ಕೈಬೆರಳುಗಳು ಇಲ್ಲದ ಕಾರಣ  ಕೇರಳದಲ್ಲಿ ನೆಲೆಸಿದ್ದ ಜೋಸಿಮೋಳ್‌ ಪಿ ಜೋಸ್ ಅವರ ಆಧಾರ್‌ ಕಾರ್ಡ್‌ ಮಾಡಲು ಸಾಧ್ಯವಾಗುರಲಿಲ್ಲ. ವಿಷಯ ತಿಳಿದ ಸಚಿವ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಶೀಘ್ರವೇ ಆಧಾರ್‌ ಕಾರ್ಡ್‌ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಚಿವರ ಸೂಚನೆ ಮೇರೆಗೆ ಜೋಸಿಮೋಳ್ ಅವರು ಅದೇ ದಿನ ಆಧಾರ್ ಸಂಖ್ಯೆ ಪಡೆದಿದ್ದಾರೆ.

ನವದೆಹಲಿ (ಡಿ.9): ಕೇರಳದ ಕೊಟ್ಟಾಯಂ ಜಿಲ್ಲೆಯ ಕುಮಾರಕಂ ಎಂಬಲ್ಲಿ ನೆಲೆಸಿರುವ ಜೋಸಿಮೋಳ್‌ ಪಿ ಜೋಸ್ ಎಂಬ ಮಹಿಳೆ ಇತ್ತೀಚಿನ ವರೆಗೂ ಆಧಾರ್ ಕಾರ್ಡ್ ಪಡೆಯಲು ಸಾಧ್ಯವಾಗಿರಲಿಲ್ಲ. ಬೆರಳುಗಳಿಲ್ಲದ ಕಾರಣ, ಅವರ ಆಧಾರ್‌ ಕಾರ್ಡ್‌ ಕೂಡ ಮಾಡಲು ಸಾಧ್ಯವಾಗಿರಲಿಲ್ಲ. ಈ ಮಾಹಿತಿ ಪಡೆದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಮಹಿಳೆಗೆ ಅಧಾರ್‌ ಕಾರ್ಡ್‌ ಪಡೆಯುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಿದ್ದು ಮಾತ್ರವಲ್ಲ, ಈ ಕುರಿತಾಗಿ ಸರ್ಕಾರದಿಂದ ಹೊಸ ನೋಟಿಫಿಕೇಶನ್‌ ಕೂಡ ಹೊರಡಿಸಿದ್ದಾರೆ. ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಮತ್ತು ಜಲಶಕ್ತಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಕೇರಳದ ಮಹಿಳೆಯೊಬ್ಬರ ಪ್ರಕರಣ ಗಮನಕ್ಕೆ ಬಂದಿತ್ತು. ಆಧಾರ್‌ ಬಯೋಮೆಟ್ರಿಕ್ಸ್‌ಗೆ ಫಿಂಗರ್‌ ಪ್ರಿಂಟ್‌ ನೀಡೋದು ಅನಿವಾರ್ಯ. ಆದರೆ, ಮಹಿಳೆಗೆ ಬೆರಳುಗಳೇ ಇಲ್ಲದ ಕಾರಣ ಆಧಾರ್‌ ಕಾರ್ಡ್‌ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಸಚಿವರು, ಮಹಿಳೆಗೆ ಆಧಾರ್‌ ಕಾರ್ಡ್‌ ನೀಡುವ ಎಲ್ಲಾ ರೀತಿಯ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದ್ದರು.

ಮನೆಗೆ ಹೋಗಿ ಆಧಾರ್‌ ನಂಬರ್‌ ನೀಡಿದ ಅಧಿಕಾರಿಗಳು: ಸಚಿವರ ಸೂಚನೆಗಳು ಎಷ್ಟು ಪ್ರಭಾವ ಬೀರಿತ್ತೆಂದರೆ ಅದೇ ದಿನ ಯುಐಡಿಎಐ (ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ) ತಂಡ ಜೋಸಿಮೋಳ್‌ ಪಿ ಜೋಸ್ ಅವರ ಮನೆಗೆ ತೆರಳಿತ್ತು. ತಂಡವು ಬಯೋಮೆಟ್ರಿಕ್ ಗುರುತಿಸುವಿಕೆಗಾಗಿ ಫಿಂಗರ್‌ಪ್ರಿಂಟ್‌ಗಳನ್ನು ಹೊರತುಪಡಿಸಿ ಪರ್ಯಾಯ ಮಾರ್ಗಗಳನ್ನು ಬಳಸಿ ಆಧಾರ್ ಸಂಖ್ಯೆಯನ್ನು ರಚಿಸಿತು. ತಕ್ಷಣ ತಂಡವು ಜೋಸಿಮೋಳ್ ಗೆ ಆಧಾರ್ ಸಂಖ್ಯೆಯನ್ನು ನೀಡಿತು. ಜೋಸಿಮೋಳ್‌ ಅವರ ತಾಯಿ ಬೆಂಬಲ ಮತ್ತು ಸಹಾಯಕ್ಕಾಗಿ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಆಧಾರ್ ನೆರವಿನಿಂದ ಅವರ ಮಗಳು ಈಗ ಸಾಮಾಜಿಕ ಭದ್ರತಾ ಪಿಂಚಣಿ ಮತ್ತು ಕೈವಲ್ಯ, ಅಂಗವಿಕಲರ ಪುನರ್ವಸತಿ ಯೋಜನೆ ಸೇರಿದಂತೆ ವಿವಿಧ ಸವಲತ್ತುಗಳು ಮತ್ತು ಸೇವೆಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ರಾಜೀವ್ ಚಂದ್ರಶೇಖರ್ ಈ ಬಗ್ಗೆ ಮಾತನಾಡಿದ್ದು, ಆಧಾರ್ ಪರ್ಯಾಯ ಬಯೋಮೆಟ್ರಿಕ್ ಅಳವಡಿಸಿಕೊಳ್ಳುವ ಮೂಲಕ ಅಂಗವಿಕಲರಿಗೆ ಸಹಾಯ ಮಾಡಬೇಕು ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ, ಸಚಿವ ರಾಜೀವ್ ಚಂದ್ರಶೇಖರ್ ಅವರು, "ಜೋಸಿಮೋಳ್‌ ಪಿ ಜೋಸ್ ಅವರಂತಹವರಿಗೆ ಅಥವಾ ಮಸುಕಾದ ಬೆರಳಚ್ಚು ಅಥವಾ ಅಂತಹುದೇ ವಿಕಲಚೇತನರಿಗೆ ಪರ್ಯಾಯ ಬಯೋಮೆಟ್ರಿಕ್ಸ್ ತೆಗೆದುಕೊಳ್ಳುವ ಮೂಲಕ ಆಧಾರ್ ನೀಡುವಂತೆ ಎಲ್ಲಾ ಆಧಾರ್ ಸೇವಾ ಕೇಂದ್ರಗಳಿಗೆ ಪ್ರಮಾಣಿತ ಸಲಹೆಗಳನ್ನು ಈಗಾಗಲೇ ಸರ್ಕಾರದ ವತಿಯಿಂದ ಕಳಿಸಲಾಗಿದೆ' ಎಂದು ಹೇಳಿದರು.

