'ಮಹಾ' ಸರ್ಕಾರ ರಚನೆ ವೇಳೆ 300 ರೈತರ ಆತ್ಮಹತ್ಯೆ!
ಪಕ್ಷಗಳ ಅಧಿಕಾರ ಕಿತ್ತಾಟ: ನವೆಂಬರ್ನಲ್ಲಿ 300 ಮಹಾ ರೈತರ ಆತ್ಮಹತ್ಯೆ| ಅಕಾಲಿಕ ಮಳೆಯಿಂದಾಗಿ ಶೇ.70ರಷ್ಟುಬೆಳೆ ನಾಶ
ಮುಂಬೈ[ಜ.04]: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಕಸರತ್ತು ಹಾಗೂ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರೆಚಾಟ ನಡೆಯುತ್ತಿರುವ ವೇಳೆಯೇ, ನವೆಂಬರ್ ತಿಂಗಳಿನಲ್ಲಿ ರಾಜ್ಯದಲ್ಲಿ ಬರೋಬ್ಬರಿ 300 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕಾಲಿಕ ಮಳೆಯಿಂದಾಗಿ ಶೇ.70ರಷ್ಟುಬೆಳೆ ನಾಶವಾಗಿದ್ದರಿಂದ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಹಿಂದೆ 2015ರಲ್ಲಿ ಕೂಡ ಇಷ್ಟೇ ಸಂಖ್ಯೆಯ ರೈತರು ನೇಣಿಗೆ ಕೊರಳೊಡ್ಡಿದ್ದರು. ಕಳೆದ ಬಾರಿಗೆ ಹೋಲಿಸಿದರೆ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಶೇ.61ರಷ್ಟುಹೆಚ್ಚಳವಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ 186 ರೈತರು ಆತ್ಮಹತ್ಯೆಗೆ ಶರಣಾದರೆ, ನವೆಂಬರ್ನಲ್ಲಿ 300 ಮಂದಿ ಬಲಿಯಾಗಿದ್ದಾರೆ.
ಬರ ಪೀಡಿತ ಮರಾಠವಾದ ಪ್ರದೇಶದಲ್ಲಿ 120 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಮಾನ್ಯವಾಗಿ ಅತೀ ಹೆಚ್ಚು ರೈತರು ಬಲಿಯಾಗುತ್ತಿದ್ದ ವಿದರ್ಭ ಪ್ರದೇಶದಲ್ಲಿ 112 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. 2019ರ ಜನವರಿಯಿಂದ ನವೆಂಬರ್ವರೆಗೆ 2,532 ರೈತರು ಆತ್ಮಹತ್ಯೆ ಮಾಡಿಕೊಂಡರೆ ಇದೇ ಅವಧಿಯಲ್ಲಿ 2018ರಲ್ಲಿ 2,518 ಮಂದಿ ರೈತರು ಪ್ರಾಣತ್ಯಾಗ ಮಾಡಿದ್ದರು.