ಕೊರೋನಾ ಆತಂಕದ ಮಧ್ಯೆ ಹರಿದ್ವಾರ ಕುಂಭಮೇಳ!
ಕೊರೋನಾ ಹಿನ್ನೆಲೆಯಲ್ಲಿ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ| ಕೊರೋನಾ ಆತಂಕದ ಮಧ್ಯೆ ಹರಿದ್ವಾರ ಕುಂಭಮೇಳ!
ಹರಿದ್ವಾರ(ಏ.01): ಕೊರೋನಾ ಆತಂಕದ ಮಧ್ಯೆಯೇ ಉತ್ತರಾಖಂಡದ ಹರಿದ್ವಾರದಲ್ಲಿ ಗುರುವಾರದಿಂದ ಕುಂಭ ಮೇಳ ಆರಂಭವಾಗಲಿದೆ. ಪ್ರತಿ 12 ವರ್ಷಕ್ಕೆ ಒಮ್ಮೆ ನಡೆಯುವ ಈ ಕುಂಭಮೇಳದಲ್ಲಿ ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ.
ಆದರೆ, ಕುಂಭಮೇಳದ ಆರಂಭಕ್ಕೂ ಮುನ್ನವೇ ಹರಿದ್ವಾರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿರುವುದು ಆತಂಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರ ಗಡಿಗಳಲ್ಲಿ ಜನರ ಚಲನವಲನಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ 12 ರಾಜ್ಯಗಳಿಂದ ಉತ್ತರಾಖಂಡಕ್ಕೆ ಆಗಮಿಸುವವರು ಆರ್ಟಿಪಿಸಿಆರ್ ನೆಗೆಟೀವ್ ವರದಿಯನ್ನು ತೋರಿಸುವುದು ಕಡ್ಡಾಯವಾಗಿದೆ.
ಅಲ್ಲದೇ ವಿಮಾನ, ರೈಲ್ವೆ ನಿಲ್ದಾಣಗಳು, ಗಡಿಯ ಚೆಕ್ಪೋಸ್ಟ್ಗಳಲ್ಲಿ ರಾರಯಂಡಮ್ ಪರೀಕ್ಷೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಇದೇ ವೇಳೆ ಕುಂಭಮೇಳ ನಡೆಯುವ ಸ್ಥಳದಲ್ಲಿ ಪ್ರತಿನಿತ್ಯ 50 ಸಾವಿರ ಕೊರೋನಾ ಪರೀಕ್ಷೆಗಳನ್ನು ನಡೆಸುವಂತೆ ಉತ್ತರಾಖಂಡ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ಹರಿದ್ವಾರಕ್ಕೆ ಆಗಮಿಸುವ ಭಕ್ತರು ಋುಷಿಕೇಶಕ್ಕೂ ತೆರಳುವ ಕಾರಣ ಅಲ್ಲಿಯೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.