ಮದುವೆಯಾಗಿದ್ದಾರೆ ಎಂಬ ಕಾರಣಕ್ಕೆ ಆಧಾರ್‌ ದತ್ತಾಂಶ ಪತ್ನಿಗೂ ಕೊಡಲಾಗದು; ಹೈಕೋರ್ಟ್‌

ಯುಐಡಿಎಐ ಬಯೋಮೆಟ್ರಿಕ್ ವಿನಾಯಿತಿ ದಾಖಲಾತಿ ಮಾರ್ಗಸೂಚಿಗಳನ್ನು 1 ಆಗಸ್ಟ್ 2014 ರಂದು ಬಿಡುಗಡೆ ಮಾಡಿದೆ. ಬೆರಳಚ್ಚುಗಳೇ ಕಾಣಿಸದೇ ಇರುವ, ಬೆರಳುಗಳೇ ಇಲ್ಲದ ವ್ಯಕ್ತಿಗಳ ಆಧಾರ್‌ ನೋಂದಣಿಗೆ ಯಾವ ರೀತಿಯ ಪರ್ಯಾಯ ಬಯೋಮೆಟ್ರಿಕ್ಸ್‌ ಮಾರ್ಗಗಳನ್ನು ಬಳಸಬೇಕು ಎನ್ನುವುದನ್ನು ಅದರಲ್ಲಿ ವಿವರಿಸಲಾಗಿದೆ. ಹಾಗೇನಾದರೂ ಇದ್ದಲ್ಲಿ, ಅಂಥ ವ್ಯಕ್ತಿಯ ಕಣ್ಣಿನ ಸ್ಕ್ಯಾನಿಂಗ್‌ ಮೂಲಕ ಮಾತ್ರವೇ ಆಧಾರ್‌ ಸಂಖ್ಯೆ ನೀಡಬಹುದು. ವ್ಯಕ್ತಿಯು ಬೆರಳು ಮತ್ತು ಐರಿಸ್ ಬಯೋಮೆಟ್ರಿಕ್ಸ್ ಎರಡನ್ನೂ ಒದಗಿಸಲು ಸಾಧ್ಯವಾಗದಿದ್ದರೆ, ಅವನು ಎರಡನ್ನೂ ಸಲ್ಲಿಸದೆ ನೋಂದಾಯಿಸಿಕೊಳ್ಳಬಹುದು. ಅಂತಹ ವ್ಯಕ್ತಿಗಳಿಗೆ, ಬಯೋಮೆಟ್ರಿಕ್ ವಿನಾಯಿತಿ ದಾಖಲಾತಿ ಮಾರ್ಗಸೂಚಿಗಳ ಅಡಿಯಲ್ಲಿ, ಲಭ್ಯವಿರುವ ಬಯೋಮೆಟ್ರಿಕ್‌ಗಳೊಂದಿಗೆ ಹೆಸರು, ಲಿಂಗ, ವಿಳಾಸ ಮತ್ತು ಜನ್ಮ ದಿನಾಂಕವನ್ನು ಸೆರೆಹಿಡಿಯಬೇಕು ಎಂದು ಹೇಳಲಾಗಿದೆ.

10 ವರ್ಷಗಳ ಹಿಂದೆ ಆಧಾರ್ ಮಾಡಿಸಿದ್ದರೆ ಅಪ್ಡೇಟ್ ಕಡ್ಡಾಯ, ಡಿ.14ರ ಒಳಗೆ ಆನ್‌ಲೈನ್ ನಲ್ಲೇ ನವೀಕರಿಸಿ