Asianet Suvarna News Asianet Suvarna News

ಕಾಫಿನಾಡಲ್ಲಿ ಗಣಪತಿ ಸೇವಾ ಸಮಿತಿಗೆ ಮುಸ್ಲಿಂ ಮಹಿಳೆ ಅಧ್ಯಕ್ಷೆ!

  • ಈ ವರ್ಷ ನಾನಾ ರೂಪದಲ್ಲಿ ವಿಘ್ನ ವಿನಾಯಕನ ಹಬ್ಬ
  • ಕಾಫಿನಾಡಿನಲ್ಲಿ ಗಣಪತಿ ಸೇವಾ ಸಮಿತಿಗೆ ಮುಸ್ಲಿಂ ಮಹಿಳೆ ಅಧ್ಯಕ್ಷೆ
  • ಮುಸ್ಲಿಂ ಮಹಿಳೆ ನೇತೃತ್ವದಲ್ಲಿ ಗಣಪತಿಗೆ ಪೂಜೆ 
  • ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರದಲ್ಲಿ ಗಣೇಶೋತ್ಸವ
Ganapati Seva Samiti Muslim Women President NR Pura Chikkamagaluru
Author
First Published Aug 31, 2022, 7:45 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 
ಚಿಕ್ಕಮಗಳೂರು (ಆ.31) : ರಾಜ್ಯಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಕಟ್ಟಿದೆ. ಈದ್ಗಾ ಮೈದಾನದಲ್ಲಿ ಗಣೇಶೋತ್ಸವ, ಸಾವರ್ಕರ್ ಗಣೇಶೋತ್ಸವ, ಅಪ್ಪು ಗಣೇಶೋತ್ಸವ ಹೀಗೆ ಈ ವರ್ಷ ನಾನಾ ರೂಪದಲ್ಲಿ ವಿಘ್ನ ವಿನಾಯಕನ ಹಬ್ಬ ನಡೆಯುತ್ತಿದೆ. ಆದರೆ, ಕಾಫಿನಾಡ ಗಣಪತಿ ಸೇವಾ ಸಮಿತಿಗೆ ಮುಸ್ಲಿಂ ಮಹಿಳೆ ಅಧ್ಯೆಕ್ಷೆಯಾಗಿ, ಗಣಪತಿ ಕೂರಿಸಿ, ಪೂಜೆ ಮಾಡಿ ನಾವೆಲ್ಲಾ ಭಾರತೀಯರು, ನಾವೆಲ್ಲಾ ಒಂದು ಎಂಬಂತಹಾ ಸಾಮಾಜಿಕ ಸಾಮರಸ್ಯದ ಗಣೇಶೋತ್ಸವ ನಡೆಯುತ್ತಿದೆ.

ಮುಸ್ಲಿಂ ವ್ಯಕ್ತಿಯಿಂದ ಗಣಪತಿ ದೇಗುಲ ನಿರ್ಮಾಣ: ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಕೋಲಾರ..

ಕಾಫಿನಾಡಿನಲ್ಲಿ ಸಾಮರಸ್ಯದ ಗಣೇಶೋತ್ಸವ:

