ಈ 3 ಕಾರಣಕ್ಕಾಗಿಯಾದರೂ ಹಾರ್ದಿಕ್ ಪಾಂಡ್ಯ ಮೊದಲ ಓವರ್ ಬೌಲಿಂಗ್ ಮಾಡಬಾರದು..!
ಬೆಂಗಳೂರು(ಜ.03): ಟೀಂ ಇಂಡಿಯಾ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಇತ್ತೀಚೆಗಷ್ಟೇ ನ್ಯೂಜಿಲೆಂಡ್ ಎದುರು ಮುಕ್ತಾಯವಾದ ಟಿ20 ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾದರು. ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿದ್ದು, ಇದೀಗ ತಂಡದ ಪ್ರಮುಖ ವೇಗಿಯಾಗುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.
ಆದರೆ ಹಾರ್ದಿಕ್ ಪಾಂಡ್ಯ, ಮೊದಲ ಓವರ್ ಬೌಲಿಂಗ್ ಮಾಡದೇ ಇದ್ದರೇ ಟೀಂ ಇಂಡಿಯಾಗೆ ಹೆಚ್ಚಿನ ಪ್ರಯೋಜನವಿದೆ. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಆ ಮೂರು ಕಾರಣಗಳು.
1. ದೀರ್ಘಕಾಲದವರೆಗೆ ಹಾರ್ದಿಕ್ ಪಾಂಡ್ಯ, ಮೊದಲ ವೇಗಿಯಾಗಿ ಮುಂದುವರೆಯಲು ಸಾಧ್ಯವಿಲ್ಲ:
ಭಾರತ ಕ್ರಿಕೆಟ್ ತಂಡವು ಸದ್ಯ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಚಿತ್ತ ನೆಟ್ಟಿದೆ. ಹಾಗಂತ 2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಡೆಗಣಿಸಿದೆ ಎಂದರ್ಥವಲ್ಲ.
ಹೊಸ ಚೆಂಡಿನಲ್ಲಿ ದಾಳಿ ಗಿಳಿಯುವಾಗ ಕೊಂಚ ಎಡವಟ್ಟು ಮಾಡಿದರೂ, ಪಂದ್ಯದ ದಿಕ್ಕೇ ಬದಲಾಗುವ ಸಾಧ್ಯತೆಯಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಆರ್ಶದೀಪ್ ಸಿಂಗ್ ಹೊಸ ಚೆಂಡಿನಲ್ಲಿ ಮಾರಕ ದಾಳಿ ನಡೆಸುವುದರಿಂದ ಹಾರ್ದಿಕ್ ಪಾಂಡ್ಯ ಮಧ್ಯದಲ್ಲಿ ಬೌಲಿಂಗ್ ಮಾಡುವುದೇ ಬೆಸ್ಟ್. ಯಾಕೆಂದರೇ ದೀರ್ಘಕಾಲದ ವರೆಗೆ ಪಾಂಡ್ಯ ಫಿಟ್ನೆಸ್ ಕಾಪಾಡಿಕೊಳ್ಳುವುದು ದೊಡ್ಡ ಸವಾಲು.
2. ಪ್ರಮುಖ ವೇಗಿಗಳ ಮಹತ್ವ ಕಡಿಮೆಯಾಗಲಿದೆ:
ಕಿವೀಸ್ ಎದುರಿನ ಟಿ20 ಸರಣಿಯಲ್ಲಿ ಪ್ರಮುಖ ವೇಗಿಗಳು ಆಯ್ಕೆಗೆ ಅಲಭ್ಯರಾಗಿದ್ದರು. ಹೀಗಾಗಿ ಪಾಂಡ್ಯ, ಭಾರತ ಪರ ಮೊದಲ ಇನಿಂಗ್ಸ್ ಬೌಲಿಂಗ್ ಮಾಡಿದ್ದರು.
ಇನ್ನು ತಂಡದ ಪ್ರಮುಖ ವೇಗಿಯಾಗಿ ಸ್ಥಾನ ಪಡೆದಿದ್ದ ಶಿವಂ ಮಾವಿ 14ನೇ ಓವರ್ನಲ್ಲಿ ಮೊದಲ ಬಾರಿಗೆ ಬೌಲಿಂಗ್ ಮಾಡಿದ್ದರು. ಮಾವಿ ಕೇವಲ ಎರಡು ಓವರ್ಗಳಷ್ಟೇ ಬೌಲಿಂಗ್ ಮಾಡಿದ್ದರು. ಹೀಗಾಗಿ ಪ್ರಮುಖ ವೇಗಿಗಳು ಇದ್ದಾಗ ಪಾಂಡ್ಯ, ಅವರಿಗೆ ಅವಕಾಶ ನೀಡುವುದು ಸೂಕ್ತ
3. ಮೂರನೇ ವೇಗಿಯ ರೂಪದಲ್ಲೇ ಹೆಚ್ಚು ಯಶಸ್ಸು ಗಳಿಸಿದ್ದಾರೆ ಪಾಂಡ್ಯ:
ಹಾರ್ದಿಕ್ ಪಾಂಡ್ಯ ನಾಯಕನಾಗಿ ಹೆಚ್ಚು ಜವಾಬ್ದಾರಿಯನ್ನು ಮೈಮೇಲೆ ಎಳೆದುಕೊಂಡು ಪ್ರಮುಖ ವೇಗಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಆದರೆ ಪಾಂಡ್ಯ, ಮೊದಲ ಓವರ್ ಮಾಡಿದ್ದಕ್ಕಿಂತ ಹೆಚ್ಚಾಗಿ ಮೂರನೇ ವೇಗಿಯಾಗಿ ಯಶಸ್ವಿಯಾಗಿದ್ದೇ ಹೆಚ್ಚು.
29 ವರ್ಷದ ಹಾರ್ದಿಕ್ ಪಾಂಡ್ಯ ಆಗಾಗ ಫಿಟ್ನೆಸ್ ಹಾಗೂ ಗಾಯದ ಸಮಸ್ಯೆಯಿಂದ ಬಳಲುತ್ತಲೇ ಬಂದಿದ್ದಾರೆ. ಹೀಗಾಗಿ ಚುಟುಕು ಕ್ರಿಕೆಟ್ನಲ್ಲಿ ಫಿಟ್ನೆಸ್ ಸಾಕಷ್ಟು ಅಗತ್ಯವಿರುವುದರಿಂದ ಪಾಂಡ್ಯ, ಮೂರನೇ ವೇಗಿಯಾಗಿಯೇ ಮುಂದುವರೆದರೇ ತಂಡಕ್ಕೆ ಹೆಚ್ಚು ಅನುಕೂಲವಾಗಲಿದೆ.