ದುಬೈನಿಂದ ಕನ್ನಡಿಗರ ಏರ್ಲಿಫ್ಟ್: ಇಲ್ಲಿವೆ ಫೋಟೋಸ್
ಕೊರೋನಾ ಲಾಕ್ಡೌನ್ ಬಳಿಕ ವಿದೇಶದಲ್ಲಿ ಬಾಕಿಯಾಗಿರುವ ಅನಿವಾಸಿ ಕನ್ನಡಿಗರನ್ನು ರಾಜ್ಯಕ್ಕೆ ಕರೆತರುವ ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್ ಕಾರ್ಯಾಚರಣೆಯ ಎರಡನೇ ಸರದಿಯ ವಿಮಾನ ಮಂಗಳವಾರ ರಾತ್ರಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಇಲ್ಲಿವೆ ಫೋಟೋಸ್
ಕರ್ನಾಟಕದಲ್ಲಿ ಬೆಂಗಳೂರು ಬಳಿಕ ಕನ್ನಡಿಗರನ್ನು ಹೊತ್ತು ಮಂಗಳೂರು ತಲುಪಿದ ಎರಡನೇ ವಿಮಾನ ಇದಾಗಿದೆ. ಕರಾವಳಿಗೆ ಸಂಬಂಧಿಸಿ ಮಂಗಳೂರಿಗೆ ದುಬೈನಿಂದ ಆಗಮಿಸಿದ ಮೊದಲ ವಿಮಾನ ಇದು. ಈ ವಿಮಾನದಲ್ಲಿ ಕರಾವಳಿ ಜಿಲ್ಲೆ ಮಾತ್ರವಲ್ಲ ಶಿವಮೊಗ್ಗ, ಬೆಂಗಳೂರಿನ ಪ್ರಯಾಣಿಕರೂ ಇದ್ದರು.
ದುಬೈನಿಂದ ಮಂಗಳವಾರ ಸಂಜೆ 5.10ಕ್ಕೆ ಹೊರಟ ಏರ್ಇಂಡಿಯಾ ಎಕ್ಸ್ಪ್ರೆಸ್ ಐಎಕ್ಸ್-384 ವಿಮಾನ ರಾತ್ರಿ 10.10ಕ್ಕೆ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.
ಈ ವಿಮಾನದಲ್ಲಿ ಒಟ್ಟು 179 ಮಂದಿ ಪ್ರಯಾಣಿಕರಿದ್ದರು. ಇವರೆಲ್ಲರನ್ನು ಮಂಗಳೂರು ಹಾಗೂ ಉಡುಪಿಯ ನಿಗದಿತ ಸ್ಥಳಗಳಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ವಿಮಾನದಲ್ಲಿದ್ದ ಒಟ್ಟು 179 ಪ್ರಯಾಣಿಕರ ಪೈಕಿ 96 ಪುರುಷ ಹಾಗೂ 81 ಮಂದಿ ಮಹಿಳೆಯರು ಸೇರಿದ್ದಾರೆ. 12 ಮಂದಿ ವೈದ್ಯಕೀಯ ತುರ್ತು ಚಿಕಿತ್ಸೆಗೆ ಒಳಗಾಗಲಿದ್ದು, 38 ಮಂದಿ ಗರ್ಭಿಣಿಯರು, ಇಬ್ಬರು ಮಕ್ಕಳಿದ್ದಾರೆ
ಇವರಲ್ಲದೆ ಉದ್ಯೋಗ ಕಳಕೊಂಡವರು, ವೀಸಾ ರದ್ದತಿಗೆ ಒಳಗಾದವರು, ಕೌಟುಂಬಿಕ ತುರ್ತು ಅನಾರೋಗ್ಯ, ಟೂರಿಸ್ಟ್ ವೀಸಾದಲ್ಲಿ ತೆರಳಿದವರಿದ್ದಾರೆ ಎಂದು ದ.ಕ. ಜಿಲ್ಲಾಡಳಿತ ಮಾಹಿತಿ ನೀಡಿದೆ.
ದುಬೈ ವಿಮಾನ ನಿಲ್ದಾಣದಲ್ಲಿ ತಾಯ್ನಾಡಿಗೆ ಮರಳಲು ಸುಮಾರು 150ಕ್ಕೂ ಅಧಿಕ ಮಂದಿ ಗರ್ಭಿಣಿಯರು ಹೆಸರು ನೋಂದಾಯಿಸಿದ್ದರು. ಆದರೆ ಐದು ತಿಂಗಳು ತುಂಬಿದವರಿಗೆ ಮೊದಲ ಆದ್ಯತೆ ನೀಡಲಾಗಿದ್ದು, ವೈದ್ಯಕೀಯ ಪ್ರಮಾಣ ಪತ್ರ ನೀಡಿದ ಬಳಿಕ ಇವರನ್ನು ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ.
ದುಬೈನಿಂದ ವಿಮಾನದಲ್ಲಿ ಆಗಮಿಸಿದವರಲ್ಲಿ ಮಂಗಳೂರಿಗರೇ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಸುಮಾರು 125 ಮಂದಿ ಮಂಗಳೂರಿಗರೇ ಇದ್ದು, ಉಳಿದಂತೆ 50 ಮಂದಿ ಉಡುಪಿ, 10 ಮಂದಿ ಕಾರವಾರ, ಶಿವಮೊಗ್ಗ, ಬೆಂಗಳೂರಿನವರೂ ಇದ್ದಾರೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.
ದುಬೈನಿಂದ ತಾಯ್ನಾಡಿಗೆ ಆಗಮಿಸಿದ ಖುಷಿಯಲ್ಲಿದ್ದರೂ ಅದನ್ನು ಹಂಚಿಕೊಳ್ಳಲು ಅವಕಾಶ ಇರಲಿಲ್ಲ. ವಿಮಾನದಲ್ಲಿ ಆಗಮಿಸಿದ ಎಲ್ಲ ಪ್ರಯಾಣಿಕರನ್ನು ಮನೆಗೆ ಹೋಗಲು ಅವಕಾಶ ಕಲ್ಪಿಸದೆ ಕೊರೋನಾ ಭೀತಿ ಹಿನ್ನೆಲೆಯಲ್ಲಿ 14 ದಿನಗಳ ಕಡ್ಡಾಯ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ಮಂಗಳೂರಿನಲ್ಲಿ ಕಾದಿರಿಸಿದ 17 ಹೊಟೇಲ್ ಹಾಗೂ 12 ಹಾಸ್ಟೆಲ್ಗಳಿಗೆ ಅವರನ್ನು ಕಳುಹಿಸಲಾಯಿತು. ಉಳಿದಂತೆ ಉಡುಪಿ ಹಾಗೂ ಕಾರವಾರದಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ.