ಲಾಕ್ಡೌನ್ ಇದ್ರೂ ರೈಲ್ವೇ ಸ್ಟೇಷನ್ನಲ್ಲಿ ಜಮಾಯಿಸಿದ್ರು ಸಾವಿರಾರು ಜನ..!
ರೈಲು ಸಂಚಾರ ಶುಕ್ರವಾರದಿಂದ ಆರಂಭವಾಗಲಿದೆ ಎಂಬ ವದಂತಿ ಹರಡಿದ್ದೇ ತಡ ತಂಡೋಪತಂಡವಾಗಿ ರೈಲು ನಿಲ್ದಾಣಕ್ಕೆ ತೆರಳಿದ್ದಾರೆ. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ಇಲ್ಲಿವೆ ಫೋಟೋಸ್
ತಮ್ಮೂರಿಗೆ ತೆರಳಲು ರೈಲು ಸಂಚಾರ ಆರಂಭವಾಗಲಿದೆ ಎಂಬ ವದಂತಿ ನಂಬಿ ಉತ್ತರ ಭಾರತ ಮೂಲದ ಒಂದೂವರೆ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಶುಕ್ರವಾರ ಬೆಳಗ್ಗೆ ನಗರದ ಸೆಂಟ್ರಲ್ ರೈಲು ನಿಲ್ದಾಣದ ಎದುರು ಜಮಾಯಿಸಿ ಆತಂಕ ಸೃಷ್ಟಿಯಾಗಿತ್ತು.
ಲಾಕ್ಡೌನ್ನಿಂದಾಗಿ ಉತ್ತರ ಭಾರತ ಮೂಲದ ಸಾವಿರಾರು ಮಂದಿ ಇನ್ನೂ ಊರಿಗೆ ಹಿಂತಿರುಗಲಾಗದೆ ಮಂಗಳೂರಿನಲ್ಲಿ ಸಿಲುಕಿಕೊಂಡಿದ್ದು, ರೈಲು ಸಂಚಾರ ಆರಂಭವಾಗುವುದನ್ನೇ ಕಾಯುತ್ತಿದ್ದಾರೆ.
ಜಾರ್ಖಂಡ್ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ತಾನ, ಅಸ್ಸಾಂ, ಬಿಹಾರ ಮೂಲದ ಕಾರ್ಮಿಕರು ಇವರಾಗಿದ್ದು, ಲಾಕ್ಡೌನ್ನಿಂದ ಸಾರ್ವಜನಿಕ ಸಾರಿಗೆ ಇಲ್ಲದಿದ್ದರೂ ಮಂಗಳೂರು ಹೊರವಲಯಗಳಿಂದ ಬ್ಯಾಗ್ ಸಮೇತ ಹಲವು ಕಿ.ಮೀ. ನಡೆದುಕೊಂಡೇ ಬಂದಿದ್ದರು.
ರೈಲು ನಿಲ್ದಾಣಕ್ಕೆ ಬಂದಾಗ ರೈಲು ಇಲ್ಲ ಆರಂಭವಾಗಿಲ್ಲ ಎಂಬ ಮಾಹಿತಿ ಲಭಿಸಿತ್ತು. ಇದರಿಂದ ಹತಾಶರಾದ ಕಾರ್ಮಿಕರು ಪ್ರತಿಭಟನೆಗೆ ಮುಂದಾದರು. ಪೊಲೀಸರು- ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆಯಿತು.
ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ, 3 ದಿನದೊಳಗೆ ಊರಿಗೆ ತೆರಳಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲಿಯವರೆಗೆ ಸಂಯಮ ಕಾಯ್ದುಕೊಂಡು ವಾಸ್ತವ್ಯ ಇರುವಲ್ಲಿಗೆ ತೆರಳುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪಿದ ಕಾರ್ಮಿಕರನ್ನು ಕೆಎಸ್ಸಾರ್ಟಿಸಿ ಬಸ್ ಮೂಲಕ ಅವರಿದ್ದ ಸ್ಥಳಗಳಿಗೆ ಕಳುಹಿಸಿಕೊಡಲಾಯಿತು.