Karauli Violence ಕರೌಲಿ ಪ್ರವೇಶಿಸಲು ಯತ್ನಿಸಿದ ಸಂಸದ ತೇಜಸ್ವಿ ಸೂರ್ಯ ರಾಜಸ್ಥಾನ ಪೊಲೀಸ್ ವಶಕ್ಕೆ!
- ಯುಗಾದಿ ಹಬ್ಬದ ದಿನ ಕರೌಲಿಯಲ್ಲಿ ಹಿಂಸಾಚಾರ
- ರಾಜಸ್ಥಾನ ಕರೌಲಿಗೆ ತೆರಳಿದ ತೇಜಸ್ವಿ ಸೂರ್ಯ ವಶಕ್ಕೆ
- ಸಂವಿಧಾನಿಕ ಹಕ್ಕು ಕಸಿದ ರಾಜಸ್ಥಾನ ಸರ್ಕಾರ, ಸೂರ್ಯ ಆರೋಪ
ಕರೌಲಿ(ಏ.13): ಯುಗಾದಿ ಹಬ್ಬದ ದಿನ ನಡೆದ ಹಿಂಸಾಚಾರ ಪ್ರಕರಣದಿಂದ ರಾಜಸ್ಥಾನದ ಕರೌಲಿ ಉದ್ವಿಘ್ನಗೊಂಡಿದೆ. ಸದ್ಯ ಪರಿಸ್ಥಿತಿ ಶಾಂತವಾಗಿರುವ ಕಾರಣ 144 ಸೆಕ್ಷನ್ ಸೇರಿದಂತೆ ಎಲ್ಲಾ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಇದರ ನಡುವೆ ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಯತ್ನಿಸಿದ ಸಂಸದ ತೇಜಸ್ವಿ ಸೂರ್ಯ ಹಾಗೂ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾರನ್ನು ರಾಜಸ್ಥಾನ ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ.
ದೌಸಾ ಗಡಿಗೆ ಆಗಮಿಸುತ್ತಿದ್ದಂತೆ ತೇಜಸ್ವಿ ಸೂರ್ಯ ಹಾಗೂ ಸತೀಶ್ ಪೂನಿಯಾರನ್ನು ಪೊಲೀಸರು ತಡೆದಿದ್ದಾರೆ. ಕೌರಲಿ ಪ್ರವೇಶಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಗಲಭೆ ಸೃಷ್ಟಿಯಾಗಿರುವ ಕಾರಣ ಪರಿಸ್ಥಿತಿ ಕೈಮೀರುವ ಸಾಧ್ಯತೆ ಇದೆ. ಹೀಗಾಗಿ ಕರೌಲಿ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕೋಮುಗಲಭೆ, ಕಲ್ಲು ತೂರಾಟ, ಬೆಂಕಿ ಜ್ವಾಲೆ ನಡುವೆ ಮುದ್ದು ಕಂದನ ರಕ್ಷಿಸಿದ ಪೊಲೀಸ್ ಪೇದೆ!
ಕರೌಲಿಯಲ್ಲಿ ಯಾವುದೇ 144 ಸೆಕ್ಷನ್, ನಿರ್ಬಂಧಗಳು ಇಲ್ಲ. ಗಲಭೆಯಿಂದ ಗಾಯಗೊಂಡ ಸಂತ್ತ್ರಸ್ತರ ಕುಟುಂಬವನ್ನು ಭೇಟಿ ಮಾಡುವುದು ನಮ್ಮ ಸಾಂವಿಧಾನಿಕ ಹಕ್ಕು. ಒಂದು ಪ್ರದೇಶಯಲ್ಲಿ ಯಾವುದೇ ನಿರ್ಭಂಧವಿಲ್ಲದಿರುವಾಗ ತಡೆಯುವುದು ಎಷ್ಟು ಸರಿ ಎಂದು ತೇಜಸ್ವಿ ಸೂರ್ಯ ರಾಜಸ್ಥಾನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ರಾಜಸ್ಥಾನ ಪೊಲೀಸರು ತೇಜಸ್ವಿ ಸೂರ್ಯ ಹಾಗೂ ಸತೀಶ್ ಪೂನಿಯಾರನ್ನು ವಶಕ್ಕೆ ಪಡೆದಿದ್ದಾರೆ. ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಕರೌಲಿ ಪ್ರದೇಶ ಪ್ರವೇಶಿಸದಂತೆ ತಡೆಯುತ್ತಿದ್ದಾರೆ. ಈ ಮೂಲಕ ರಾಜಸ್ಥಾನ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಸತೀಶ್ ಪೂನಿಯಾ ಆರೋಪಿಸಿದ್ದಾರೆ.
