡುವ ಮಸೂದೆ ಇದಾಗಿತ್ತು. ವಿಪಕ್ಷಗಳು ಜೊತೆಯಾಗಿ ಮಹಿಳೆಯರ ಹಕ್ಕುಗಳನ್ನು ಕಿತ್ತುಕೊಂಡು ನಾರಿಶಕ್ತಿಯನ್ನು ಕೊ*ಲೆ ಮಾಡಿವೆ.
2029ರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿತ್ತು. ದೇಶದ ಅರ್ಧದಷ್ಟು ಜನಸಂಖ್ಯೆಯ ಹಕ್ಕುಗಳನ್ನು ಖಚಿತಪಡಿಸಲು ನಾವು ಮುಂದಾಗಿದ್ದೆವು. 'ನಾರೀಶಕ್ತಿ ವಂದನ್ ಅಧಿನಿಯಮ್' ಈ ಕಾಲಘಟ್ಟದ ಅವಶ್ಯಕತೆಯಾಗಿದೆ. ಎಲ್ಲಾ ಕ್ಷೇತ್ರಗಳಿಗೂ ಸಮಾನ ಶಕ್ತಿ ನೀಡಲು ನಾವು ಪ್ರಯತ್ನಿಸಿದೆವು ಎಂದು ಮೋದಿ ತಿಳಿಸಿದರು.
"ಎಲ್ಲಾ ರಾಜ್ಯಗಳಿಗೂ ಒಂದೇ ಅನುಪಾತದಲ್ಲಿ ಶಕ್ತಿ ಹೆಚ್ಚಿಸುವ ಪ್ರಯತ್ನ ಇದಾಗಿತ್ತು. ಆದರೆ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಮಾಡಿದ್ದು ರಾಜಕೀಯ ಭ್ರೂಣಹತ್ಯೆ. ಈ ಭ್ರೂಣಹತ್ಯೆಯಲ್ಲಿ ಕಾಂಗ್ರೆಸ್, ಟಿಎಂಸಿ ಮತ್ತು ಡಿಎಂಕೆ ಕೂಡಾ ಅಪರಾಧಿಗಳು. ಈ ಮಸೂದೆ ಹಲವು ಬಾರಿ ವಿಫಲವಾಗಲು ಕಾಂಗ್ರೆಸ್ ಪಿತೂರಿ ನಡೆಸಿದೆ. ದೇಶವನ್ನು ದಾರಿ ತಪ್ಪಿಸಲು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಯತ್ನಿಸುತ್ತಿವೆ. ಕಾಂಗ್ರೆಸ್ ತನ್ನ ಹಳೆಯ ತಪ್ಪುಗಳನ್ನು ಪುನರಾವರ್ತಿಸುವುದಿಲ್ಲ ಎಂದು ಭಾವಿಸಿದ್ದೆ. ಆದರೆ ಮಹಿಳೆಯರ ಪರ ನಿಲ್ಲುವ ಅವಕಾಶವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಕಾಂಗ್ರೆಸ್ ಇಂದು ಪ್ರಾದೇಶಿಕ ಪಕ್ಷಗಳನ್ನು ಅವಲಂಬಿಸಿರುವ ಒಂದು ಪರಾವಲಂಬಿ ಜೀವಿ," ಎಂದು ಮೋದಿ ಟೀಕಿಸಿದರು.
ಕುಟುಂಬ ರಾಜಕಾರಣದ ಪಕ್ಷಗಳು ತಮ್ಮ ಕುಟುಂಬದವರನ್ನು ಬಿಟ್ಟು ಬೇರೆಯವರು ಬೆಳೆಯುವುದನ್ನು ಬಯಸುವುದಿಲ್ಲ. ದೇಶದ ಸ್ತ್ರೀಶಕ್ತಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳನ್ನು ಕ್ಷಮಿಸುವುದಿಲ್ಲ. ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಈಗಾಗಲೇ ಅನೇಕ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆ ಬಗ್ಗೆ ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುತ್ತಿದೆ. ಎಲ್ಲಾ ರಾಜ್ಯಗಳ ಸೀಟುಗಳು ಒಂದೇ ಅನುಪಾತದಲ್ಲಿ ಹೆಚ್ಚಾಗಲಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕಾಂಗ್ರೆಸ್ ಜೊತೆ ನಿಂತ ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯಗಳ ಜನರಿಗೆ ಮೋಸ ಮಾಡಿವೆ ಎಂದು ಮೋದಿ ಆರೋಪಿಸಿದರು.
