ದರ್ಶನ್ ಭೇಟಿಗೆ, ಪವಿತ್ರಾ ಗೌಡ ಪರಿಪರಿಯಾಗಿ ಬೇಡಿಕೊಂಡರೂ ಡಿಜಿಪಿ ಅಲೋಕ್ ಕುಮಾರ್ ನಿರಾಕರಿಸಿದ್ದೇಕೆ!
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ, ಆರ್ಥಿಕ ಸಂಕಷ್ಟದಲ್ಲಿರುವ ಪವಿತ್ರಾ ಗೌಡ ಅವರು ದರ್ಶನ್ ಭೇಟಿಗಾಗಿ ಹರಸಾಹಸ ಪಡುತ್ತಿದ್ದಾರೆ. ಆದರೆ, ಪವಿತ್ರಾ ಮೇಲೆಯೇ ದರ್ಶನ್ ಕೆಂಡಾಮಂಡಲವಾಗಿದ್ದಾರೆ.

ದರ್ಶನ್ ಭೇಟಿಗೆ ಪರದಾಡುತ್ತಿರುವ ಪವಿತ್ರಾ
ಬೆಂಗಳೂರು (ಡಿ.19): ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ವಿಚಾರಣೆ (Trial) ನ್ಯಾಯಾಲಯದಲ್ಲಿ ಅಧಿಕೃತವಾಗಿ ಆರಂಭವಾಗುತ್ತಿದ್ದಂತೆ, ಪರಪ್ಪನ ಅಗ್ರಹಾರ ಮತ್ತು ಬಳ್ಳಾರಿ ಜೈಲಿನಲ್ಲಿರುವ ಆರೋಪಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಈ ಪೈಕಿ ಎ-1 ಆರೋಪಿ ಪವಿತ್ರಾ ಗೌಡಗೆ ಸಂಕಷ್ಟಗಳು ಹೆಚ್ಚಾಗಿದ್ದು, ಆರ್ಥಿಕ ನೆರವಿಗಾಗಿ ನಟ ದರ್ಶನ್ ಭೇಟಿಗೆ ಅವರು ನಡೆಸುತ್ತಿರುವ ಸರ್ವ ಪ್ರಯತ್ನಗಳೂ ವಿಫಲವಾಗುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆದರಿದ ಪವಿತ್ರಾ ಗೌಡ
ಈ ಪ್ರಕರಣದ ವಿಚಾರಣೆ ಆರಂಭವಾಗಿರುವುದರಿಂದ ಸಾಕ್ಷ್ಯಗಳ ಮುಂದೆ ತನ್ನನ್ನು ತಾನು ಸಮರ್ಥಿಸಿಕೊಳ್ಳುವುದು ಪವಿತ್ರಾ ಗೌಡಗೆ ಸವಾಲಾಗಿದೆ. ಅಷ್ಟೇ ಅಲ್ಲದೆ, ಜೈಲು ಪಾಲಾದ ನಂತರ ಪವಿತ್ರಾಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಕಾನೂನು ಹೋರಾಟ ನಡೆಸಲು ಹಣದ ಅಗತ್ಯವಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಜೈಲಿಗೆ ಭೇಟಿ ನೀಡಿದ್ದ ಡಿಜಿಪಿ (ಕಾರಾಗೃಹ) ಅಲೋಕ್ ಕುಮಾರ್ ಅವರ ಬಳಿ ಪವಿತ್ರಾ ಗೌಡ ದರ್ಶನ್ ಭೇಟಿಗೆ ಅವಕಾಶ ಕಲ್ಪಿಸಿಕೊಡುವಂತೆ ಕಣ್ಣೀರು ಹಾಕಿದ್ದಾರೆ.
