IPL 2021: ಆರ್ಸಿಬಿಗೆ ಎದುರಾಯ್ತು ಬಿಗ್ ಶಾಕ್: ದೇವದತ್ ಪಡಿಕ್ಕಲ್ಗೆ ಕೋವಿಡ್ ಸೋಂಕು ದೃಢ..!
ಚೆನ್ನೈ: ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 14ನೇ ಆವೃತ್ತಿಯಲ್ಲಿ ಕಪ್ ಎತ್ತಿಹಿಡಿಯುವ ಕನವರಿಕೆಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಏಪ್ರಿಲ್ 09ರಿಂದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಆರಂಭವಾಗಲಿದೆ. ಹೀಗಿರುವಾಗಲೇ ವಿರಾಟ್ ಕೊಹ್ಲಿ ಪಡೆಗೆ ಆರಂಭಿಕ ವಿಘ್ನ ಎದುರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಏಪ್ರಿಲ್ 09ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ.
ಈ ಹೈವೋಲ್ಟೇಜ್ ಪಂದ್ಯಕ್ಕೆ ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂ ಆತಿಥ್ಯ ವಹಿಸಲಿದ್ದು, ಚುಟುಕು ಕ್ರಿಕೆಟ್ ಹಬ್ಬವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಇನ್ನು ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಭಿಯಾನ ಆರಂಭಿಸಲು ಬೆರಳೆಣಿಕೆ ದಿನಗಳು ಉಳಿದಿರುವಾಗಲೇ ಬಿಗ್ ಶಾಕ್ ಎದುರಾಗಿದೆ.
ಹೌದು, ತಂಡದ ಪ್ರತಿಭಾನ್ವಿತ ಆರಂಭಿಕ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ಗೆ ಭಾನುವಾರ(ಏ.04) ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದೀಗ ಪಡಿಕ್ಕಲ್ ಅವರನ್ನು ಐಸೋಲೇಷನ್ನಲ್ಲಿ ಇಡಲಾಗಿದ್ದು, ಮುಂಬೈ ಇಂಡಿಯನ್ಸ್ ವಿರುದ್ದದ ಉದ್ಘಾಟನಾ ಪಂದ್ಯದಲ್ಲಿ ಕರ್ನಾಟಕದ ಎಡಗೈ ಬ್ಯಾಟ್ಸ್ಮನ್ ಕಣಕ್ಕಿಳಿಯುವುದು ಅನುಮಾನ ಎನಿಸಿದೆ.
ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಪಡಿಕ್ಕಲ್ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು.
ಮೊದಲ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಅಲಭ್ಯತೆ ತಂಡಕ್ಕೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದ್ದು, ಪಡಿಕ್ಕಲ್ ಬದಲಿಗೆ ಯಾರು ಆರ್ಸಿಬಿ ಪರ ಆರಂಭಿಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.
14ನೇ ಆವೃತ್ತಿಯ ಐಪಿಎಲ್ಗೂ ಕೋವಿಡ್ 19 ಸೋಂಕಿಗೆ ಒಳಗಾದ 3ನೇ ಆಟಗಾರ ಪಡಿಕ್ಕಲ್. ಈ ಮೊದಲು ಕೆಕೆಆರ್ನ ನಿತೀಶ್ ರಾಣಾ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ನ ಅಕ್ಷರ್ ಪಟೇಲ್ಗೂ ಕೊರೋನಾ ವೈರಸ್ ತಗುಲಿದ್ದು.
ದೇವದತ್ ಪಡಿಕ್ಕಲ್ ಆದಷ್ಟು ಬೇಗ ಗುಣಮುಖರಾಗಿ ತಂಡ ಕೂಡಿಕೊಳ್ಳಲಿ ಎನ್ನುವುದು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ಹಾಗೂ ಕ್ರಿಕೆಟ್ ಅಭಿಮಾನಿಗಳ ಹಾರೈಕೆಯಾಗಿದೆ.