'ಕೊರೋನಾ ಪಿಡುಗಿನ ಅಂತ್ಯದತ್ತ ಭಾರತ'
ಕೊರೋನಾ ಪಿಡುಗಿನ ಅಂತ್ಯದತ್ತ ಭಾರತ| ಈ ಹಂತದಲ್ಲಿ ರಾಜಕೀಯ ಬಿಟ್ಟು ಎಲ್ಲರೂ ಲಸಿಕೆ ಪಡೆಯಬೇಕು| ಪಿಡುಗು ಅಂತ್ಯಗೊಳಿಸಲು ಇದು ಮಹತ್ವದ ಘಟ್ಟ: ಹರ್ಷವರ್ಧನ್
ನವದೆಹಲಿ(ಮಾ.08): ಮಹಾಮಾರಿ ಕೊರೋನಾ ವೈರಸ್ ಅಟ್ಟಹಾಸದ ಕೊನೇ ಹಂತದಲ್ಲಿ ನಾವಿದ್ದೇವೆ. ಕೊರೋನಾ ವಿರುದ್ಧದ ಈ ಹೋರಾಟದಲ್ಲಿ ನಾವು ಜಯಶೀಲರಾಗಲಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.
ದೆಹಲಿಯಲ್ಲಿ ಭಾನುವಾರ ನಡೆದ 62ನೇ ದೆಹಲಿ ರಾಜ್ಯ ವೈದ್ಯಕೀಯ ಕಾನ್ಫರೆನ್ಸ್ ಉದ್ದೇಶಿಸಿ ಮಾತನಾಡಿದ ಡಾ. ವರ್ಧನ್ ಅವರು, ‘ಕೊರೋನಾ ವಿರುದ್ಧದ ನಮ್ಮ ಈ ಹೋರಾಟ ಯಶಸ್ವಿಯಾಗಬೇಕಾದರೆ ಲಸಿಕೆ ಅಭಿಯಾನದಲ್ಲಿ ರಾಜಕೀಯ ಬೆರೆಸಬಾರದು. ಲಸಿಕೆ ಅಭಿವೃದ್ಧಿಯ ಹಿಂದಿನ ವಿಜ್ಞಾನದ ಶ್ರಮದ ಮೇಲೆ ಭರವಸೆಯಿಡಬೇಕು ಹಾಗೂ ಕೊನೆಯದಾಗಿ ನಮ್ಮ ಸುತ್ತಮುತ್ತಲಿರುವವರಿಗೆ ಅವರ ಸರದಿ ಬಂದಾಗ ಲಸಿಕೆ ಪಡೆಯಬೇಕೆಂಬ ಮಂತ್ರಗಳನ್ನು ಪಾಲಿಸಬೇಕು’ ಎಂದು ಹೇಳಿದರು.
ಇಡೀ ವಿಶ್ವವೇ ಕೊರೋನಾದಿಂದ ಮುಕ್ತವಾಗದ ಹೊರತು ಭಾರತ ದೇಶ ಈ ಸೋಂಕಿನಿಂದ ಮುಕ್ತವಾಗಲಾರದು. ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸೋಂಕಿನ ತೀವ್ರತೆ ಮುಂದುವರಿದ್ದಲ್ಲಿ, ಆ ಸೋಂಕು ನಮ್ಮ ದೇಶಕ್ಕೂ ವ್ಯಾಪಿಸಲಿದೆ. ಹೀಗಾಗಿ ಪ್ರತಿಯೊಬ್ಬರಿಗೂ ಲಸಿಕೆ ಪೂರೈಕೆಯಾಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ 62 ರಾಷ್ಟ್ರಗಳಿಗೆ 5.51 ಕೋಟಿ ಲಸಿಕೆಯ ಡೋಸ್ಗಳನ್ನು ಪೂರೈಸಿದ ಭಾರತವು ವಿಶ್ವದ ಔಷಧಾಲಯವಾಗಿ ಮಾರ್ಪಟ್ಟಿತು ಎಂದು ಪ್ರತಿಪಾದಿಸಿದರು.