ವರ್ಷದ ಬಳಿಕ ಗೋಲ್ಡನ್ ಚಾರಿಯೆಟ್ ರೈಲು ಪುನಾರಂಭ
ಬೆಂಗಳೂರು(ಮಾ.15): ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ‘ಗೋಲ್ಡನ್ ಚಾರಿಯೆಟ್’ ಐಷಾರಾಮಿ ಪ್ರವಾಸಿ ರೈಲು ಸಂಚಾರ ಭಾನುವಾರ ಪುನಾರಂಭವಾಯಿತು.
ನಗರದ ಯಶವಂತಪುರ ರೈಲು ನಿಲ್ದಾಣದಲ್ಲಿ ಈ ಗೋಲ್ಡನ್ ಚಾರಿಯೆಟ್ ಐಷಾರಾಮಿ ರೈಲು ಸಂಚಾರಕ್ಕೆ ಚಾಲನೆ ನೀಡಲಾಯಿತು. ನೈಋುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್ಕುಮಾರ್ ಸಿಂಗ್ ಅವರು ಈ ರೈಲು ಪ್ರಯಾಣಿಕರೊಂದಿಗೆ ಸಂವಾದ ನಡೆಸಿ, ಪ್ರವಾಸಕ್ಕೆ ಶುಭಕೋರಿದರು.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) 2008ರಲ್ಲಿ ಈ ಐಷಾರಾಮಿ ಪ್ರವಾಸಿ ರೈಲು ಸೇವೆ ಆರಂಭಿಸಿತ್ತು. ರೈಲು ಕಾರ್ಯಾಚರಣೆ, ನಿರ್ವಹಣೆ ಹಾಗೂ ಮಾರ್ಕೆಟಿಂಗ್ ಸಂಬಂಧ ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ನೊಂದಿಗೆ (ಐಆರ್ಸಿಟಿಸಿ) ಒಪ್ಪಂದ ಮಾಡಿಕೊಂಡಿದೆ. ಈ ಪ್ರವಾಸಿ ರೈಲು ಸೇವೆಗೆ ಆರಂಭದಿಂದಲೂ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೊರೋನಾದಿಂದ ಈ ರೈಲು ಸೇವೆ ಸ್ಥಗಿತಗೊಳಿಸಿದ್ದ ಕೆಎಸ್ಆಟಿಡಿಸಿ ಇದೀಗ ಮತ್ತೆ ಸೇವೆ ಪುನಾರಂಭಿಸಿದೆ.
ಐಆರ್ಸಿಟಿಸಿ ಎರಡು ಟೂರ್ ಪ್ಯಾಕೇಜ್ ರೂಪಿಸಿದೆ. ಈ ಪೈಕಿ ಆರು ರಾತ್ರಿ ಏಳು ಹಗಲಿನ ‘ಪ್ರೈಡ್ ಆಫ್ ಕರ್ನಾಟಕ’ ಪ್ಯಾಕೇಜ್ನಲ್ಲಿ ಬೆಂಗಳೂರಿನಿಂದ ಹೊರಡರುವ ರೈಲು ಬಂಡೀಪುರ ನ್ಯಾಷನಲ್ ಪಾರ್ಕ್, ಮೈಸೂರು, ಹಳೆಬೀಡು, ಚಿಕ್ಕಮಗಳೂರು, ಗೋವಾ, ಬಾದಾಮಿ, ಪಟ್ಟದಕಲ್ಲು ಮತ್ತು ಹಂಪಿ ಪ್ರವಾಸಿ ತಾಣಗಳನ್ನು ಸಂಪರ್ಕಿಸಿ ಬಳಿಕ ಬೆಂಗಳೂರಿಗೆ ವಾಪಸಾಗಲಿದೆ.
ಮೂರು ರಾತ್ರಿ ಹಾಗೂ ನಾಲ್ಕು ಹಗಲಿನ ‘ಜ್ಯುವೆಲ್ಸ್ ಆಫ್ ಸೌತ್ ಇಂಡಿಯಾ’ ಪ್ಯಾಕೇಜ್ನಲ್ಲಿ ಮೈಸೂರು, ತಮಿಳುನಾಡು, ಮಹಾಬಲಿಪುರಂ, ತಂಜವೂರು, ಚೆಟ್ಟಿನಾಡ್ ಮತ್ತು ಕೇರಳದ ಪ್ರವಾಸಿ ತಾಣಗಳನ್ನು ಸಂಪರ್ಕಿಸಲಿದೆ. ಪ್ರಮುಖವಾಗಿ ಹಂಪಿ, ಕೊಚ್ಚಿಯ ಕೋಟೆ, ಕೇರಳ ಹಿನ್ನೀರು ಎಲ್ಲವೂ ಒಳಗೊಂಡಿದೆ. ಈ ಪ್ಯಾಕೇಜ್ ಟೂರ್ ಇದೇ ಮಾ.21ರಂದು ಬೆಂಗಳೂರಿನಿಂದ ಆರಂಭವಾಗಲಿದೆ.
ಈ ಪ್ಯಾಕೇಜ್ ಟೂರ್ಗಳಲ್ಲಿ ರೈಲು ಪ್ರಯಾಣ ದರ, ಊಟ, ಪ್ರವಾಸಿ ತಾಣಗಳ ವೀಕ್ಷಣೆಗೆ ಸಾರಿಗೆ ವ್ಯವಸ್ಥೆ, ಪ್ರವೇಶ ಶುಲ್ಕ, ಪ್ರವಾಸಿ ಮಾರ್ಗದರ್ಶಕರ ಶುಲ್ಕ ಸೇರಿದಂತೆ ಎಲ್ಲವೂ ಸೇರಿಕೊಂಡಿದೆ.