ನಂಬುವುದು ಹೇಗೆ ಸಾಧ್ಯ? ಅವರಿಬ್ಬರಿಂದಲೇ ರಕ್ಷಣೆ: ಶಾಸಕ ಜನಾರ್ದನ್ ರೆಡ್ಡಿಗಂಭೀರ ಆರೋಪ
ಮಾಡೆಲ್ ಹೌಸ್ಗೆ ಬೆಂಕಿ ಬಿದ್ದ ಪ್ರಕರಣದಲ್ಲಿ ನಾರಾ ಭರತ್ ರೆಡ್ಡಿ ಕೈವಾಡವಿದೆ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ನಡೆದ ಕಳ್ಳತನ ಪ್ರಕರಣದಲ್ಲೂ ಭರತ್ ರೆಡ್ಡಿ ದುಷ್ಕರ್ಮಿಗಳನ್ನು ರಕ್ಷಿಸಿದ್ದರು. ಬ್ಯಾನರ್ ಗಲಭೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿದ್ದಾರೆ.

ಜಿ-ಸ್ಕ್ವೇರ್ ಲೇಔಟ್ನ ಮಾಡೆಲ್ ಹೌಸ್ ಬೆಂಕಿ ಅವಘಡ ಪ್ರಕರಣ
ನಗರ ಹೊರವಲಯದ ಜಿ-ಸ್ಕ್ವೇರ್ ಲೇಔಟ್ನ ಮಾಡೆಲ್ ಹೌಸ್ ಬೆಂಕಿ ಅವಘಡ ಪ್ರಕರಣದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ ಕೈವಾಡವಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. ಜಿ-ಸ್ಕ್ವೇರ್ ಲೇಔಟ್ ಮೇಲೆ ಶಾಸಕ ಭರತ್ ರೆಡ್ಡಿ ಕಣ್ಣು ಹಾಕಿದ್ದಾರೆ. ಶುಕ್ರವಾರ ರಾತ್ರಿ ನಡೆದ ಪ್ರಕರಣದ ಹಿಂದೆ ಭರತ್ ರೆಡ್ಡಿಯ ಕೈವಾರವಿದೆ ಎಂದು ದೂರಿದರು.
ಬೆಂಕಿಯನ್ನು ಏಕೆ ಹಚ್ಚುತ್ತಾರೆ?
ಶನಿವಾರ ಘಟನಾ ಸ್ಥಳಕ್ಕೆ ಆಗಮಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ‘ರೀಲ್ಸ್ ಮಾಡುವ ಹುಡುಗರು ಕೃತ್ಯ ಎಸಗಿದ್ದಾರೆ, ಮಾಡೆಲ್ ಹೌಸ್ ಪಾಳು ಬಿದ್ದಿತ್ತು. ಯಾವುದೇ ಸೆಕ್ಯೂರಿಟಿ ಇರಲಿಲ್ಲ’ ಎಂದು ಎಸ್ಪಿಯವರು ಹೇಳಿದ್ದಾರೆ. ಆದರೆ, ಮಾಡೆಲ್ ಹೌಸ್ಗೆ ನಾವು ಸೆಕ್ಯೂರಿಟಿ ನಿಯೋಜಿಸಿದ್ದೇವೆ. ರೀಲ್ಸ್ ಮಾಡುವ ಹುಡುಗರು ಈ ಕೃತ್ಯ ಎಸಗಿದ್ದಾರೆ ಎಂದರೆ ನಂಬುವುದು ಹೇಗೆ ಸಾಧ್ಯ? ರೀಲ್ಸ್ ಮಾಡುವವರು ಬೆಂಕಿಯನ್ನು ಏಕೆ ಹಚ್ಚುತ್ತಾರೆ? ಎಂದು ಪ್ರಶ್ನಿಸಿದರು.
ದುಷ್ಕರ್ಮಿಗಳನ್ನು ಈ ಇಬ್ಬರೇ ರಕ್ಷಣೆ ಮಾಡಿದರು
ಕಳೆದ ಆಗಸ್ಟ್ ನಲ್ಲಿ ಮಾಡೆಲ್ ಹೌಸ್ನ ಗೇಟ್ಗಳನ್ನು ಮುರಿದು ಕೆಲವು ದುಷ್ಕರ್ಮಿಗಳು ಕಳ್ಳತನ ಮಾಡಿದ್ದರು. ಈ ಸಂಬಂಧ ಗ್ರಾಮೀಣ ಠಾಣೆಗೆ ದೂರು ನೀಡಿದ್ದೇವೆ. ಗ್ರಾಮೀಣ ಸಿಪಿಐ ಆಗಿದ್ದ ಸತೀಶ್ ಅವರು ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಎಎಸ್ಪಿ ರವಿಕುಮಾರ್ ಅವರು ಸಿಪಿಐ ಸತೀಶ್ ಅವರಿಗೆ ಯುವಕರನ್ನು ಬಂಧಿಸದಂತೆ ಒತ್ತಡ ಹೇರಿ, ಬಿಡುಗಡೆ ಮಾಡಿಸಿದರು. ದುಷ್ಕರ್ಮಿಗಳನ್ನು ಈ ಇಬ್ಬರೇ ರಕ್ಷಣೆ ಮಾಡಿದರು ಎಂದು ಆರೋಪಿಸಿದರು.
ಬ್ಯಾನರ್ ಗಲಭೆ ಪ್ರಕರಣ
ಬ್ಯಾನರ್ ಗಲಭೆ ಪ್ರಕರಣದಲ್ಲಿ ಈವರೆಗೆ ಆರೋಪಿಗಳಾದ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿಯನ್ನು ಬಂಧಿಸಲಾಗಿಲ್ಲ. ಭರತ್ ರೆಡ್ಡಿಯಂತಹ ಕ್ರಿಮಿನಲ್ಗಳನ್ನು ಸಿಎಂ ರಕ್ಷಣೆ ಮಾಡುತ್ತಿದ್ದಾರೆ. ಇವರು ಮುಂದೆ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತಾರೆ. ಸಿಎಂ ಸಿದ್ಧರಾಮಯ್ಯ ನಿಜಕ್ಕೂ ಪ್ರಾಮಾಣಿಕ ರಾಜಕಾರಣಿಯಾಗಿದ್ದರೆ ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಆಗ್ರಹಿಸಿದರು.
