- Home
- Sports
- Cricket
- ಕೌನ್ ಬನೇಗಾ ಕರೋಡ್ಪತಿಯಲ್ಲಿ ವೀರೂ-ದಾದಾ; ಸೆಹ್ವಾಗ್ ಮಾತಿಗೆ ಬಿದ್ದು ಬಿದ್ದು ನಕ್ಕ ಸೌರವ್..!
ಕೌನ್ ಬನೇಗಾ ಕರೋಡ್ಪತಿಯಲ್ಲಿ ವೀರೂ-ದಾದಾ; ಸೆಹ್ವಾಗ್ ಮಾತಿಗೆ ಬಿದ್ದು ಬಿದ್ದು ನಕ್ಕ ಸೌರವ್..!
ನವದೆಹಲಿ: ಬಾಲಿವುಡ್ ಬಿಗ್ ಬಿ ಖ್ಯಾತಿಯ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೆಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸದ್ಯದಲ್ಲೇ ನಿಮ್ಮ ಟಿವಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎಪಿಸೋಡ್ನ ಒಂದು ಪ್ರೊಮೋ ಹೊರಬಿದ್ದಿದ್ದು, ಅದರಲ್ಲಿ ಸೆಹ್ವಾಗ್-ಗಂಗೂಲಿ ಹಾಗೂ ಬಚ್ಚನ್ ತಮಾಷೆ ಮಾಡಿಕೊಳ್ಳುವ ಆಯ್ದ ಕ್ಷಣಗಳಿವೆ. ಸೆಹ್ವಾಗ್ ಮಾತಿಗೆ ದಾದಾ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. View this post on Instagram A post shared by Sony Entertainment Television (@sonytvofficial)

ಮೈದಾನದಲ್ಲಿದ್ದಾಗ ಹಾಗೂ ಮೈದಾನದಲ್ಲಾಚೆಗೆ ಸ್ಪೋಟಕ ಆರಂಭಿಕ ಬ್ಯಾಟ್ಸ್ಮನ್ ವಿರೇಂದ್ರ ಸೆಹ್ವಾಗ್ ಹಾಗೂ ಸೌರವ್ ಗಂಗೂಲಿ ಉತ್ತಮ ಸ್ನೇಹಿತರಾಗಿದ್ದರು. ಉತ್ತಮ ಸ್ನೇಹಿತರೂ ಎನ್ನುವುದಕ್ಕಿಂತ ಹೆಚ್ಚಾಗಿ ಒಂದು ರೀತಿ ಗುರು-ಶಿಷ್ಯರ ರೀತಿಯ ಸಂಬಂಧ ಇವರದ್ದಾಗಿತ್ತು.
ಈ ಹಿಂದಿನ ಹಲವು ಸಂದರ್ಶನಗಳಲ್ಲಿ ಸಹಾ ವೀರೂ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ಸೆಹ್ವಾಗ್ ಹಲವು ಬಾರಿ ಫಾರ್ಮ್ ಸಮಸ್ಯೆ ಎದುರಿಸಿದ್ದಾಗಲೆಲ್ಲ ನಾಯಕ ಸೌರವ್ ಗಂಗೂಲಿ ಹೆಚ್ಚಿನ ಅವಕಾಶವನ್ನು ಡೆಲ್ಲಿ ಆಟಗಾರನಿಗೆ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ದಶಕಗಳ ಕಾಲ ಮಿಂಚಲು ನೆರವಾಗಿದ್ದರು.
ಇದೀಗ ಖ್ಯಾತ ಹಿಂದಿ ಶೋ ಕೌನ್ ಬನೇಗಾ ಕರೋಡ್ಪತಿ 13ನೇ ಆವೃತ್ತಿಯಲ್ಲಿ ಸೌರವ್ ಗಂಗೂಲಿ ಹಾಗೂ ವಿರೇಂದ್ರ ಸೆಹ್ವಾಗ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದರ ಒಂದು ಪ್ರೋಮೋ ಬಿಡುಗಡೆಯಾಗಿದ್ದು, ಸಾಕಷ್ಟು ಹಾಸ್ಯಮಯ ಕ್ಷಣಗಳಿಗೆ ಸಾಕ್ಷಿಯಾಗಿದೆ.
