ವಾರಕ್ಕೊಮ್ಮೆ ಸರ್ಕಾರಿ ನೌಕರರಿಗೆ ಖಾದಿ ಕಡ್ಡಾಯ ಮಾಡಿ: ವಿನಯ್ ಗುರೂಜಿ
First Published Jan 31, 2021, 8:34 AM IST
ಹುಬ್ಬಳ್ಳಿ(ಜ.31): ಸರ್ಕಾರಿ ನೌಕರರು ವಾರಕ್ಕೊಮ್ಮೆಯಾದರೂ ಖಾದಿ ಬಟ್ಟೆಧರಿಸುವುದನ್ನು ಸರ್ಕಾರ ಕಡ್ಡಾಯ ಮಾಡಬೇಕು. ಆಗ ಮಾತ್ರ ಖಾದಿ ಉಳಿಯಲು ಸಾಧ್ಯ ಎಂದು ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ನ ಸಂಸ್ಥಾಪಕ, ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ.

ಖಾದಿ ಗ್ರಾಮೋದ್ಯೋಗ ಉಳಿಯಬೇಕು. ನೇಕಾರರ ಬದುಕು ನೆಮ್ಮದಿಯಿಂದ ಕೂಡಿರಬೇಕೆಂದರೆ ನೌಕರರಿಗೆ ವಾರಕ್ಕೊಮ್ಮೆಯಾದರೂ ಖಾದಿ ಬಟ್ಟೆಧರಿಸುವುದನ್ನು ಕಡ್ಡಾಯಗೊಳಿಸಿ ಆದೇಶಿಸಬೇಕು. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಉಪವಾಸ ಮಾಡಿಯಾದರೂ ಖಾದಿ ನೇಕಾರರ ಉಳಿವಿಗೆ ಶ್ರಮಿಸುತ್ತೇನೆ ಎಂದರು.

ರೈತರ ಶೋಷಣೆ ತಪ್ಪಬೇಕು. ಅವರ ಶೋಷಣೆ ತಪ್ಪಿಸಲು ಹೋರಾಟ ಮಾಡಲು ಸಿದ್ಧ. ದೆಹಲಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. 15 ದಿನಗಳಲ್ಲಿ ಉತ್ತರ ಬಾರದಿದ್ದರೆ, ಅವಶ್ಯಕತೆ ಬಿದ್ದಲ್ಲಿ ದೆಹಲಿಯ ಹೋರಾಟದಲ್ಲಿ ಭಾಗಿಯಗುತ್ತೇನೆ ಎಂದರು.

ರಾಮನ ಮಂದಿರ ನಿರ್ಮಣಕ್ಕೆ ನೆರವು ನೀಡಿದಂತೆ ರೈತರ ಸಂಕಷ್ಟಕ್ಕೂ ಜನರು ಸ್ಪಂದಿಸಬೇಕು ಎಂದು ತಿಳಿಸಿದ ವಿನಯ್ ಗುರೂಜಿ

ದೇವರ ಹುಂಡಿ ಮಾಡಿದಂತೆ ರೈತರ ಹುಂಡಿ ಮಾಡಬೇಕು ಎಂಬ ಕಲ್ಪನೆ ನನ್ನದು. ಮಠ- ಮಾನ್ಯಗಳು ಜಾತಿಗೆ ಸೀಮಿತಗೊಂಡಿವೆ. ಆದರೆ, ನಾನು ಜಾತಿಗೆ ಸೀಮಿತವಾಗುವುದಿಲ್ಲ. ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.