ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು 9 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ವಿಪಕ್ಷ ಕಾಂಗ್ರೆಸ್‌, ಬೆಲೆ ಏರಿಕೆ, ನಿರುದ್ಯೋಗ ಮತ್ತು ರೈತರ ಆದಾಯದ ಬಗ್ಗೆ ಮೋದಿ ಸರ್ಕಾರಕ್ಕೆ 9 ಪ್ರಶ್ನೆಯನ್ನು ಕೇಳಿದೆ. 

ನವದೆಹಲಿ (ಮೇ.27): ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು 9 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ವಿಪಕ್ಷ ಕಾಂಗ್ರೆಸ್‌, ಬೆಲೆ ಏರಿಕೆ, ನಿರುದ್ಯೋಗ ಮತ್ತು ರೈತರ ಆದಾಯದ ಬಗ್ಗೆ ಮೋದಿ ಸರ್ಕಾರಕ್ಕೆ 9 ಪ್ರಶ್ನೆಯನ್ನು ಕೇಳಿದೆ. ಅಲ್ಲದೆ, ತನ್ನ ಆಡಳಿತದಲ್ಲಿ ಜನರಿಗೆ ದ್ರೋಹ ಬಗೆದಿರುವ ಮೋದಿ ದೇಶದ ಕ್ಷಮೆ ಕೇಳಬೇಕೆಂದು ಆಗ್ರಹಿಸಿದೆ.

ದೆಹಲಿಯಲ್ಲಿ ಕಾಂಗ್ರೆಸ್‌ನ ಮುಖ್ಯ ಕಚೇರಿಯಲ್ಲಿ ಕಾಂಗ್ರೆಸ್‌ ನಾಯಕರಾದ ಜೈರಾಮ್‌ ರಮೇಶ್‌, ಪವನ್‌ ಖೇರಾ ಮತ್ತು ಸುಪ್ರಿಯಾ ಶ್ರೀನೇತ್‌ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಜೈರಾಮ್‌ ರಮೇಶ್‌ ಅವರು ‘ನೌ ಸಾಲ್‌ ನೌ ಸವಾಲ್‌’ (9 ವರ್ಷ 9 ಸವಾಲುಗಳು) ಎಂಬ ಮೋದಿ ಆಡಳಿತವನ್ನು ಪ್ರಶ್ನಿಸಿರುವ ಅಥವಾ ಟೀಕಿಸಿರುವಂತ ಕಿರು ಪುಸ್ತಕವನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಜೈರಾಮ್‌ 9 ವರ್ಷದ ಹಿಂದ ಪ್ರಧಾನಿ ಮೋದಿ ಇದೇ ದಿನ ಅಧಿಕಾರ ವಹಿಸಿಕೊಂಡಿದ್ದರು. ಹೀಗಾಗಿ ಅವರಿಗೆ ಪಕ್ಷವು 9 ಪ್ರಶ್ನೆಗಳನ್ನು ಕೇಳುತ್ತಿದ್ದು ಈ ಪ್ರಶ್ನೆಗಳಿಗೆ ಮೋದಿ ಮೌನ ಮುರಿದು ಉತ್ತರಿಸಬೇಕು ಎಂದು ಆಗ್ರಹಿಸಿದರು.

ಕರೆಂಟ್‌ ಬಿಲ್‌ ಕಟ್ಬೇಡಿ, ಮಹಿಳೆಯರು ಬಸ್‌ ಟಿಕೆಟ್‌ ತಗೋಬೇಡಿ: ಬಿಜೆಪಿ, ಜೆಡಿಎಸ್‌ ಕರೆ!

9 ಪ್ರಶ್ನೆಗಳು
1. ಭಾರತದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಏಕೆ ಗಗನಕ್ಕೇರುತ್ತಿದೆ?

2. ಶ್ರೀಮಂತರು ಶ್ರೀಮಂತರಾಗಿ ಬಡವರು ಬಡವರಾಗಿಯೇ ಏಕೆ ಉಳಿದರು?

3. ಆರ್ಥಿಕ ಸಮಸ್ಯೆಗಳ ಹೊರತಾಗಿಯೂ ಪ್ರಧಾನಿ ಮೋದಿ ಅವರ ಸ್ನೇಹಿತರಿಗೆ ಸಾರ್ವಜನಿಕ ಆಸ್ತಿಗಳನ್ನು ಏಕೆ ಮಾರಾಟ ಮಾಡಲಾಗುತ್ತಿದೆ?

4. ಮೂರು ‘ಕಪ್ಪು’ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಾಗ ರೈತರೊಂದಿಗೆ ಮಾಡಿಕೊಂಡ ಒಪ್ಪಂದಗಳನ್ನು ಏಕೆ ಈಡೇರಿಸಿಲ್ಲ ಮತ್ತು ಕಾನೂನಾತ್ಮಕವಾಗಿ ಕನಿಷ್ಠ ಬೆಂಬಲ ಬೆಲೆಯನ್ನು ಏಕೆ ಜಾರಿಗೊಳಿಸಿಲ್ಲ?

5. ಕಳೆದ 9 ವರ್ಷಗಳಲ್ಲಿ ರೈತರ ಆದಾಯವೇಕೆ ದ್ವಿಗುಣಗೊಂಡಿಲ್ಲ?

6. ನಿಮ್ಮ ಸ್ನೇಹಿತ ಅದಾನಿ ಲಾಭಕ್ಕಾಗಿ ಎಲ್‌ಐಸಿ ಮತ್ತು ಎಸ್‌ಬಿಐನಲ್ಲಿರುವ ಜನರು ಕಷ್ಟಪಟ್ಟು ಸಂಪಾದಿಸಿದ ಉಳಿತಾಯವನ್ನೇಕೆ ಪ್ರಧಾನಿಯವರು ಅಪಾಯಕ್ಕೆ ತಳ್ಳುತ್ತಿದ್ದಾರೆ?

7. ಕಳ್ಳರನ್ನು ಏಕೆ ತಪ್ಪಿಸಿಕೊಳ್ಳಲು ಬಿಡುತ್ತೀರಿ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಏಕೆ ಮೌನವಾಗಿದ್ದೀರಿ ಮತ್ತು ಭಾರತೀಯರನ್ನೇಕೆ ಕಷ್ಟಕ್ಕೆ ದೂಡುತ್ತೀರಿ?

8. 2022ರಲ್ಲಿ ಚೀನಾಕ್ಕೆ ಕ್ಲೀನ್‌ ಚಿಟ್‌ ನೀಡಿದ್ದರೂ ಚೀನಾ ಏಕೆ ಭಾರತದ ಭೂಪ್ರದೇಶಗಳನ್ನು ಆಕ್ರಮಿಸಿಕೊಳ್ಳುವುದುನ್ನು ಮುಂದುವರೆಸಿದೆ?

9. ಮಹಿಳೆಯರು, ದಲಿತರು, ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆ ನೀವೇಕೆ ಮೌನವಾಗಿದ್ದೀರಿ?