ಜನಸೇವೆಗೆ ಸಚಿವ ಸೋಮಣ್ಣ ಮೇಲ್ಪಂಕ್ತಿ: ಬಿಎಸ್ವೈ
ಬೆಂಗಳೂರು(ಡಿ.07): ಸಚಿವ ವಿ.ಸೋಮಣ್ಣ ಅವರು ಕ್ಷೇತ್ರದ ಜನರ ಸಮಸ್ಯೆ ಆಲಿಸಿ ಬಗೆಹರಿಸಲು ಕಚೇರಿ ತೆರೆದಿರುವಂತೆ ರಾಜ್ಯದ ಎಲ್ಲ ಶಾಸಕರು ಹಾಗೂ ಮಂತ್ರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸೋಮಣ್ಣ ಅವರು ಪ್ರತಿನಿಧಿಸುವ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಸೋಮಣ್ಣ ಅವರು ಏನೇ ಮಾಡಿದರೂ ವಿಶೇಷವಾಗಿ ಮಾಡುತ್ತಾರೆ. ಕ್ಷೇತ್ರದ ಜನರು ಬಂದು ಸಮಸ್ಯೆ ಹೇಳಿಕೊಂಡು ಬಗೆಹರಿಸಿಕೊಳ್ಳಲಿ ಎಂಬ ಆಪೇಕ್ಷೆಯಿಂದ ಈ ಕಚೇರಿ ತೆರೆದಿದ್ದಾರೆ. ಈ ಮೂಲಕ ಮೇಲ್ಪಂಕ್ತಿ ಹಾಕಿದ್ದಾರೆ. ಹೀಗಾಗಿ ರಾಜ್ಯದ ಎಲ್ಲ ಶಾಸಕರು ಹಾಗೂ ಮಂತ್ರಿಗಳು ಇದೇ ಮಾದರಿಯ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ನಾನು ಬಹಳ ಕಾರ್ಯಾಲಯಗಳನ್ನು ಉದ್ಘಾಟಿಸಿದ್ದೇನೆ. ಕಾರ್ಯಕರ್ತರು ಕೆಲಸ ಮಾಡಲು ಕಾರ್ಯಾಲಯ ಬೇಕು. ಪ್ರಧಾನಿ ಮೋದಿ ಅವರ ಆಶಯದಂತೆ ಈ ಕಾರ್ಯಾಲಯ ನಿರ್ಮಾಣವಾಗಿದೆ. ಈ ಕಾರ್ಯಾಲಯ ದೇವಸ್ಥಾನ ಇದ್ದಂತೆ. ಕಾರ್ಯಕರ್ತರು ಕೆಲ ಹೊತ್ತು ಕುಳಿತು ಹೋದರೆ ಕೆಲಸ ಮಾಡಲು ಉತ್ಸಾಹ ಸಿಗುತ್ತದೆ. ಅಂತೆಯೇ ಪಕ್ಷದ ಕೆಲಸಗಳನ್ನು ಪ್ರಚಾರ ಮಾಡಲು ಪ್ರೇರಣೆ ದೊರೆಯುತ್ತದೆ ಎಂದರು.
ಕಾರ್ಯಾಲಯಗಳು ಕಾರ್ಯಕರ್ತರ ಬೆಳವಣಿಗೆಗೆ ಸಹಕಾರಿಯಾಗಬೇಕು. ಇಲ್ಲಿ ಸಿಗುವ ಪುಸ್ತಕ ಓದಿದರೆ ಜ್ಞಾನ ಬೆಳೆಯುತ್ತದೆ. ಇದರ ಮೂಲಕ ಮತ್ತಷ್ಟು ವಿಚಾರಧಾರೆ ಬೆಳೆಸಿಕೊಳ್ಳಲು ಇದು ಸಹಕಾರಿಯಾಗಲಿದೆ ಎಂದು ಶಾಸಕರ ಕಚೇರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಒಬ್ಬ ಶಾಸಕ ಹೇಗಿರಬೇಕು ಅನ್ನುವುದಕ್ಕೆ ಸಚಿವ ಸೋಮಣ್ಣ ಮಾದರಿಯಾಗಿದ್ದಾರೆ ಎಂದರು.
ಇದೇ ವೇಳೆ ಸಚಿವ ವಿ.ಸೋಮಣ್ಣ ಅವರು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಮೈಸೂರು ಪೇಟಾ ತೊಡಿಸಿ, ನೆನಪಿ ಕಾಣಿಕೆಯಾಗಿ ಬೆಳ್ಳಿ ದೀಪ ನೀಡಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಹಲವು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಸಮಾಜ ಕಲ್ಯಾಣ ಬಿ.ಶ್ರೀರಾಮುಲು, ಸಂಸದರಾದ ತೇಜಸ್ವಿ ಸೂರ್ಯ, ಭಗವಂತ ಕೂಬಾ, ಮುಖಂಡರಾದ ಅರುಣ್ ಸೋಮಣ್ಣ, ವಿಶ್ವನಾಥಗೌಡ, ಉಮೇಶ್ ಶೆಟ್ಟಿಮತ್ತಿತರರು ಉಪಸ್ಥಿತರಿದ್ದರು.