IPL Auction: 10 ಫ್ರಾಂಚೈಸಿಗಳ ಮುಂದಿರುವ ಗುರಿ ಏನು? ಆರ್ಸಿಬಿ ಟಾರ್ಗೆಟ್ ಏನಿರಬಹುದು?
ದುಬೈ: ಈ ಬಾರಿ ಪ್ರತಿ ಫ್ರಾಂಚೈಸಿಯು ಸ್ಪಷ್ಟ ಗುರಿಯೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿವೆ. ತಂಡಗಳು ಈಗಾಗಲೇ ತಮ್ಮ ತಂಡಕ್ಕಿರುವ ಅವಶ್ಯಕತೆಗಳ ಪಟ್ಟಿ ತಯಾರಿಸಿ ಹರಾಜಿಗೆ ಸಿದ್ಧವಾಗಿವೆ. ಈ ಬಾರಿ 10 ತಂಡಗಳಿಗಿರುವ ಅವಶ್ಯಕತೆ ಏನು? ಯಾವ ಆಟಗಾರರನ್ನು ಖರೀದಿಸಲು ಹೆಚ್ಚು ಪ್ರಯತ್ನಿಸಬಹುದು ಎಂಬುದರ ವಿಶ್ಲೇಷಣೆ ಇಲ್ಲಿದೆ.

1. ಚೆನ್ನೈ:
ಹಾಲಿ ಚಾಂಪಿಯನ್ ಚೆನ್ನೈ ಹೆಚ್ಚೂ ಕಡಿಮೆ ಕಳೆದ ಬಾರಿ ತಂಡವನ್ನೇ ಉಳಿಸಿಕೊಂಡಿದೆ. ಇದರ ಹೊರತಾಗಿಯೂ ತಂಡಕ್ಕೆ ಮ್ಯಾಚ್ ವಿನ್ನರ್ ಆಲ್ರೌಂಡರ್ ಆಗತ್ಯವಿದೆ. ಭಾರತೀಯ ಬ್ಯಾಟರ್, ವಿದೇಶಿ ವೇಗಿ ಮೇಲೆ ತಂಡ ಕಣ್ಣಿಟ್ಟಿದೆ.
2. ಡೆಲ್ಲಿ:
ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಬಾರಿಯ 9 ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ. 2024ರಲ್ಲಿ ರಿಷಭ್ ಪಂತ್ ಆಡುವ ಸಾಧ್ಯತೆಯಿದ್ದರೂ ಮೀಸಲು ವಿಕೆಟ್ ಕೀಪರ್ ತಂಡಕ್ಕೆ ಅತ್ಯಗತ್ಯ. ಭಾರತೀಯ ವೇಗಿ, ವಿದೇಶಿ ಹಾಗೂ ಭಾರತೀಯ ಬ್ಯಾಟರ್ಗಳು ಕೂಡಾ ತಂಡಕ್ಕೆ ಬೇಕಾಗಿದ್ದಾರೆ.
3. ಗುಜರಾತ್:
ಹಾರ್ದಿಕ್ ಮುಂಬೈ ಸೇರಿರುವ ಕಾರಣ ಅವರ ಸ್ಥಾನ ತುಂಬಬಲ್ಲ ಆಲ್ರೌಂಡರನ್ನು ಗುಜರಾತ್ ಹುಡುಕುತ್ತಿದೆ. ಮೀಸಲು ವಿಕೆಟ್ ಕೀಪರ್ ಮೇಲೂ ತಂಡ ಕಣ್ಣಿಟ್ಟಿದ್ದು, ಮಧ್ಯಮ ಕ್ರಮಾಂಕದ ಬ್ಯಾಟರ್ ಜೊತೆಗೆ ದೇಸಿ ಹಾಗೂ ವಿದೇಶಿ ವೇಗಿಗಳೂ ತಂಡಕ್ಕೆ ಅಗತ್ಯವಿದ್ದಾರೆ.
4. ಕೋಲ್ಕತಾ:
ಪ್ರಮುಖ ವೇಗಿಗಳನ್ನೆಲ್ಲಾ ತಂಡದಿಂದ ಕೈಬಿಟ್ಟಿರುವ ಕೋಲ್ಕತಾಕ್ಕೆ ಹರಾಜಿನಲ್ಲಿ ಭಾರತ ಹಾಗೂ ವಿದೇಶಿ ವೇಗಿಗಳನ್ನು ಖರೀದಿಸುವುದು ಪ್ರಮುಖ ಗುರಿ. ಮೀಸಲು ವಿಕೆಟ್ ಕೀಪರ್, ಆಲ್ರೌಂಡರ್ ಹೊಣೆ ನಿಭಾಯಿಸಬಲ್ಲ ಆಟಗಾರರೂ ತಂಡಕ್ಕೆ ಅತ್ಯಗತ್ಯ.
