ಕರ್ನಾಟಕದ 7 ಅದ್ಭುತಗಳ ಅಧಿಕೃತ ಪಟ್ಟಿ ಬಿಡುಗಡೆ, ಇಲ್ಲಿದೆ ಸಪ್ತ ತಾಣಗಳ ಸುಂದರ ಲೋಕ!
ಕಳೆದ ಒಂದು ವರ್ಷದಿಂದ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡ ಪ್ರಭ ಕರ್ನಾಟಕದ 7 ಅದ್ಭುತಗಳನ್ನು ಗುರುತಿಸಲು ಅಭಿಯಾನ ಆರಂಭಿಸಿತ್ತು. ರಾಜ್ಯದ ಜನತೆ ಸಹಕಾರದೊಂದಿಗೆ ಇದೀಗ ಕರ್ನಾಟಕದ 7 ಅದ್ಭುತಗಳ ಅಧಿಕೃತ ಪಟ್ಟಿ ಘೋಷಣೆಯಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕರ್ನಾಟಕದ 7 ಅದ್ಭುತಗಳ ಪಟ್ಟಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಸಾವಿರಾರು ಅದ್ಭುತಗಳಿವೆ. ಇದರಲ್ಲಿ 7 ಅದ್ಭುತಗಳನ್ನು ಗುರುತಿಸಲು ಸುದೀರ್ಘ ಅಭಿಯಾನ ನಡೆಸಲಾಗಿತ್ತು.ಅಧಿಕೃತವಾಗಿ ಕರ್ನಾಟಕದ 7 ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದ ತಾಣಗಳು ಯಾವುದು? ಅವುಗಳ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ವಿವರ
ಕರ್ನಾಟಕದ ಅತ್ಯಂತ ಸುಂದರ ನಾಡು. ಭಾರತದ ಒಂದೊಂದು ರಾಜ್ಯದಲ್ಲಿ ಒಂದೊಂದು ವಿಶೇಷತೆ, ತಾಣಗಳಿವೆ. ಆದರೆ ಕರ್ನಾಟಕದಲ್ಲಿ ಭಾರತದ ಎಲ್ಲಾ ವಿಶೇಷತೆ ಹಾಗೂ ತಾಣಗಳಿವೆ. ಇದೇ ಕಾರಣಕ್ಕೆ ಕರ್ನಾಟಕ ಒಂದು ರಾಜ್ಯವಾದರೂ ಹಲವು ಜಗತ್ತು ಒಳಗೊಂಡಿದೆ. ಹಂಪಿ, ಹಳೇಬೀಡು, ಬೇಲೂರು, ಐಹೊಳೆ, ಪಟ್ಟದಕಲ್ಲು, ಶಿಲ್ಪಕಲಾ ವೈಭವದ ದೇವಾಲಯಗಳು, ಮೈಸೂರು ಅರಮನೆ, ಚಿತ್ರದುರ್ಗದ ಕಲ್ಲಿನ ಕೋಟೆ, ಬಾದಾಮಿ ಕೋಟೆ, ವಿಜಯಪುರದ ಗೋಳ ಗುಮ್ಮಟ, ಸುಂದರ ಕರಾವಳಿತೀರ, ದುರ್ಗಮ ಕಾನನಗಳು, ರಮಣೀಯ ಜಲಪಾತಗಳು, ಸಮುದ್ರ ತೀರ ಸೇರಿದಂತೆ ಸಾವಿರಾರು ಅದ್ಭುತಗಳನ್ನು ಕರ್ನಾಟಕ ಹೊಂದಿದೆ.ಇದರಲ್ಲಿ 7 ಅದ್ಭುತಗಳನ್ನು ಹುಡುಕಿ ಇದೀಗ ಅಧಿಕೃತ ಪಟ್ಟಿ ಘೋಷಿಸಲಾಗಿದೆ.
1. ಹಿರೇಬೆಣಕಲ್ ಶಿಲಾಸಮಾಧಿಗಳು: ಕ್ರಿ.ಪೂ.800ರಿಂದ 200ರವರೆಗಿನ ಕಾಲದ್ದು ಎನ್ನಲಾದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿರುವ ಪ್ರಾಗೈತಿಹಾಸಿಕ ತಾಣವನ್ನು ‘ಬೃಹತ್ ಶಿಲಾಯುಗದ ಅದ್ಭುತ’ ಎಂದು ಘೋಷಿಸಲಾಗಿದೆ.
2. ಹಂಪಿ: 14ರಿಂದ 16ನೇ ಶತಮಾನದ ನಡುವೆ ನಿರ್ಮಾಣಗೊಂಡ ‘ಭವ್ಯ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಸಾರುವ ಈಗಿನ ವಿಜಯನಗರ ಜಿಲ್ಲೆಯ ‘ಹಂಪಿ’ಯನ್ನು ‘ಪುರಾತತ್ವ ಅದ್ಭುತ’ ಎಂದು ಘೋಷಿಸಲಾಗಿದೆ.
