ಬೆಂಗಳೂರು ಗಲಭೆ: ಅಮಾಯಕರನ್ನು ಬಂಧಿಸಬೇಡಿ, ಮುಸ್ಲಿಂ ಮುಖಂಡರು
ಬೆಂಗಳೂರು(ಆ.19): ಡಿಜೆಹಳ್ಳಿ, ಕೆಜಿಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸದಂತೆ ಕಾಂಗ್ರೆಸ್ ನಾಯಕರನ್ನು ಒಳಗೊಂಡ ಮುಸ್ಲಿಂ ಮುಖಂಡರ ನಿಯೋಗ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನು ಭೇಟಿಯಾಗಿ ಮನವಿ ಮಾಡಿದೆ.
ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ ನಿಯೋಗವು ಗಲಭೆ ಕುರಿತು ಪಾರದರ್ಶಕ ತನಿಖೆ ನಡೆಸಬೇಕು. ಗಲಭೆಗೆ ಸಂಬಂಧಿಸಿದಂತೆ ಆರೋಪಿಗಳ ಜತೆಯಲ್ಲಿ ಅಮಾಯಕರನ್ನು ಬಂಧಿಸಲಾಗಿದ್ದು, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಎಂದು ಒತ್ತಾಯಿಸಿದ ಮುಸ್ಲಿಂ ಮುಖಂಡರ ನಿಯೋಗ
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ದುರಾದೃಷ್ಟಕರ. ಶಾಸಕ ಅಖಂಡ ಶ್ರೀನಿವಾಸ್ಮೂರ್ತಿ ಅವರು ಒಳ್ಳೆಯವರು. ಇದು ಜಾತಿ ಗಲಭೆಯಲ್ಲ. ಬದಲಾಗಿ ಫೇಸ್ಬುಕ್ನಲ್ಲಿ ಪ್ರವಾದಿ ಮಹಮದ್ ಪೈಗಂಬರ್ ಅವರನ್ನು ನಿಂದನೆ ಮಾಡಿದ ಕಾರಣಕ್ಕಾಗಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ನಡೆಯದಂತೆ ಪೊಲೀಸರು ತಕ್ಷಣ ಕ್ರಮಕೈಗೊಳ್ಳಲಿಲ್ಲ. ಆದರೂ ಈ ರೀತಿಯ ಗಲಭೆ ನಡೆಸುವುದು ಸರಿಯಲ್ಲ ಎಂದು ಹೇಳಿದ ವಿಧಾನ ಪರಿಷತ್ತು ಸದಸ್ಯ ಸಿ.ಎಂ.ಇಬ್ರಾಹಿಂ
ಗಲಾಟೆಗೆ ಕಾರಣವಾಗಿದ್ದು ಫೇಸ್ಬುಕ್ನಲ್ಲಿ ಪ್ರವಾದಿ ಅವರನ್ನು ನಿಂದಿಸಿ ಹಾಕಲಾಗಿದ್ದ ಪೋಸ್ಟ್. ಹೀಗಾಗಿ ಅಲ್ಲಿಂದಲೇ ಮೊದಲು ಕ್ರಮ ಶುರುವಾಗಬೇಕು ತಪ್ಪು ಮಾಡಿದವರು ಯಾರೇ ಆಗಿದ್ದರೂ ಶಿಕ್ಷೆ ಅನುಭವಿಸಬೇಕು. ಆದರೆ ಅಮಾಯಕರನ್ನು ಬಂಧಿಸಬೇಡಿ ಎಂದು ಪೊಲೀಸರ್ ಆಯುಕ್ತರಲ್ಲಿ ಮನವಿ ಮಾಡಿದ್ದೇವೆ ಎಂದು ತಿಳಿಸಿದ ಶಾಸಕ ಎನ್.ಎ.ಹ್ಯಾರೀಸ್
ಗೋಲಿಬಾರ್ನಲ್ಲಿ ಮೃತಪಟ್ಟವರಿಗೆ ಶಾಸಕ ಜಮೀರ್ ಅಹಮ್ಮದ್ ಹಣ ನೀಡಲು ಹೊರಟ್ಟಿದ್ದು ಅವರ ವೈಯಕ್ತಿಕ ನಿರ್ಧಾರವೇ ಹೊರತ ಪಕ್ಷದ ನಿಲುವಲ್ಲ ಎಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್
ನಿಯೋಗದಲ್ಲಿ ರಾಜ್ಯಸಭಾ ಸದಸ್ಯ ಸಯ್ಯದ್ ನಾಸೀರ್ ಹುಸೇನ್, ಶಾಸಕ ತನ್ವೀರ್ ಶೇಠ್ ಸೇರಿದಂತೆ ಇತರ ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.