ಈ ಐವರು ಯಶಸ್ವಿ ಕ್ರಿಕೆಟಿಗರ ಹಿಂದಿದೆ ಧೋನಿ ಕೈವಾಡ..!
ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಪ್ರತಿಭಾನ್ವಿತ ಕ್ರಿಕೆಟಿಗರಿಗೆ ಹೆಚ್ಚು ಹೆಚ್ಚು ಅವಕಾಶ ನೀಡುವ ಮೂಲಕ ಇಂದು ಅವರು ಸ್ಟಾರ್ ಕ್ರಿಕೆಟಿಗರಾಗಿ ಬೆಳೆದು ನಿಲ್ಲುವಲ್ಲಿ ಧೋನಿ ಪಾತ್ರ ಅಪಾರ.
ಪ್ರಾರಂಭದಲ್ಲೇ ಅಂತಹ ಆಟಗಾರರಿಗೆ ವಿಶ್ವಾಸ ತುಂಬಿ ಅವರ ಬದುಕನ್ನೇ ಬದಲಿಸಿದ್ದು ಮಹೇಂದ್ರ ಸಿಂಗ್ ಧೋನಿ. ಅದು ರೋಹಿತ್ ಶರ್ಮಾನೇ ಇರಲಿ, ವಿರಾಟ್ ಕೊಹ್ಲಿಯೇ ಇರಲಿ ಅವರ ಮೇಲೆ ನಾಯಕರಾಗಿದ್ದ ಧೋನಿ ವಿಶ್ವಾಸವಿಟ್ಟಿದ್ದಕ್ಕೆ ಇಂದು ಇವರೆಲ್ಲಾ ಸ್ಟಾರ್ ಆಟಗಾರರಾಗಿ ಬೆಳೆದು ನಿಂತರು. ಧೋನಿ ಹಿಟ್ಮ್ಯಾನ್ ರೋಹಿತ್ಗೆ ಆರಂಭಿಕನಾಗಿ ಬಡ್ತಿ ನೀಡದೇ ಇದ್ದಿದ್ದರೆ ಇಂದು ಏನಾಗಿರುತ್ತಿದ್ದರೋ ಗೊತ್ತಿಲ್ಲ. ಇಂತಹ ಐವರು ಆಟಗಾರರ ಯಶಸ್ಸಿನ ಹಿಂದೆ ಧೋನಿಯ ಪಾತ್ರವಿದೆ. ಯಾರವರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
1. ರೋಹಿತ್ ಶರ್ಮಾ:
ಮಧ್ಯಮ ಕ್ರಮಾಂಕದಲ್ಲಿ ರನ್ ಬೀಸಲು ಪರದಾಡುತ್ತಿದ್ದ ರೋಹಿತ್ 2013ರಲ್ಲಿ ಆರಂಭಿಕನಾಗಲು ಧೋನಿ ಅವಕಾಶ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ರೋಹಿತ್ 86 ಏಕದಿನ ಪಂದ್ಯಗಳನ್ನಾಡಿ ಕೇವಲ 30.43ರ ಸರಾಸರಿಯಲ್ಲಿ ರನ್ ಗಳಿಸಿದ್ದರು. ಆರಂಭಿಕನಾಗುತ್ತಿದ್ದಂತೆ ರೋಹಿತ್ ಖದರ್ ಬದಲಾಯಿತು. 2013ರಿಂದ ಇಲ್ಲಿಯವರೆಗೆ ರೋಹಿತ್ 59ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ದ್ವಿಶತಕವೂ ಸೇರಿದಂತೆ 25 ಸೆಂಚುರಿ ಬಾರಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್ನಲ್ಲಿ ಆರಂಭಿಕನಾಗಿ 4 ಶತಕ ಬಾರಿಸಿ ದಾಖಲೆ ಬರೆದಿದ್ದಾರೆ.
