ಭಾರತದಲ್ಲಿ ಮುಸ್ಲಿಮರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ: ಬೊಮ್ಮಾಯಿ
ಇಡೀ ಜಗತ್ತಿನಲ್ಲಿ ಎಲ್ಲಾದರೂ ಮುಸ್ಲಿಮರು ಸುರಕ್ಷತೆಯಿಂದ ಇದ್ದರೆ ಅದು ಭಾರತದಲ್ಲಿ ಮಾತ್ರ. ಇದನ್ನು ಮೊದಲು ಡಿ.ಕೆ.ಶಿವಕುಮಾರ್ ಅರ್ಥ ಮಾಡಿಕೊಳ್ಳಲಿ ಎಂದು ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ (ಏ.23): ಇಸ್ಲಾಂ ದೇಶಗಳಲ್ಲಿ ಮುಸ್ಲಿಮರ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ಭಾರತದಲ್ಲಿ ಮಾತ್ರ ವೇಗವಾಗಿ ಹೆಚ್ಚಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಿಂದ ಮುಸ್ಲಿಮರನ್ನು ಓಡಿಸಲು ಹುನ್ನಾರ ನಡೆದಿದೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಡೀ ಜಗತ್ತಿನಲ್ಲಿ ಎಲ್ಲಾದರೂ ಮುಸ್ಲಿಮರು ಸುರಕ್ಷತೆಯಿಂದ ಇದ್ದರೆ ಅದು ಭಾರತದಲ್ಲಿ ಮಾತ್ರ. ಇದನ್ನು ಮೊದಲು ಡಿ.ಕೆ. ಶಿವಕುಮಾರ್ ಅರ್ಥ ಮಾಡಿಕೊಳ್ಳಲಿ.
ಅವರ ಜನಸಂಖ್ಯೆ ಅತಿ ವೇಗವಾಗಿ ಬೆಳೆಯುತ್ತಿರುವುದು ಭಾರತ ದೇಶದಲ್ಲಿ ಮಾತ್ರ. ಇಸ್ಲಾಂ ದೇಶದಲ್ಲಿ ಅವರ ಜನಸಂಖ್ಯೆ ಕಡಿಮೆ ಆಗುತ್ತಿದೆ. ಡಿ.ಕೆ.ಶಿವಕುಮಾರ್ ಅವರು ವೋಟಿನ ರಾಜಕಾರಣಕ್ಕಾಗಿ ತುಷ್ಟೀಕರಣಕ್ಕಾಗಿ ಹಾಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಇನ್ನು ಸಾವಿನ ಮನೆಯಲ್ಲಿ ಬಿಜೆಪಿ ರಾಜಕಾರಣ ಮಾಡ್ತಿದೆ ಎಂಬ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದರು.
ನೇಹಾ ಸಾವಿಗೆ ಕಾರಣ ಯಾರು? ಸಾವಿಗೆ ಕಾರಣವಾದ ವ್ಯವಸ್ಥೆ ಯಾವುದು? ಹಾಡುಹಗಲೇ ಕಾಲೇಜು ಕ್ಯಾಂಪಸ್ನಲ್ಲಿ 9 ಬಾರಿ ಇರಿದು ವಿದ್ಯಾರ್ಥಿನಿ ಕೊಲೆ ಮಾಡಿದ್ದಾನೆ. ಇಂಥ ವಾತಾವರಣ ಉಂಟಾಗಲು ಕಾರಣ ಯಾರು? ಅವರಿಗೆ ಕಾನೂನಿನ ಭಯ ಇಲ್ಲ, ಪೊಲೀಸರ ಭಯವಿಲ್ಲ, ಶಿಕ್ಷೆಯ ಭಯವೂ ಇಲ್ಲ. ಅವರಿಗೆ ಸರ್ಕಾರದ ರಕ್ಷಣೆ ಇದೆ. ಅದಕ್ಕೆ ಇಂಥ ಘಟನೆ ನಡೆದಿದೆ.
ವಿದ್ಯಾರ್ಥಿನಿ ಕೊಲೆ ಆದರೂ ಪ್ರತಿಭಟನೆ ಮಾಡಬಾರದು ಎಂದರೆ ಇದು ಸರ್ಕಾರದ ಸರ್ವಾಧಿಕಾರಿ ಮಾನಸಿಕತೆ. ಸರ್ವಾಧಿಕಾರಿ ಮಾನಸಿಕತೆಯಿಂದ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕೋಮು ಗಲಭೆ ಹೆಚ್ಚಾಗಲಿದೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಅಚ್ಷರಿ ವ್ಯಕ್ತಪಡಿಸಿ, ಯಾವ ಪುಣ್ಯಾತ್ಮ ಹೇಳಿದ್ನಪಾ ಎಂದು ಪ್ರಶ್ನಿಸಿದರು.
ಅವರಿಗೆ ರಾಜಕೀಯ ಅನುಭವ ಇನ್ನೂ ಆಗಬೇಕಿದೆ. ಕಾಂಗ್ರೆಸ್ ಅವಧಿಯಲ್ಲಿ ಆದಂತಹ ಕೋಮು ಗಲಭೆಗಳು ದೇಶದಲ್ಲಿರಬಹುದು, ರಾಜ್ಯದಲ್ಲಿರಬಹುದು ಯಾವ ಪಕ್ಷದ ಅವಧಿಯಲ್ಲೂ ಆಗಿಲ್ಲ. ನಮ್ಮ ಕಾಲದಲ್ಲಿ ಯಾವುದೇ ಕೋಮುಗಲಭೆ ನಡೆದಿಲ್ಲ. ಬೇಕಾದರೆ ದಾಖಲೆ ತೆಗೆದು ನೋಡಲಿ ಎಂದು ಸವಾಲು ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.