2021ರ ಐಪಿಎಲ್ ಟೂರ್ನಿಯಲ್ಲಿದ್ದಾರೆ 2011ರ ವಿಶ್ವಕಪ್ ವಿಜೇತ ತಂಡದಲ್ಲಿನ 6 ಕ್ರಿಕೆಟಿಗರು!
2011ರ ವಿಶ್ವಕಪ್ ಟೂರ್ನಿ ಗೆಲುವಿನ ಸಂಭ್ರಮಕ್ಕೆ 10 ವರ್ಷ ಸಂದಿದೆ. ಎಪ್ರಿಲ್ 2, 2011ರಲ್ಲಿ ಎಂ.ಎಸ್.ಧೋನಿ ನೇತೃತ್ವದ ಟೀಂ ಇಂಡಿಯಾ 2ನೇ ವಿಶ್ವಕಪ್ ಟ್ರೋಫಿ ಗೆದ್ದು ಇತಿಹಾಸ ಬರೆದಿತ್ತು. 2011ರ ವಿಶ್ವಕಪ್ ಗೆಲುವಿನ ತಂಡದಲ್ಲಿದ್ದ 6 ಕ್ರಿಕೆಟಿಗರು ಇದೀಗ 2021ರ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅವರು ಯಾರು? ಯಾವ ತಂಡದ ಪರ ಕಣಕ್ಕಿಳಿಯಲಿದ್ದಾರೆ? ಇಲ್ಲಿದೆ ವಿವರ
10 ವರ್ಷಗಳ ಹಿಂದೆ ಎಂ.ಎಸ್.ಧೋನಿ ನೇತೃತ್ವದ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿತ್ತು. ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಮಣಿಸಿದ ಭಾರತ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತು. ಈ ಸಂಭ್ರಮಕ್ಕೆ ಇದೀಗ 10 ವರ್ಷ ಸಂದಿದೆ. ಇದೀಗ ಈ ತಂಡದಲ್ಲಿನ 6 ಕ್ರಿಕೆಟಿಗರು ಇನ್ನು ಕೆಲವೇ ದಿನದಲ್ಲಿ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
2011ರ ವಿಶ್ವಕಪ್ ತಂಡದ ನಾಯಕ ಎಂ.ಎಸ್.ಧೋನಿ, 2021ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಆದರೆ ಐಪಿಎಲ್ ಟೂರ್ನಿಯಲ್ಲಿ ಸಕ್ರೀಯರಾಗಿದ್ದಾರೆ.
ವಿಶ್ವಕಪ್ ಗೆಲುವಿನ ತಂಡದ ಮತ್ತೊರ್ವ ಪ್ರಮುಖ ಸದಸ್ಯ ಸುರೇಶ್ ರೈನಾ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾರೆ. ಕಳೆದ ಆವೃತ್ತಿಯಿಂದ ಹೊರಗುಳಿದ ರೈನಾ, ಇದೀಗ ಅಬ್ಬರಿಸಲು ರೆಡೆಯಾಗಿದ್ದಾರೆ. ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಭಾರತ 28 ವರ್ಷಗಳ ಬಳಿಕ ವಿಶ್ವಕಪ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಸ್ಪಿನ್ನರ್ ಹರ್ಭಜನ್ ಸಿಂಗ್ ಈ ಬಾರಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಇತ್ತೀಚೆಗೆ ನಡೆದ ಹರಾಜಿನಲ್ಲಿ 2 ಕೋಟಿ ಮೂಲ ಬೆಲೆಗೆ ಹರ್ಭಜನ್ ಕೆಕೆಆರ್ ಪಾಲಾಗಿದ್ದರು.
ಧೋನಿ ವಿಶ್ವಕಪ್ ತಂಡದಲ್ಲಿದ್ದ ಮತ್ತೊರ್ವ ಸದಸ್ಯ ವಿರಾಟ್ ಕೊಹ್ಲಿ. 2011ರಲ್ಲಿ ಕಿರಿಯ ಸದಸ್ಯನಾಗಿದ್ದ ಕೊಹ್ಲಿ ಕಳೆದ 10 ವರ್ಷದಲ್ಲಿ ಟೀಂ ಇಂಡಿಯಾದ ಮೂರು ಮಾದರಿ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಇಷ್ಟೇ ಅಲ್ಲ ಆರ್ಸಿಬಿ ನಾಯಕನಾಗಿದ್ದಾರೆ. ಇದೀಗ ಕೊಹ್ಲಿ ನೇತೃತ್ವದ ಆರ್ಸಿಬಿ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹೋರಾಟ ನಡೆಸಲಿದೆ.
2011ರ ವಿಶ್ವಕಪ್ ವಿಜೇತ ತಂಡದ ಮತ್ತೊರ್ವ ಸದಸ್ಯ ಆರ್ ಅಶ್ವಿನ್ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮಖ ಸ್ಪಿನ್ನರ್. ಕಳೆದ 10 ವರ್ಷದಲ್ಲಿ ಅಶ್ವಿನ್ ಹಲವು ದಾಖಲೆ ಮುರಿದಿದ್ದಾರೆ.
ಧೋನಿ ತಂಡದಲ್ಲಿದ್ದ ವಿಶ್ವಕಪ್ ಗೆಲುವಿನ ತಂಡದ ಸದಸ್ಯ ಪಿಯೂಷ್ ಚಾವ್ಲಾ, ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡಲಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ 3ನೇ ಬೌಲರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2011ರ ವಿಶ್ವಕಪ್ ತಂಡದಲ್ಲಿದ್ದ ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್, ಗೌತಮ್ ಗಂಭೀರ್, ಜಹೀರ್ ಖಾನ್, ಆಶಿಶ್ ನೆಹ್ರಾ, ಮುನಾಫ್ ಪಟೇಲ್, ಯೂಸುಫ್ ಪಠಾಣ್ ಎಲ್ಲಾ ಮಾದರಿ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಮತ್ತೊರ್ವ ವೇಗಿ ಶ್ರೀಶಾಂತ್ ನಿಷೇಧ ಶಿಕ್ಷೆ ಮುಗಿಸಿ ದೇಶಿ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿದ್ದಾರೆ.