2. ವಿರಾಟ್ ಕೊಹ್ಲಿ:
ಅಚ್ಚರಿಯಾದರೂ ಇದು ಸತ್ಯ. ವಿರಾಟ್ ಕೊಹ್ಲಿ ಇದೀಗ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಸರಾಗವಾಗಿ ರನ್ ಗಳಿಸುತ್ತಿದ್ದಾರೆ. ಆದರೆ ಧೋನಿ ಆರಂಭದಲ್ಲಿ ಬೆಂಬಲಿಸದಿದ್ದರೆ ಕೊಹ್ಲಿ ತಂಡದಲ್ಲಿ ಉಳಿಯುವುದು ಸುಲಭವಿರಲಿಲ್ಲ. ವಿರಾಟ್ ಮೊದಲ ಆರು ಟೆಸ್ಟ್ ಪಂದ್ಯಗಳಲ್ಲಿ ಕೇವಲ 21.27ರ ಸರಾಸರಿಯಲ್ಲಿ ರನ್ ಗಳಿಸಿದ್ದರು. ಇದರಲ್ಲಿ ಕೇವಲ 2 ಅರ್ಧಶತಕಗಳು ಮಾತ್ರ ಸೇರಿದ್ದವು. ಆದರೆ ಸತತವಾಗಿ ಕೊಹ್ಲಿ ಬೆನ್ನಿಗೆ ಧೋನಿ ನಿಲ್ಲುವ ಮೂಲಕ ಹೆಚ್ಚೆಚ್ಚು ಅವಕಾಶ ನೀಡಿದರು. ಇಂದು ಕೊಹ್ಲಿ ದಾಖಲೆಯ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ.
3. ರವೀಂದ್ರ ಜಡೇಜಾ
ರವೀಂದ್ರ ಜಡೇಜಾ ಇಂದು ಜಗತ್ತಿನ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರು ಎಂದು ಕರೆಸಿಕೊಳ್ಳುತ್ತಿದ್ದಾರೆ. ಆದರೆ ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದಾಗ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು. ಇದರಿಂದ ಧೋನಿ ಟೀಕೆಗಳನ್ನು ಎದುರಿಸಬೇಕಾಯಿತು. ಆದರೆ ಇದ್ಯಾವುದನ್ನು ಲೆಕ್ಕಿಸದೇ ಧೋನಿ ಜಡ್ಡುಗೆ ಮತ್ತಷ್ಟು ಅವಕಾಶ ನೀಡಿದರು. ಪರಿಣಾಮ ಇದರ ಫಲಿತಾಂಶ ನಮ್ಮ ಮುಂದೆಯೇ ಇದೆ.
4. ಇಶಾಂತ್ ಶರ್ಮಾ:
ಡೆಲ್ಲಿ ವೇಗಿ ಇಶಾಂತ್ ಶರ್ಮಾ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿ 12 ವರ್ಷಗಳೇ ಕಳೆದಿವೆ. ಆದರೆ ಅಸ್ಥಿರ ಪ್ರದರ್ಶನದಿಂದಾಗಿ ಆಗಾಗ ತಂಡದಿಂದ ಒಳಗೆ ಹೊರಗೆ ಹೋಗುತ್ತಿರುತ್ತಾರೆ. ಹೀಗಿದ್ದು ಧೋನಿ ಅವರ ಮೇಲೆ ವಿಶ್ವಾಸವಿಟ್ಟಿದ್ದರಿಂದ ಚಾಂಪಿಯನ್ಸ್ ಟ್ರೋಫಿ ನಮ್ಮದಾಯಿತು. ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಇಶಾಂತ್ ದುಬಾರಿಯಾಗಿದ್ದರೂ 18ನೇ ಓವರ್(20 ಓವರ್ಗಳಿಗೆ ಸೀಮಿತವಾಗಿದ್ದ ಪಂದ್ಯ) ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ನಾಯಕ ಧೋನಿ ಇಶಾಂತ್ಗೆ ನೀಡಿದರು. ಆ ಮೇಲೆ ಆಗಿದ್ದು ಇತಿಹಾಸ.
5. ಸುರೇಶ್ ರೈನಾ:
ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ 2005ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರೂ, ಧೋನಿ ನಾಯಕತ್ವದಲ್ಲಿ ಅಕ್ಷರಶಃ ಗಮನಾರ್ಹ ಪ್ರದರ್ಶನ ತೋರಿದ್ದರು. 2006ರಿಂದ 2008ರ ಅವಧಿಯಲ್ಲಿ ರೈನಾ ರನ್ಗಳಿಸಲು ಪರದಾಡಿದ್ದರೂ ಆದರೂ ಅವರನ್ನು ಬೆಂಬಲಿಸಿದರು. ಪರಿಣಾಮ 2011ರ ಏಕದಿನ ವಿಶ್ವಕಪ್ ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್ನಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ತಂಡ ಫೈನಲ್ಗೇರಲು ರೈನಾ ನೆರವಾಗಿದ್ದರು. ಇದೀಗ ರೈನಾ ಕೂಡಾ ಧೋನಿ ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.