ಅಬಕಾರಿ ನೀತಿ ಹಗರಣದ ನಂತರ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಎರಡು ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನರ ಬೆಂಬಲ ಪಡೆದು ಮತ್ತೆ ಸಿಎಂ ಆಗುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ.

ನವದೆಹಲಿ (ಸೆ.15): ರಾಷ್ಟ್ರ ರಾಜಧಾನಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅಬಕಾರಿ ನೀತಿ ಹಗರಣದಲ್ಲಿ ಜೈಲು ಸೇರಿ ಹೊರಬಂದ ಬೆನ್ನಲ್ಲಿಯೇ ತಮ್ಮ ಸಿಎಂ ಸ್ಥಾನಕ್ಕೆ 2 ದಿನದಲ್ಲಿ ರಾಜೀನಾಮೆ ಕೊಡಲು ತೀರ್ಮಾನಿಸಿದ್ದು, ಇನ್ನೆರಡು ದಿನಗಳಲ್ಲಿ ಬೇರೊಬ್ಬ ಸಿಎಂ ಹೆಸರು ಘೋಷಣೆ ಮಾಡಲು ಮುಂದಾಗಿದ್ದಾರೆ. ಪುನಃ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಜನರು ಬೆಂಬಲ ನೀಡಿದ ನಂತರವೇ ತಾನು ಸಿಎಂ ಆಗುವುದು ಎಂದು ಅರವಿಂದ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೆಹಲಿ ಸರ್ಕಾರದಲ್ಲಿ ನಡೆದ ಅಬಕಾರಿ ನೀತಿ ಹಗರಣದಲ್ಲಿ ಜೈಲು ಸೇರಿದ್ದ ಅರವಿಂದ ಕೇಜ್ರಿವಾಲ್ ಅವರು ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಆಗ ಜನರು ಅರವಿಂದ ಕೇಜ್ರಿವಾಲ್ ಅವರನ್ನು ಭಾರಿ ಅದ್ಧೂರಿ ಸ್ವಾಗತ ಮಾಡಿದ್ದಾರೆ. ಇದಾದ ನಂತರ ಭಾನುವಾರ ದೆಹಲಿಯ ಆಮ್ ಆದ್ಮಿ ಪಾರ್ಟಿ (ಎಎಪಿ) ಕಚೇರಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾನು ಮುಂದಿನ 2 ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಪುನಃ ನಾನು ಜನರ ಬಳಿಗೆ ಹೋಗುತ್ತೇನೆ. ಜನರು ಆಶೀರ್ವಾದ ಮಾಡಿದರೆ ಮಾತ್ರ ಮುಂದೆ ಅಧಿಕಾರಕ್ಕೆ ಬರುತ್ತೇನೆ. ದೆಹಲಿ ವಿಧಾನಸಭಾ ಚುನಾವಣೆಯ ಮೂಲಕ ನಾನು ಅಗ್ನಿ ಪರೀಕ್ಷೆಗೆ ಸಿದ್ಧವಾಗಿದ್ದೇನೆ ಎಂದು ಹೇಳಿದ್ದಾರೆ.

ಬಿಹಾರ ಚುನಾವಣೆಗೆ ಮೊದಲು ಕುಡುಕರಿಗೆ ಪ್ರಶಾಂತ್ ಕಿಶೋರ್ ಕಿಕ್: ಅಧಿಕಾರಕ್ಕೆ ಬಂದ 1 ಗಂಟೆಯಲ್ಲಿ ಮದ್ಯ ನಿಷೇಧ ವಾಪಸ್

ನಾನು ನನ್ನ ಹೃದಯದ ಮಾತನ್ನು ಕೇಳುತ್ತೇನೆ. ಹೀಗಾಗಿ, ನಾನು ಜೈಲಿಗೆ ಹೋಗಿ ಬಂದಿದ್ದು, ಇದೀಗ ಜನರ ಆಶೀರ್ವಾದದ ನಂತರವೇ ಪುನಃ ಅಧಿಕಾರಕ್ಕೆ ಬರಲು ಇಚ್ಛಿಸುತ್ತೇನೆ. ಹೀಗಾಗಿ, ನಾನು ಎಲ್ಲಿಯವರೆಗೂ ನಾನು ಸಿಎಂ ಕುರ್ಚಿಯಲ್ಲಿ ಕೂರುವುದಿಲ್ಲವೋ ಅಲ್ಲಿಯವರೆಗೂ ನಾನು ಜನರ ನಡುವೆಯೇ ಇರುತ್ತೇನೆ. ಜನರು ನನಗೆ ಅಧಿಕಾರ ಕೊಡುವವರೆಗೂ ನಾನು ಸಿಎಂ ಕುರ್ಚಿಯಲ್ಲಿ ಕೂರುವುದಿಲ್ಲ. ಕೇಂಜ್ರಿವಾಲ್ ಇಮಾನ್‌ದಾರ್ ಆಗಿದ್ದರೆ ಮಾತ್ರ ನನಗೆ ಆಶೀರ್ವಾದ ಮಾಡಿ. ಇನ್ನು ಕೆಲವೇ ದಿನಗಳಲ್ಲಿ ದೆಹಲಿ ವಿಧಾನಸಭಾ ಚುನಾವಣೆ ಬರಲಿದೆ. ಆಗ ನೀವು ಮತ ಚಲಾಯಿಸಿ ಪೂರ್ಣ ಅಧಿಕಾರ ಕೊಟ್ಟಲ್ಲಿ ಮಾತ್ರ ನಾನು ಸಿಎಂ ಕುರ್ಚಿಯಲ್ಲಿ ಕೂರುತ್ತೇನೆ. ಇಲ್ಲವೆಂದರೆ ನಾನು ಸಿಎಂ ಕುರ್ಚಿಯಲ್ಲಿ ಕೂರುವುದಿಲ್ಲ ಎಂದು ಘೋಷಣೆ ಮಾಡಿದರು.

