ಬೆಂಗಳೂರಿನ 7 ರಸ್ತೆಗಳಲ್ಲಿ ಶೀಘ್ರ ಸ್ಮಾರ್ಟ್ ಪಾರ್ಕಿಂಗ್: ಮೇಯರ್ ಗೌತಮ್ ಕುಮಾರ್
ಬೆಂಗಳೂರು(ಸೆ.06): ನಗರದ ಎಂ.ಜಿ.ರಸ್ತೆ, ವಿಠ್ಠಲ್ ಮಲ್ಯ ರಸ್ತೆ ಸೇರಿದಂತೆ ನಗರದ ಇನ್ನೂ ಏಳು ರಸ್ತೆಗಳಲ್ಲಿ ಶೀಘ್ರ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಶನಿವಾರ ನಗರದ ವಿಠ್ಠಲ್ ಮಲ್ಯ ರಸ್ತೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಪಾರ್ಕಿಂಗ್ ಕಾಮಗಾರಿ ಹಾಗೂ ಲೌರಿ ಜಂಕ್ಷನ್ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೆ ನಿರ್ಮಿಸುತ್ತಿರುವ ಪ್ರತ್ಯೇಕ ಬಸ್ ಪಥ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಗೌತಮ್ ಕುಮಾರ್
ನಗರದಲ್ಲಿ ಕೇಂದ್ರ ಭಾಗದ ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ಪಾಲಿಕೆಯು ಆಯ್ದ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿ ತರಲಾಗುತ್ತಿದೆ. ಈಗಾಗಲೇ ಕಸ್ತೂರ ಬಾ ರಸ್ತೆಯಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾಯಾಗಿದೆ. ಇದರ ಬೆನ್ನಲ್ಲೇ ಎಂ.ಜಿ.ರಸ್ತೆ, ವಿಠ್ಠಲ್ ಮಲ್ಯ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಚರ್ಚ್ ರಸ್ತೆ ಸೇರಿದಂತೆ ಇನ್ನೂ ಏಳು ರಸ್ತೆಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗುವುದು. ಇನ್ನುಳಿದ ರಸ್ತೆಗಳಲ್ಲಿ ಹಂತ-ಹಂತವಾಗಿ ಈ ವ್ಯವಸ್ಥೆ ಜಾರಿಗೊಳ್ಳಲಿದೆ ಎಂದರು.
ಕಸ್ತೂರ ಬಾ ರಸ್ತೆಯಲ್ಲಿ ಸುಮಾರು 700 ಮೀಟರ್ ಉದ್ದದ ರಸ್ತೆಯ ಒಂದು ಭಾಗದಲ್ಲಿ ದ್ವಿಚಕ್ರ ವಾಹನ ಹಾಗೂ ಮತ್ತೊಂದು ಭಾಗದಲ್ಲಿ ಕಾರು ಪಾರ್ಕಿಂಗ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ಡಿಜಿಟಲ್ ಶುಲ್ಕ ಪಾವತಿಸುವ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ವಾಹನಗಳ ಸುರಕ್ಷತೆಗಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ವಾಹನಗಳನ್ನು ನಿಲ್ಲಿಸುವ ಸ್ಥಳದಲ್ಲಿ ಸೆನ್ಸರ್ ಅಳವಡಿಸಲಾಗಿದ್ದು, ಎಷ್ಟುವಾಹನಗಳು ನಿಂತಿವೆ, ಇನ್ನೂ ಎಷ್ಟುವಾಹನಗಳ ನಿಲುಗಡೆಗೆ ಅವಕಾಶವಿದೆ ಎಂಬ ಮಾಹಿತಿ ತಿಳಿಯಲು ಡಿಜಿಟಲ್ ನಾಮಫಲಕ ಅಳವಡಿಸಲಾಗಿದೆ. ಪಾರ್ಕಿಂಗ್ಗೆ ದರ ನಿಗದಿಪಡಿಸಿದ್ದು ಪಾರ್ಕಿಂಗ್ ಶುಲ್ಕ ಹಾಗೂ ರಸೀದಿ ಪಡೆಯಲು ಸ್ವಯಂಚಾಲಿತ ಯಂತ್ರಗಳನ್ನು ಅಳವಡಿಸಲಾಗಿದೆ. ಸವಾರರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಸಿ ಹಣ ಪಾವತಿಸಬಹುದಾಗಿದೆ. ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯಿಂದ ಪಾಲಿಕೆಗೆ ವಾರ್ಷಿಕ 31.60 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದರು.
ನಗರದಲ್ಲಿ ಹೆಚ್ಚು ವಾಹನ ದಟ್ಟಣೆಯಾಗುವ 12 ರಸ್ತೆಗಳಲ್ಲಿ ಸಾರ್ವಜನಿಕ ಬಸ್ ಸಂಚಾರಕ್ಕಾಗಿ ಪ್ರತ್ಯೇಕ ಬಸ್ ಪಥ ನಿರ್ಮಿಸಲಾಗುತ್ತಿದೆ. ಈ ಪೈಕಿ ಮೊದಲ ಹಂತವಾಗಿ ಲೌರಿ ಜಂಕ್ಷನ್ ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ವರೆಗಿನ 17 ಕಿ.ಮೀ ಉದ್ದದ ರಸ್ತೆಯಲ್ಲಿ 15 ಕೋಟಿ ವೆಚ್ಚದಲ್ಲಿ ಬಸ್ ಸಂಚಾರಕ್ಕಾಗಿ ಪ್ರತ್ಯೇಕ ಪಥವನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ ಮೇಯರ್
ರಸ್ತೆಯ ಎರಡೂ ಕಡೆ 3.5 ಮೀಟರ್ ಜಾಗದಲ್ಲಿ ಬೊಲಾರ್ಡ್ಸ್ ಹಾಗೂ ಕ್ರಾಶ್ ಬ್ಯಾರಿಯರ್ಸ್ಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ರಸ್ತೆಯಲ್ಲಿ ಇನ್ನೆರಡು ಪಥಗಳನ್ನು ಇತರ ವಾಹನಗಳ ಸಂಚಾರಕ್ಕೆ ಬಳಸಬಹುದು. ಕಾಯ್ದಿರಿಸಿದ ಪಥದಲ್ಲಿ ಬಸ್ ಹಾಗೂ ಆಂಬುಲೆಸ್ಸ್ ಹೊರತಾಗಿ ಇತರೆ ವಾಹನಗಳಿಗೆ ಪ್ರವೇಶವಿರುವುದಿಲ್ಲ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.