* ಮಹಾರಾಷ್ಟ್ರ ಪ್ರವಾಹದ ವೇಳೆ ಡಿಪೋ ಮ್ಯಾನೇಜರ್‌* 9 ಲಕ್ಷ ರು. ನೊಂದಿಗೆ ಬಸ್‌ ಟಾಪ್‌ ಮೇಲೆ ‘ಜೀವನ’* ಎನ್‌ಡಿಆರ್‌ಎಫ್‌ ಸಿಬ್ಬಂದಿಯಿಂದ ಕೊನೆಗೆ ರಕ್ಷಣೆ

ಮುಂಬೈ(ಜು.28): ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಪ್ಲೂಣ್‌ ನಗರದಲ್ಲಿ ಕಳೆದ ಗುರುವಾರ ಉಂಟಾದ ಪ್ರವಾಹದಿಂದಾಗಿ ಮುಂಬೈ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ಮತ್ತು ಅವರ ಸಿಬ್ಬಂದಿ 9 ಗಂಟೆಗಳ ಕಾಲ, ಸಂಸ್ಥೆಯ 9 ಲಕ್ಷ ಹಣ ಉಳಿಸಲು ಬಸ್ಸಿನ ಮೇಲೆ ಹತ್ತಿ ಕುಳಿತಿದ್ದ ಘಟನೆ ನಡೆದಿದೆ.

Add Asianetnews Kannada as a Preferred SourcegooglePreferred

‘ಅಂದು ನಸುಕಿನ 4.30 ಗಂಟೆ. ಇಡೀ ಡಿಪೋ ನೀರಿನಿಂದ ಮುಳುಗಿ ಹೋಗಿತ್ತು. ಬಸ್‌ ಟಿಕೆಟ್‌ನಿಂದ ಸಂಗ್ರಹವಾಗಿದ್ದ 9 ಲಕ್ಷ ರು. ಡಿಪೋದಲ್ಲೇ ಇತ್ತು. ರಕ್ಷಣೆಗೆ ಬೇರಾವ ಸ್ಥಳವೂ ಲಭಿಸಲಿಲ್ಲ. ಬದುಕಲು ಹಾಗೂ ಹಣ ರಕ್ಷಿಸಲು ಅರ್ಧ ಮುಳುಗಿದ್ದ ಬಸ್ಸನ್ನು ಹತ್ತಿ ಕುಳಿತುಕೊಂಡೆವು’ ಎಂದು ರತ್ನಗಿರಿ ಡಿಪೋ ಮ್ಯಾನೇಜರ್‌ ರಣಜಿತ್‌ ರಾಜೆ ಹೇಳಿದರು.

‘ಕೇಂದ್ರ ವಿಪತ್ತು ನಿರ್ವಹಣಾ ದಳ ಬಂದು ರಕ್ಷಿಸುವವರೆಗೂ ಭಯದಲ್ಲೇ ಕಾಲ ಕಳೆಯುವಂತಾಗಿತ್ತು. ನೀರಿನ ಹರಿವು ತುಂಬಾ ಹೆಚ್ಚಾಗಿತ್ತು. ಯಾವ ಕ್ಷಣದಲ್ಲಾದರೂ ಬಸ್ಸು ಮಗುಚಿ ಬೀಳಬಹುದು ಎಂಬ ಭಯ ಕಾಡುತ್ತಿತ್ತು. 9 ತಾಸಿನ ಬಳಿಕ ಎನ್‌ಡಿಆರ್‌ಎಫ್‌ ಸಿಬ್ಬಂದಿ ನಮ್ಮನ್ನು ರಕ್ಷಿಸಿದರು’ ಎಂದು ಅವರು ವಿವರಿಸಿದರು.

‘ಅಣೆಕಟ್ಟಿನಿಂದ ನೀರು ಹೊರಬಿಟ್ಟಿದ್ದೇ ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಯಿತು’ ಎಂದು ಅವರು ನುಡಿದರು.