ಕೆಲವರು ಕೇಜ್ರಿವಾಲ್ ಕಳ್ಳ, ಭಾರತ ಮಾತೆಯ ಮಡಿಲಲ್ಲಿ ಕಳ್ಳ ಕುಳಿತಿದ್ದಾನೆ ಎಂದು ಹೇಳಿದ್ದಾರೆ. ಆದರೆ, ನಾನು ಈಗ ಪುನಃ ಜನರ ಆಶೀರ್ವಾದ ಪಡೆಯುವ ಅಗ್ನಿಪರೀಕ್ಷೆಗೆ ಮುಂದಾಗುತ್ತೇನೆ. ನಾನು ಸರ್ಕಾರಿ ನೌಕರಿಗೆ 2000ದಲ್ಲಿ ರಾಜೀನಾಮೆಯನ್ನು 2010ರವರೆಗೆ ದೆಹಲಿಯ ಪ್ರತಿ ಜನರ ಬಳಿ ಹೋಗಿದ್ದೇನೆ. ಗಲ್ಲಿ ಗಲ್ಲಿಯನ್ನು ತಿರುಗಿ, ದೆಹಲಿಯನ್ನು ಹೇಗೆ ಸುಂದರ ನಗರವನ್ನಾಗಿ ಕಟ್ಟಬೇಕು ಎಂದು ಕನಸು ಕಂಡಿದ್ದೆನು. ಇದಾದ ನಂತರ ನಾನು ರಾಜಕೀಯಕ್ಕೆ ಬಂದು ನಿಮ್ಮ ಆಶೀರ್ವಾದದೊಂದಿಗೆ ಸಿಎಂ ಆಗಿ ಅಧಿಕಾರಕ್ಕೆ ಬಂದಿದ್ದೇನೆ. ಆದರೆ, ಈಗ ನನ್ನ ಮೇಲೆ ಕಳ್ಳನೆಂಬ ಆರೋಪ ಬಂದಿದೆ. ಇದೀಗ ನಾನು ಜೈಲಿನಿಂದ ಜಾಮೀನಿನ ಮೇಲೆ ಹೊರಗೆ ಬಂದಿದ್ದರೂ, ಅಪವಾದ ಮಾತ್ರ ದೂರವಾಗಿಲ್ಲ. ಹೀಗಾಗಿ, ನಾನು ಫೆಬ್ರವರಿಯಲ್ಲಿ ನಡೆಯುವ ಚುನಾವಣೆಯಲ್ಲಿ ನಿಮ್ಮ ಮುಂದೆ ಬರುತ್ತೇನೆ ಎಂದು ಹೇಳಿದರು.

ರಾಹುಲ್‌ ಗಾಂಧಿಯನ್ನು ‘ಪಪ್ಪು’ ಎಂದ ನೋಯ್ಡಾ ಜಿಲ್ಲಾಧಿಕಾರಿ, ಕಾಂಗ್ರೆಸ್‌ ನಾಯಕರು ಗರಂ!

ಇನ್ನೆರಡು ದಿನದಲ್ಲಿ ಸಂಪುಟ ಸಭೆ: ದೆಹಲಿಯಲ್ಲಿ ಎಎಪಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ವೇಳೆ ರಾಜೀನಾಮೆ ಘೋಷಣೆ ಮಾಡಿ ಯಾರನ್ನಾದರೂ ಹೊಸ ಸಿಎಂ ನೇಮಕ ಮಾಡಲಾಗುವುದು. ಆದರೆ, ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಕೂಡ ಸಿಎಂ ಆಗುವುದಿಲ್ಲ. ಮನೀಷ್ ಮತ್ತು ನಾನು ಇಬ್ಬರೂ ಜನರು ವಾಸ ಮಾಡುವ ಪ್ರತಿ ಗಲ್ಲಿ ಗಲ್ಲಿಯನ್ನು ಸುತ್ತಾಡಿ ನಿಮ್ಮ ಕಷ್ಟಗಳನ್ನು ಆಲಿಸಿ ನಮಗೆ ಬಂದಿದ್ದ ಸಂಕಷ್ಟದ ಬಗ್ಗೆ ನಿಮಗೆ ತಿಳಿಸಲಾಗುವುದು. ನಿಮ್ಮ ಆಶೀರ್ವಾದಕ್ಕಾಗಿ ನಿಮ್ಮ ಬಳಿಗೆ ಬರುತ್ತೇವೆ ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದರು.