ಧೋನಿ ನಿವೃತ್ತಿಯಾದ ರಾತ್ರಿ ಟೀಂ ಇಂಡಿಯಾದ ಇಬ್ಬರು ಕ್ರಿಕೆಟಿಗರು ನೆಮ್ಮದಿಯಿಂದ ನಿದ್ರೆ ಮಾಡಿದ್ರು..!
ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮಹೇಂದ್ರ ಸಿಂಗ್ ಧೋನಿ ಸ್ವಾತಂತ್ರ್ಯ ದಿನಾಚರಣೆಯ ದಿನದಂದೇ ಸಂಜೆ 7.29 ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದರು. 16 ವರ್ಷಗಳ ಭಾರತ ತಂಡದ ಆಧಾರಸ್ತಂಭವಾಗಿದ್ದ ಧೋನಿ ಹಲವಾರು ಅವಿಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ.
ಧೋನಿ ಬರೀ ಆಟಗಾರನ್ನಲ್ಲ. ಅವರಲ್ಲೊಬ್ಬ ಕೆಚ್ಚೆದೆಯ ನಾಯಕನಿದ್ದ, ಸ್ಪೋಟಕ ಬ್ಯಾಟ್ಸ್ಮನ್ ಇದ್ದ, ಚಾಣಾಕ್ಷ ವಿಕೆಟ್ ಕೀಪರ್ ಇದ್ದ. ಈ ಎಲ್ಲಾ ಕೌಶಲ್ಯಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ಧೋನಿ ಇಂದು ದಿಗ್ಗಜ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ. ಆದರೆ ಧೋನಿ ನಿವೃತ್ತಿಯಾದ ದಿನ ಟೀಂ ಇಂಡಿಯಾದ ಇಬ್ಬರು ಆಟಗಾರರು ಕೊನೆಗೂ ನಿಟ್ಟುಸಿರು ಬಿಟ್ಟರು ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಹೇಳಿದ್ದಾರೆ. ಯಾರು ಆ ಆಟಗಾರರು? ಯಾಕೆ ಹೀಗಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಸ್ಫರ್ಧಾತ್ಮಕ ಕ್ರಿಕೆಟ್ನಿಂದ ದೂರವೇ ಉಳಿದಿದ್ದರು.
ಅಂದಿನಿಂದ ಆಗಸ್ಟ್ 15ರವರೆಗೆ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು, ಅವರ ಮುಂದಿನ ನಡೆ ಏನು ಎನ್ನುವುದು ಸಾಕಷ್ಟು ಕುತೂಹಲ ಕೆರಳಿಸಿತ್ತು.
ಧೋನಿ ಭಾರತದಲ್ಲೇ ನಡೆಯಲಿರುವ ಟಿ20 ವಿಶ್ವಕಪ್ ಆಡಿ ಬಳಿಕ ನಿವೃತ್ತಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.
ಆದರೆ ಧೋನಿ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಸಂಜೆ 7.29ಕ್ಕೆ ಇಂದಿನಿಂದ ನಾನು ನಿವೃತ್ತನಾಗಿದ್ದೇನೆ ಎಂದು ಪರಿಗಣಿಸಿ ಎಂದು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಬರೆದುಕೊಳ್ಳುವ ಮೂಲಕ ತಮ್ಮ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿ ಎಲ್ಲಾ ಅಭಿಮಾನಿಗಳಿಗೆ ಶಾಕ್ ನೀಡಿದರು.
ಧೋನಿ ನಿವೃತ್ತಿಯಾದ ರಾತ್ರಿ ಟೀಂ ಇಂಡಿಯಾದ ಇಬ್ಬರು ಕ್ರಿಕೆಟಿಗರು ನೆಮ್ಮದಿಯಿಂದ ನಿದ್ರೆ ಮಾಡಿದರು ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಹೇಳಿದ್ದಾರೆ.
ನಾನು ಬೇಕಿದ್ದರೆ ಬೆಟ್ ಮಾಡುತ್ತೇನೆ ಧೋನಿ ನಿವೃತ್ತಿಯಾದ ರಾತ್ರಿ ಕೆ.ಎಲ್. ರಾಹುಲ್ ಹಾಗೂ ರಿಷಭ್ ಪಂತ್ ನೆಮ್ಮದಿಯ ನಿಟ್ಟುಸಿರು ಬಿಡುವುದರೊಂದಿಗೆ ನಿದ್ರೆ ಮಾಡಿದರು ಎಂದು ಆಸೀಸ್ ಮಾಜಿ ಆಟಗಾರ ಡೀನ್ ಜೋನ್ಸ್ ಟ್ವೀಟ್ ಮಾಡಿದ್ದಾರೆ.
ಮೊದಲಿನಿಂದಲೂ ಧೋನಿ ವಿಕೆಟ್ ಕೀಪಿಂಗ್ ಸ್ಥಾನದ ಮೇಲೆ ಪಂತ್ ಹಾಗೂ ರಾಹುಲ್ ಕಣ್ಣಿಟ್ಟಿದ್ದಾರೆ.
2019ರ ಏಕದಿನ ವಿಶ್ವಕಪ್ ಬಳಿಕ ಮೂರು ಮಾದರಿಯ ಕ್ರಿಕೆಟ್ಗೆ ರಿಷಭ್ ಪಂತ್ ಟೀಂ ಇಂಡಿಯಾದ ಮೊದಲ ಆಯ್ಕೆ ವಿಕೆಟ್ ಕೀಪರ್ ಎನಿಸಿದ್ದರು.
ಆದರೆ ಪಂತ್ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಸಂಜು ಸ್ಯಾಮ್ಸನ್ಗೆ ಅವಕಾಶ ನೀಡಲಾಯಿತು. ಸಂಜು ಕೂಡಾ ಸಿಕ್ಕ ಅವಕಾಶ ಬಳಸಿಕೊಳ್ಳಲು ವಿಫಲರಾದರು.
ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಪಂತ್ ಗಾಯಕ್ಕೆ ತುತ್ತಾಗಿದ್ದರಿಂದ ಕರ್ನಾಟಕದ ಆಟಗಾರ ಕೆ.ಎಲ್. ರಾಹುಲ್ಗೆ ವಿಕೆಟ್ ಕೀಪರ್ ಆಗುವ ಅವಕಾಶ ಒಲಿದು ಬಂತು.
ಈ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡ ರಾಹುಲ್ ವಿಕೆಟ್ ಕೀಪಿಂಗ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ನಾಯಕ ಕೊಹ್ಲಿಯ ಮನಗೆಲ್ಲುವಲ್ಲಿ ಯಶಸ್ವಿಯಾದರು.
ಆದರೆ ಧೋನಿ ನಿವೃತ್ತಿಯಾಗುವವರೆಗೂ ಈ ಇಬ್ಬರು ಆಟಗಾರರ ಪಾಲಿಗೆ ವಿಕೆಟ್ ಕೀಪರ್ ಆಗಿ ಸ್ಥಾನ ಉಳಿಸಿಕೊಳ್ಳುವುದು ಕನಸಿನ ಮಾತಾಗಿತ್ತು.
ಈಗ ಧೋನಿ ನಿವೃತ್ತಿ ಘೋಷಿಸಿರುವುದರಿಂದ ಇಬ್ಬರ ಹಾದಿ ಸುಲಭವಾಗಿದ್ದು, ಯಾರು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಟೀಂ ಇಂಡಿಯಾದಲ್ಲಿ ಭದ್ರವಾಗಿ ನೆಲೆಯೂರುತ್ತಾರೆ ಎಂದು ಕಾದು ನೋಡಬೇಕಿದೆ.