ಬ್ಯಾಟಿಂಗ್ ಮಾಡುತ್ತಿದ್ದಾಗಲೂ ನೀವು ಹಾಡು ಗುನುಗುತ್ತಿದ್ರಾ ಎಂದು ಬಚ್ಚನ್ ಸೆಹ್ವಾಗ್ ಅವರನ್ನು ಕೇಳಿದ್ದಾರೆ, ಆಗ ಖ್ಯಾತ ನಟ ಕಿಶೋರ್ ಕುಮಾರ್ ಅಭಿನಯದ ಹಿಂದಿ ಹಾಡೊಂದನ್ನು ಮೆಲುಕು ಹಾಕಿದ್ದಾರೆ.
ಇದಾದ ಬಳಿಕ ಟೀಂ ಇಂಡಿಯಾ ಮಾಜಿ ಕೋಚ್ ಗ್ರೇಗ್ ಚಾಪೆಲ್ಗೆ ಯಾವುದಾದರೊಂದು ಹಾಡನ್ನು ಡೆಡಿಕೇಟ್ ಮಾಡೋದಾದ್ರೆ ಯಾವ ಹಾಡನ್ನು ಡೆಡಿಕೇಟ್ ಮಾಡುತ್ತೀರಾ ಎನ್ನುವ ಪ್ರಶ್ನೆಗೆ, ಪಕ್ಕದಲ್ಲಿ ಕುಳಿತಿದ್ದ ಗಂಗೂಲಿ ಮುಖ ನೋಡಿ ಮುಗುಳು ನಗುತ್ತಾ, ಅಪನಿ ತೋ ಜೈಸೆ ತೈಸೆ ಫಟ್ ಜಾಯೆಗಿ, ಆಪಕಾ ಕ್ಯಾ ಹೋಗಾ ಜನಾಬ್ ಏ ಆಲಿ ಎಂದು ಹಾಡು ಹೇಳಿ ನಗೆ ಬೀರಿದ್ದಾರೆ.
ಸೆಹ್ವಾಗ್ ಈ ಹಾಡು ಹಾಡುತ್ತಿದ್ದಂತೆಯೇ ಸೌರವ್ ಗಂಗೂಲಿ ಹಾಗೂ ಅಮಿತಾಬ್ ಬಚ್ಚನ್ ಕೂಡಾ ಹೊಟ್ಟೆ ಹುಣ್ಣಾಗುವಂತೆ ನಕ್ಕು ಹಗುರಾಗಿದ್ದಾರೆ. ಗ್ರೇಗ್ ಚಾಪೆಲ್ ಹಾಗೂ ಸೌರವ್ ಗಂಗೂಲಿ ಸಂಬಂಧ ಅಷ್ಟಕಷ್ಟೇ ಎನ್ನುವಂತಾಗಿತ್ತು. ಚಾಪೆಲ್ ಅವರಿಂದಲೇ ಗಂಗೂಲಿ ಕ್ರಿಕೆಟ್ ಬದುಕು ಸ್ವಲ್ಪ ಮುಂಚಿತವಾಗಿಯೇ ಮಸುಕಾಯಿತು ಎನ್ನುವ ಮಾತೂ ಇದೆ.
ಇನ್ನು ಒಂದು ವೇಳೆ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ದ ಟೀಂ ಇಂಡಿಯಾ ಗೆಲುವು ಸಾಧಿಸಿದಾಗ ಯಾವ ಎರಡು ಸಾಲನ್ನು ಹೇಳಲು ಬಯಸುತ್ತೀರಾ ಎನ್ನುವ ಪ್ರಶ್ನೆಗೆ ಸೆಹ್ವಾಗ್ ಬಿಗ್ ಬಿ ಯ ಖ್ಯಾತ ಸಿನಿಮಾ ಶೆಹ್ನ್ಶಾದ ಖ್ಯಾತ ಡೈಲಾಗ್ ಹೊಡೆದಿದ್ದಾರೆ. ಅಂದಹಾಗೆ ಈ ಎಪಿಸೋಡ್ ಸೆಪ್ಟೆಂಬರ್ 03ರಂದು ನೀವೆಲ್ಲರೂ ಕಣ್ತುಂಬಿಕೊಳ್ಳಬಹುದಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.