ತಮಿಳುನಾಡು ಮತ್ತು ಬಂಗಾಳದಲ್ಲಿ ಹೆಚ್ಚಿನ ಸಂಸದರು ಮತ್ತು ಶಾಸಕರನ್ನು ಆಯ್ಕೆ ಮಾಡುವ ಅವಕಾಶವಿತ್ತು. ಸಮಾಜವಾದಿ ಪಕ್ಷವು ಲೋಹಿಯಾವಾದವನ್ನು ಸಂಪೂರ್ಣವಾಗಿ ಕೈಬಿಟ್ಟಿದೆ. ದೇಶದ ಅತಿದೊಡ್ಡ ಸುಧಾರಣಾ ವಿರೋಧಿ ಪಕ್ಷವೆಂದರೆ ಅದು ಕಾಂಗ್ರೆಸ್. 'ಸುಧಾರಣೆ' ಎಂಬ ಮಾತು ಕೇಳಿದ ತಕ್ಷಣ ಕಾಂಗ್ರೆಸ್ ಅಡ್ಡಿಪಡಿಸುತ್ತದೆ. ಮಾವೋವಾದವನ್ನು ಕೊನೆಗಾಣಿಸುವ ಪ್ರಯತ್ನಗಳನ್ನೂ ಕಾಂಗ್ರೆಸ್ ವಿರೋಧಿಸುತ್ತದೆ. ನಮ್ಮ ಈ ಹೋರಾಟ ಕಾಂಗ್ರೆಸ್ನ ನಕಾರಾತ್ಮಕ ರಾಜಕಾರಣದ ವಿರುದ್ಧವಾಗಿದೆ. ದೇಶದ ಎಲ್ಲಾ ಮಹಿಳೆಯರು ದುಃಖಿತರಾಗಿದ್ದಾರೆಂದು ನನಗೆ ತಿಳಿದಿದೆ, ನನಗೂ ದುಃಖವಾಗಿದೆ. ಮಸೂದೆಗೆ ಶೇ. 66ರಷ್ಟು ಮತಗಳು ಸಿಗಲಿಲ್ಲ, ಆದರೆ ಶೇ. 100ರಷ್ಟು ಮಹಿಳೆಯರು ನಮ್ಮೊಂದಿಗಿದ್ದಾರೆ ಎಂಬುದು ನನಗೆ ಗೊತ್ತು. ಮತ್ತೊಮ್ಮೆ ಅವಕಾಶ ಸಿಗಲಿದೆ, ಈ ಪ್ರಯತ್ನವನ್ನು ನಾವು ನಿಲ್ಲಿಸುವುದಿಲ್ಲ ಎಂದು ಮೋದಿ ಭರವಸೆ ನೀಡಿದರು.
ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ
ನರೇಂದ್ರ ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯು ನಿನ್ನೆ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಸಿಗದೆ ಸೋಲು ಕಂಡಿದೆ. ಮಸೂದೆ ಪರವಾಗಿ 298 ಸಂಸದರು ಮತ ಹಾಕಿದರೆ, 230 ಮಂದಿ ವಿರೋಧಿಸಿದರು. ಸರ್ಕಾರದ ಎಲ್ಲಾ ಪ್ರಯತ್ನಗಳ ನಡುವೆಯೂ, ವಿರೋಧ ಪಕ್ಷಗಳು ಒಗ್ಗಟ್ಟಾಗಿ ನಿಂತು ತಿದ್ದುಪಡಿಯನ್ನು ವಿರೋಧಿಸಿದವು. '