ರಾಜಸ್ಥಾನದಲ್ಲಿ ಹಿಂದುಗಳ ಬೈಕ್ ರ್ಯಾಲಿ ವೇಳೆ ಕಲ್ಲು ತೂರಾಟ, 43 ಮಂದಿಗೆ ಗಾಯ!
ಮುಸ್ಲಿಮ್ ಪ್ರಾಬಲ್ಯದ ಕರೌಲಿ ಪ್ರದೇಶದಲ್ಲಿ ಯುಗಾದಿ ಹಬ್ಬಕ್ಕೆ ಹಿಂದೂಗಳ ಬೈಕ್ ರ್ಯಾಲಿ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಈ ವೇಳೆ ನಡೆದ ಹಿಂಸಾಚಾರದಲ್ಲಿ ಹಲವು ಅಂಗಡಿಗಳು, ಬೈಕ್, ಮನೆಗಳು ಬೆಂಕಿಗೆ ಆಹುತಿಯಾಗಿತ್ತು. 43ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದೀಗ ಪೊಲೀಸ್ ಭದ್ರತೆ, 144 ಸೆಕ್ಷನ್ ಜಾರಿಯೊಂದಿಗೆ ಪರಿಸ್ಥಿತಿಯನ್ನು ಶಾಂತಗೊಳಿಸಲಾಗಿದೆ.
ಕೋಮುಗಲಭೆ ಪೀಡಿತ ರಾಜಸ್ಥಾನದ ಕರೌಲಿಯಲ್ಲಿ ಏ.7ರ ವರೆಗೆ ಕರ್ಫ್ಯೂ ವಿಧಿಸಲಾಗಿತ್ತು ಜೊತೆಗೆ ಇಂಟರ್ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿತ್ತು. ಏ.2ರಂದು ಯುಗಾದಿಯ ದಿನ ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಡೆದ ಹಿಂದೂಗಳ ಬೈಕ್ ರಾರಯಲಿ ಮೆರವಣಿಗೆ ಮೇಲೆ ಮುಸ್ಲಿಮರ ಗುಂಪೊಂದು ದಾಳಿ ನಡೆಸಿತ್ತು. ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡು ದುಷ್ಕರ್ಮಿಗಳು ಹತ್ತಕ್ಕೂ ಹೆಚ್ಚು ಅಂಗಡಿಗಳು ಮತ್ತು ಬೈಕ್ಗಳಿಗೆ ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಸೇರಿ 42 ಜನರು ಗಾಯಗೊಂಡಿದ್ದರು. ಈ ನಡುವೆ ಕರೌಲಿಯಲ್ಲಿ ಕೋಮು ಸಂಘರ್ಷದಲ್ಲಿ ಹೊತ್ತಿ ಉರಿಯುತ್ತಿದ್ದ ಕಟ್ಟಡವೊಂದರಿಂದ ಪೊಲೀಸ್ ಕಾನ್ಸ್ಟೇಬಲ್ವೊಬ್ಬರು ಜೀವದ ಹಂಗು ತೊರೆದು ಹಸುಗೂಸನ್ನು ರಕ್ಷಿಸಿರುವ ಘಟನೆ ನಡೆದಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾನ್ಸ್ಟೇಬಲ್ ನಟ್ರೇಶ್ ಶರ್ಮಾ ಅವರಿಗೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹ ಶರ್ಮಾ ಅವರನ್ನು ಪ್ರಶಂಸಿಸಿ ಬಡ್ತಿಗೆ ಸೂಚಿಸಿದ್ದಾರೆ.
ಖರ್ಗೌನ್ನಲ್ಲಿ ಕರ್ಫ್ಯೂ ಮುಂದುವರಿಕೆ
ರಾಮ ನವಮಿ ಶೋಭಯಾತ್ರೆ ವೇಳೆ ಹಿಂದೂಗಳ ಮೇಲೆ ಕಲ್ಲೂ ತೂರಾಟ ನಡೆಸಿದ ಮಧ್ಯ ಪ್ರೇದಶದ ಖರ್ಗೌನ್ ನಗರದಲ್ಲಿ ಕರ್ಫ್ಯೂ ಮುಂದುವರಿಸಲಾಗಿದೆ. ಮೆರೆವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ ಕಾರಣ ಹಿಂಸಾಚಾರ ಭುಗಿಲೆದ್ದಿತ್ತು. ಪರಿಸ್ಥಿತಿ ನಿಯಂತ್ರಣಕ್ಕಾಗಿ ಕರ್ಫ್ಯೂ ವಿಸ್ತರಿಸಲಾಗಿದೆ.