ಕೇಂದ್ರದ ಜೊತೆ 7ನೇ ಸುತ್ತಿನ ಮಾತುಕತೆ ವಿಫಲ; ಸಭೆಯಿಂದ ಹೊರನಡೆದ ರೈತ ಮುಖಂಡರು!
ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಅಂತ್ಯಗೊಳಿಸಲು ಕೇಂದ್ರ ಸರ್ಕಾರ ಹಲವು ಸುತ್ತಿನ ಮಾತುಕತೆ ನಡೆಸಿದೆ. ಇದೀಗ 7ನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿದೆ. 7ನೇ ಸುತ್ತಿನ ಸಭೆಯ ವಿವರ ಇಲ್ಲಿದೆ.
ದೆಹಲಿ ಗಡಿ ಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ತಿಂಗಳು ದಾಟಿದೆ. ಕೇಂದ್ರ ಸರ್ಕಾರ ತಂದಿರುವ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತರ ಪ್ರತಿಭಟನೆ ಅಂತ್ಯಗೊಳಿಸಲು ಕೇಂದ್ರ ಸರ್ಕಾರ ರೈತರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿ ವಿಫಲಗೊಂಡಿತ್ತು. ಇಂದು(ಜ.04) ರೈತ ಮುಖಂಡರ ಜೊತೆ ನಡೆಸಿದ 7ನೇ ಸುತ್ತಿನ ಮಾತುಕತೆ ವಿಫಲಗೊಂಡಿದೆ.
ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒಪ್ಪದ ಸರ್ಕಾರ, ಜಂಟಿ ಸಮಿತಿ ಮೂಲಕ ಕಾಯ್ದೆಯ ಪ್ರತಿ ಹಂತದ ಚರ್ಚೆಗೆ ಸಿದ್ದ ಎಂದಿದೆ. ಬೆಂಬಲ ಬೆಲೆ ವಿಚಾರ ಕೂಡ ಜಂಟಿ ಸಮಿತಿಯಲ್ಲಿ ಚರ್ಚೆಗೆ ಕೇಂದ್ರದ ಪ್ರಸ್ತಾಪವಿಟ್ಟಿತು.
ಸರ್ಕಾರದ ಪ್ರಸ್ತಾಪವನ್ನು ರೈತ ಮುಖಂಡರ ತಿರಸ್ಕರಿಸಿದ್ದಾರೆ. ಪಟ್ಟು ಸಡಿಲಿಸಿದ ರೈತರು 3 ಕೃಷಿ ಕಾಯ್ದೆ ಹಿಂಪಡೆಯುವ ಹೊರತಾಗಿ ತಮಗೇನು ಮಾತನಾಡಲು ಇಲ್ಲ ಎಂದು ಸಂಧಾನ ಸಭೆಯಿಂದ ಹೊರಬಂದಿದ್ದಾರೆ.
ಕೇಂದ್ರ ಸರ್ಕಾರದ ಜೊತೆಗಿನ 7ನೇ ಸುತ್ತಿನ ಮಾತುಕತೆಯಲ್ಲಿ 41 ರೈತ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು. ಇತ್ತ ಕೇಂದ್ರ ಸರ್ಕಾರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೇ ಸಚಿವ ಪಿಯೂಷ್ ಗೋಯಲ್ ಬಾಗಿಯಾಗಿದ್ದರು.
ಇದೀಗ ಕೇಂದ್ರ ಸರ್ಕಾರ ಹಾಗೂ ರೈತರ ಜೊತೆಗಿನ 8ನೇ ಸುತ್ತಿನ ಮಾತುಕತೆಗೆ ದಿನಾಂಕ ಫಿಕ್ಸ್ ಮಾಡಲಾಗಿದೆ. ಜನವರಿ 8 ರಂದು ಮಹತ್ವದ ಸಂಧನಾ ಸಭೆ ನಡೆಯಲಿದೆ.
ಡಿಸೆಂಬರ್ 30 ರಂದು ಕೇಂದ್ರ ಸರ್ಕಾರ ಹಾಗೂ ರೈತರ ಜೊತೆಗಿನ 6 ನೇ ಸಂಧಾನ ಸಭೆ ನಡೆಸಲಾಗಿತ್ತು. ಈ ವೇಳೆ ಆರಂಭಿಕ ಯಶಸ್ಸು ಕಂಡ ಸರ್ಕಾರ, ಮುಂದಿನ ಮಾತುಕತೆಯನ್ನು ಜನವರಿ ನಾಲ್ಕಕ್ಕೆ ನಿಗದಿ ಮಾಡಿತ್ತು.
7ನೇ ಸುತ್ತಿನ ಮಾತುಕತೆಯಲ್ಲಿ ರೈತ ಪ್ರತಿಭಟನೆ ಅಂತ್ಯಗೊಳಿಸುವ ವಿಶ್ವಾಸ ಕೇಂದ್ರ ಸರ್ಕಾರದ್ದಾಗಿತ್ತು. ಆದರೆ ರೈತರು ಮಾತ್ರ ತಮ್ಮ ಬೇಡಿಕೆಯಿಂದ ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.
ಕೇಂದ್ರದ ಜೊತೆಗಿನ ಮಾತುಕತೆ ವಿಫಲಗೊಂಡಿರುವ ಬೆನ್ನಲ್ಲೇ ಇತ್ತ ರೈತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಮುಖಂಡರು ಆಗಮಿಸಿದ ಬಳಿಕ ಮುಂದಿನ ಪ್ರತಿಭಟನೆ ರೂಪುರೇಶೆ ನೀಡಲಿದ್ದೇವೆ ಎಂದು ಪ್ರತಿಭಟನಾ ನಿರತ ರೈತರು ಹೇಳಿದ್ದಾರೆ.