ಹೊಳೆಆಲೂರು: ನೆರೆ ನಿರ್ವಹಣೆ ವಿಷಯದಲ್ಲಿ ಬೇಜವಾಬ್ದಾರಿ ಸಹಿಸೋದೆ ಇಲ್ಲ
ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಎಚ್ಚರಿಕೆ| ನೆರೆ ಪೀಡಿತ ರೋಣ ತಾಲೂಕಿನ ಹೊಳೆಆಲೂರಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ ಸಚಿವ ಸಿ.ಸಿ. ಪಾಟೀಲ| ರಾಜ್ಯ ಸರ್ಕಾರ ಅಗತ್ಯ ಹಣ ಒದಗಿಸುತ್ತಿದೆ| ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಪರಿಸ್ಥಿತಿ ಕುರಿತು ಸದಾ ನಿಗಾ ವಹಿಸಬೇಕು|
ಗದಗ[ಅ.24]: ನೆರೆಯಿಂದಾಗಿ ಪದೇ ಪದೆ ಸಂಕಷ್ಟಕ್ಕೆ ಒಳಗಾಗುತ್ತಿರುವ ಜನರ ಸಮಸ್ಯೆ ಪರಿಹಾರಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರಂತರ ಕಾಳಜಿ ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಬೇಜವಾಬ್ದಾರಿ ತೋರಿದಲ್ಲಿ ಅವರನ್ನು ಕ್ಷಮಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಎಚ್ಚರಿಸಿದ್ದಾರೆ.
ನೆರೆ ಪೀಡಿತ ರೋಣ ತಾಲೂಕಿನ ಹೊಳೆಆಲೂರಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜಿಲ್ಲಾಡಳಿತಗಳಿಗೆ ರಾಜ್ಯ ಸರ್ಕಾರ ಅಗತ್ಯ ಹಣ ಒದಗಿಸುತ್ತಿದ್ದು, ಗದಗ ಜಿಲ್ಲಾಡಳಿತದ ಬಳಿ ನೆರೆ ಮತ್ತು ಮಳೆ ವಿಪತ್ತು ನಿರ್ವಹಣೆ ಕುರಿತಂತೆ ಸಾಕಷ್ಟು ಅನುದಾನ ಲಭ್ಯವಿದೆ. ಆಗಸ್ಟ್ ತಿಂಗಳಿನ ಹಾಗೂ ಈಗಿನ ನೆರೆ ಪರಿಸ್ಥಿತಿಯನ್ನು ಗ್ರಾಮ ಮಟ್ಟದಿಂದ ಜಿಲ್ಲಾಧಿಕಾರಿ ವರೆಗೂ ಉತ್ತಮ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಇಷ್ಟೆಲ್ಲಾ ಇದ್ದರೂ ಗ್ರಾಮದ ಅಧಿಕಾರಿ-ಸಿಬ್ಬಂದಿಯಿಂದ ಸಣ್ಣ ತಪ್ಪಾದರೂ ಅದು ಮಾಧ್ಯಮವರಿಗೆ ಆಹಾರವಾಗಿ ನಮಗೆ ಅಪವಾದ ತಪ್ಪುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರವಾಹ ಸಂದರ್ಭದಲ್ಲಿ ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ಮೊಬೈಲ್ ಬಂದ ಮಾಡದೇ ಗ್ರಾಪಂ ವ್ಯಾಪ್ತಿಯಲ್ಲಿದ್ದು, ಪರಿಸ್ಥಿತಿ ಕುರಿತು ಸದಾ ನಿಗಾ ವಹಿಸಬೇಕು ಎಂದರು.
ತುರ್ತು ಸ್ಥಿತಿ ಇದ್ದಾಗ ಜಿಲ್ಲಾಧಿಕಾರಿ ಗಮನಕ್ಕೆ ತಂದು ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರ ಪ್ರಾರಂಭಿಸಿ ಜನರ ಸಮಸ್ಯೆಗಳ ಪರಿಹಾರಕ್ಕೆ ಅವಶ್ಯಕ ಕ್ರಮ ಜರುಗಿಸಬೇಕು. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ನೆರೆ ಪರಿಸ್ಥಿತಿ ಇಳಿಮುಖವಾಗುವವರೆಗೂ ಬೆಳಗ್ಗೆ ಹಾಗೂ ಸಂಜೆ ಪರಿಸ್ಥಿತಿ ಕುರಿತು ತಮಗೆ ವರದಿ ನೀಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಹೊಳೆಆಲೂರ ಗ್ರಾಪಂ ಅಧ್ಯಕ್ಷೆ ಸುಮಂಗಲಾ ಕಾತರಕಿ, ರೋಣ ತಹಸೀಲ್ದಾರ್ ಶರಣಮ್ಮ ಕಾರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ, ತಾಪಂ, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.