ಪ್ಲೀಸ್ ಸರ್ ಒಮ್ಮೆ ದರ್ಶನ್ ಭೇಟಿ ಮಾಡಿಸಿ
ಡಿಜಿಪಿ ಅಲೋಕ್ ಕುಮಾರ್ ಅವರು ಜೈಲು ಭೇಟಿಗೆ ಆಗಮಿಸಿದಾಗ ಸೆಲ್ನಲ್ಲಿದ್ದ ಪವಿತ್ರಾ ಗೌಡ ಅವರು, 'ಪ್ಲೀಸ್ ಸಾರ್, ಟ್ರಯಲ್ ಶುರುವಾಗಿದೆ, ಒಮ್ಮೆ ದರ್ಶನ್ ಭೇಟಿ ಮಾಡಿಸಿ, ನನ್ನ ಕಷ್ಟ ಹೇಳಿಕೊಳ್ಳಬೇಕು' ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಅಲೋಕ್ ಕುಮಾರ್ ಕಾನೂನಿನ ಚೌಕಟ್ಟಿನಲ್ಲಿ ಅವಕಾಶವಿದೆಯೇ ಎಂದು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ದರ್ಶನ್ 'ಡೋಂಟ್ ಕೇರ್'
ಪವಿತ್ರಾ ಗೌಡ ಜೈಲಿನ ಸಿಬ್ಬಂದಿಗಳ ಮೂಲಕ ದರ್ಶನ್ಗೆ ಹಲವು ಸಂದೇಶಗಳನ್ನು ರವಾನಿಸಿದ್ದಾರೆ. 'ಕಾನೂನು ಹೋರಾಟಕ್ಕೆ 20 ಲಕ್ಷ ರೂಪಾಯಿ ಹಣದ ಸಹಾಯ ಬೇಕು' ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನಲಾಗಿದೆ.
ಪವಿತ್ರಾ ಮೇಲೆ ದರ್ಶನ್ ಕೆಂಡಾಮಂಡಲ
ಆದರೆ, ಇದಕ್ಕೆ ದರ್ಶನ್ ಮಾತ್ರ ಪವಿತ್ರಾ ಗೌಡ ಮೇಲೆ ಕೆಂಡಾಮಂಡಲವಾಗಿದ್ದಾರೆ. 'ನಿನ್ನಿಂದಲೇ ನಾನು ಇಂದು ಈ ಪರಿಸ್ಥಿತಿಗೆ ಬಂದಿದ್ದೇನೆ' ಎಂಬ ಆಕ್ರೋಶ ಹೊರಹಾಕಿರುವ ದರ್ಶನ್, ಯಾವುದೇ ಕಾರಣಕ್ಕೂ ಪವಿತ್ರಾರನ್ನು ಭೇಟಿಯಾಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ ಎನ್ನಲಾಗಿದೆ.
ಒಂದೂವರೆ ದಶಕದ ಸ್ನೇಹ ತುಂಡಾಗುವ ಆತಂಕ
ತನ್ನನ್ನು ಭೇಟಿ ಮಾಡಲು ಬರುವ ಆಪ್ತರ ಬಳಿಯೂ ದರ್ಶನ್ ಕೇವಲ ಕಾನೂನು ಹೋರಾಟದ ಬಗ್ಗೆ ಮಾತ್ರ ಚರ್ಚಿಸುತ್ತಿದ್ದು, ಪವಿತ್ರಾ ವಿಚಾರ ಬಂದಾಗ ಮೌನವಾಗುತ್ತಿದ್ದಾರೆ ಅಥವಾ ಸಿಡಿಮಿಡಿಗೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ, ಒಂದೂವರೆ ದಶಕಗಳ ಸ್ನೇಹ ಈಗ ಕೊಲೆ ಪ್ರಕರಣದ ತನಿಖೆಯ ಹಂತದಲ್ಲಿ ಜೈಲಿನ ಗೋಡೆಗಳ ನಡುವೆ ಕಮರಿಹೋಗುವ ಹಂತಕ್ಕೆ ತಲುಪಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