5. ಲಖನೌ:
ತಂಡದ ಬಳಿ ಇತರೆಲ್ಲಾ ತಂಡಕ್ಕಿಂತ ಕನಿಷ್ಠ ಅಂದರೆ ₹13.15 ಕೋಟಿ ಇದೆ. ಇಷ್ಟರಲ್ಲೇ ಮಧ್ಯಮ ಕ್ರಮಾಂಕದ ಬ್ಯಾಟರ್, ವೇಗದ ಬೌಲಿಂಗ್ ಆಲ್ರೌಂಡರ್, ತಜ್ಞ ವೇಗಿಯನ್ನು ತಂಡ ಖರೀದಿಸಬೇಕಿದೆ.
6. ಮುಂಬೈ:
ಹಾರ್ದಿಕ್ ಮರಳಿದ್ದರಿಂದ ತಂಡ ಬಲಿಷ್ಠವಾಗಿ ತೋರುತ್ತಿದ್ದರೂ ತಜ್ಞ ವೇಗಿಗಳ ಕೊರತೆ ಎದುರಾಗಬಹುದು. ಹೀಗಾಗಿ ಮುಂಚೂಣಿ ವೇಗಿಗಳ ಹುಡುಕಾಟದಲ್ಲಿದೆ. ಸ್ಪಿನ್ ಆಲ್ರೌಂಡರ್ ಕೂಡಾ ತಂಡದ ಮುಂದಿರುವ ಪ್ರಮುಖ ಗುರಿ.
7. ಪಂಜಾಬ್:
ತಂಡದ ಬಳಿ ₹29.1 ಕೋಟಿ ಇದ್ದು, 8 ಆಟಗಾರರು ಅಗತ್ಯವಿದೆ. ತಂಡಕ್ಕೆ ಅಗ್ರ, ಮಧ್ಯಮ ಕ್ರಮಾಂಕದ ದೇಸಿ, ವಿದೇಶಿ ಬ್ಯಾಟರ್ ಅಗತ್ಯವಿದ್ದು, ಕೆಲ ತಜ್ಞ ಭಾರತೀಯ ವೇಗಿಗಳು, ಆಲ್ರೌಂಡರ್ಗಳು ಬೇಕಾಗಿದ್ದಾರೆ.
8. ರಾಜಸ್ಥಾನ:
ರಾಜಸ್ಥಾನ ದೇಸಿ ಬೌಲಿಂಗ್ ಆಲ್ರೌಂಡರ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಕೊರತೆ ಎದುರಿಸುತ್ತಿದೆ. ಆದರೆ ಒಟ್ಟು 8 ಆಟಗಾರರನ್ನು ಖರೀದಿಸಲು ತಂಡದ ಬಳಿ ಕೇವಲ ₹14.5 ಕೋಟಿ ಇದೆ. ಹೀಗಾಗಿ ಹರಾಜಿನಲ್ಲಿ ಅಳೆದುತೂಗಿ ಖರೀದಿ ಮಾಡಬೇಕಾಗಬಹುದು.
9. ಆರ್ಸಿಬಿ:
ಬ್ಯಾಟಿಂಗ್ ವಿಭಾಗ ಈ ಬಾರಿಯೂ ಉತ್ತಮವಾಗಿರುವಂತೆ ತೋರುತ್ತಿದ್ದರೂ, ಮಧ್ಯಮ ಕ್ರಮಾಂಕದ ಬ್ಯಾಟರ್ ಅಗತ್ಯವಿದೆ. ತಂಡಕ್ಕೆ ಪ್ರಮುಖವಾಗಿ ಬೇಕಿರುವುದು ವೇಗಿಗಳು. ಮುಂಚೂಣಿ ಸ್ಪಿನ್ನರ್ ಕೊರತೆಯೂ ತಂಡಕ್ಕಿದ್ದು, ಮೀಸಲು ವಿಕೆಟ್ ಕೀಪರ್ ಕೂಡಾ ಬೇಕಿದೆ.
10. ಹೈದ್ರಾಬಾದ್:
ತಂಡದ ಬಳಿ ಸಾಕಷ್ಟು ಹಣವಿದ್ದು, ಪ್ರಮುಖ ಗುರಿ ವಿಶ್ವ ಶ್ರೇಷ್ಠ ಸ್ಪಿನ್ನರ್ ಹಾಗೂ ವಿದೇಶಿ ಬ್ಯಾಟರ್. ಪಂದ್ಯ ಗೆಲ್ಲಿಸಬಲ್ಲ ಆಲ್ರೌಂಡರ್ ಕೂಡಾ ತಂಡಕ್ಕೆ ಅತ್ಯಗತ್ಯ. ಮುಖ್ಯವಾಗಿ ಭಾರತೀಯ ವೇಗಿಯ ಕೊರತೆ ಎದುರಿಸುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.