3. ಗೊಮ್ಮಟೇಶ್ವರ: ಈಗಿನ ಹಾಸನ ಜಿಲ್ಲೆ ಶ್ರವಣಬೆಳಗೊಳದ ವಿಂಧ್ಯಗಿರಿಯ ನೆತ್ತಿಯಲ್ಲಿ 10ನೇ ಶತಮಾನದಲ್ಲಿ ಸ್ಥಾಪನೆಯಾದ 57 ಅಡಿಯ ಭವ್ಯ ಗೊಮ್ಮಟೇಶ್ವರ ಪ್ರತಿಮೆಯನ್ನು ‘ತಾತ್ವಿಕ ಅದ್ಭುತ’ವೆಂದು ಘೋಷಿಸಲಾಗಿದೆ.
4. ಗೋಲಗುಮ್ಮಟ: 17ನೇ ಶತಮಾನದಲ್ಲಿ ಆಗಿನ ಬಿಜಾಪುರ (ಹಾಲಿ ವಿಜಯಪುರ) ಸುಲ್ತಾನ ಮೊಹಮ್ಮದ್ ಆದಿಲ್ ಶಾಹ್ ನಿರ್ಮಿಸಿದ ಬೃಹತ್ ಗೋಲಗುಮ್ಮಟವು ‘ವಾಸ್ತು ವಿಜ್ಞಾನ ಅದ್ಭುತ’ವೆಂಬ ಗೌರವಕ್ಕೆ ಪಾತ್ರವಾಗಿದೆ.
5. ಮೈಸೂರು ಅರಮನೆ: 19-20ನೇ ಶತಮಾನದಲ್ಲಿ ಒಡೆಯರ್ ರಾಜವಂಶಸ್ಥರಿಂದ ನಿರ್ಮಾಣಗೊಂಡ ಮೈಸೂರಿನ ಜಗದ್ವಿಖ್ಯಾತ ಅಂಬಾ ವಿಲಾಸ ಅರಮನೆಯನ್ನು ‘ರಾಜಪರಂಪರಾ ಅದ್ಭುತ’ ಎಂದು ಘೋಷಿಸಲಾಗಿದೆ.
6. ಜೋಗ ಜಲಪಾತ: ಭಾರತದಲ್ಲೇ ಅತಿ ಸುಂದರ ಎನಿಸಿರುವ, 830 ಅಡಿ ಎತ್ತರದಿಂದ ಧುಮುಕುವ ಶಿವಮೊಗ್ಗ ಜಿಲ್ಲೆಯ ವಿಶ್ವಪ್ರಸಿದ್ಧ ಜೋಗ ಜಲಪಾತವನ್ನು ‘ನೈಸರ್ಗಿಕ ಅದ್ಭುತ-ನೆಲ’ ಎಂದು ಘೋಷಿಸಲಾಗಿದೆ.
7. ನೇತ್ರಾಣಿ ದ್ವೀಪ: ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರ ಬಳಿಯ ಅರಬ್ಬಿ ಸಮುದ್ರದ ನಡುವೆ ಪ್ರೀತಿಯ ಸಂಕೇತದಂತೆ ಹೃದಯಾಕಾರದಲ್ಲಿರುವ ನೇತ್ರಾಣಿ ದ್ವೀಪವನ್ನು ‘ನೈಸರ್ಗಿಕ ಅದ್ಭುತ-ಜಲ’ ಎಂದು ಘೋಷಿಸಲಾಗಿದೆ.
ರಾಜ್ಯದ ಜನರು ಮತಗಳ ಮೂಲಕ ತಮ್ಮ ತಮ್ಮ ಊರಿನ ಅದ್ಭುತಗಳಿಗೆ ಮತ ಚಲಾಯಿಸಿದ್ದರು. ಲಕ್ಷ ಲಕ್ಷ ಮತಗಳು ಒಂದೊಂದು ತಾಣಕ್ಕೆ ಸಿಕ್ಕಿದೆ. ಈ ಕರ್ನಾಟಕದ 7 ಅದ್ಭುತಗಳನ್ನು ಬೊಮ್ಮಾಯಿ ಘೋಷಣೆ ಮಾಡಿದರು.
ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ನೃತ್ಯ ಪ್ರಕಾರಗಳು ಮೇಳೈಸಿತ್ತು. ವೀರಗಾಸೆ ಸೇರಿದಂತೆ ಕರ್ನಾಟಕದ ಸೊಗಡಿನ ಹಲವು ಪ್ರಕಾರಗಳು ಕಾರ್ಯಕ್ರಮ ಅಂದ ಹೆಚ್ಚಿಸಿತು. ಬೆಂಗಳೂರಿನ ಖಾಸಗಿ ಹೊಟೆಲ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಕ್ಷೇತ್ರದ ಗಣ್ಯರು ಉಪಸ್ಥಿತಿರಿದ್ದರು.