ಚಿಕ್ಕಮಗಳೂರು(Chikkamagaluru) ಜಿಲ್ಲೆ ಎನ್.ಆರ್.ಪುರ(N.R.Pura) ತಾಲೂಕಿನ ಜುಬೇದಾ(Jubeda). ಮೂಲತಃ ಮುಸ್ಲಿಂ ಮಹಿಳೆ(Muslim Woman), ಪ್ರಸ್ತುತ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಕೂಡ. ಎನ್.ಆರ್.ಪುರ ತಾಲೂಕಿನ ರಾಜೀವ್ ನಗರದ ಗಣಪತಿ ಸೇವಾ ಸಮಿತಿಯಲ್ಲಿ ಕಳೆದ 13 ವರ್ಷಗಳಿಂದ ಇವರೇ ಅಧ್ಯಕ್ಷರು. ಇವರ ಅಧ್ಯಕ್ಷತೆಯಲ್ಲಿ ಈ ವರ್ಷವೂ ಕೂಡ ಗಣಪತಿಯನ್ನ ಪ್ರತಿಷ್ಠಾಪಿಸಿದ್ದಾರೆ. ಇವರೇ ಪೂಜೆ ಕೂಡ ಮಾಡುತ್ತಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಮಹಿಳೆ ಮನೆಯಿಂದ ಹೊರಬಂದು ದುಡಿಯೋದಕ್ಕೆ ನಿರ್ಬಂಧವಿದೆ. ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳೋದು ಅಪರಾಧ. ಆದರೆ, ಇವರು ಸಮುದಾಯದ ಕಟ್ಟುಪಾಡುಗಳನ್ನ ವಿರೋಧಿಸಿ ಕಳೆದ ಎರಡು ದಶಕಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನ ತೊಡಗಿಸಿಕೊಂಡು 13 ವರ್ಷಗಳಿಂದ ಗ್ರಾಮದ ಯುವಕರ ಜೊತೆಗೂಡಿ ಗಣಪತಿ ಕೂರಿಸಿ ನಾವೆಲ್ಲಾ ಭಾರತೀಯರು, ನಾವೆಲ್ಲಾ ಒಂದು ಎಂಬ ಸಾಮಾಜಿಕ ಸಾಮರಸ್ಯದ ಸಂದೇಶವನ್ನ ಸಾರುತ್ತಿದ್ದಾರೆ. ನಮ್ಮ ಮನೆಯವರು ನಮಗೆ ಧರ್ಮದ ಕಟ್ಟುಪಾಡುಗಳನ್ನ ತುಂಬಿಲ್ಲ, ನಾವು ಯುವಪೀಳಿಗೆಗೆ ಆ ಧರ್ಮದ ಕಟ್ಟುಪಾಡುಗಳನ್ನ ತುಂಬೋದು ಬೇಡ, ಜಾತಿ-ಧರ್ಮ-ಸಂಪ್ರದಾಯ ಮನೆಗಳಲ್ಲಿರಲಿ. ದೇಶದ ಅಭಿವೃದ್ಧಿ, ಸಮಾಜದ ಶಾಂತಿ-ಸಾಮರಸ್ಯಕ್ಕೆ ಜಾತಿ-ಧರ್ಮಗಳ ಕಟ್ಟುಪಾಡುಗಳು ಅಡ್ಡಿಯಾಗಬಾರದು ಎಂದು ಯುವಜನತೆಗೆ  ಸಂಘದ ಅಧ್ಯಕ್ಷೆ ಜುಬೇದಾ ಮನವಿ ಮಾಡಿದ್ದಾರೆ. 

ಗಣಪತಿ ಪಕ್ಕದಲ್ಲಿ ಪವರ್ ಸ್ಟಾರ್ ಪೋಟೋ:

ಜುಬೇದಾ ಅವರ ಉತ್ತೇಜನದಿಂದ ರಾಜೀವ್ ನಗರ(Rajeev Nagar)ದ ಎಲ್ಲಾ ಧರ್ಮದ ಯುವಕರು ಕೂಡ ಒಂದಾಗಿ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಂಬ ಭೇದ-ಭಾವವಿಲ್ಲ. ಇವರು ಕೇವಲ ಗಣಪತಿ ಹಬ್ಬವನ್ನಷ್ಟೆ ಅಲ್ಲದೆ ಎಲ್ಲಾ ಧರ್ಮದ ಎಲ್ಲಾ ಹಬ್ಬಗಳನ್ನ ಇದೇ ರೀತಿ ನಗರದ ಎಲ್ಲಾ ಹುಡುಗರ ಜೊತೆ ಸೇರಿ ಆಚರಿಸುತ್ತಾರೆ. ಈ ವರ್ಷ ಗಣಪತಿ ಜೊತೆ ನಮ್ಮನ್ನೆಲ್ಲಾ ಹಗಲಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಫೋಟೋವನ್ನೂ ಗಣಪತಿ ಪಕ್ಕದಲ್ಲಿ ಇಟ್ಟು ಪೂಜೆ ಮಾಡುತ್ತಿದ್ದಾರೆ.  ಗಣಪತಿಯನ್ನ ಪ್ರತಿಷ್ಠಾಪಿಸಿ ಪೂಜೆ ಮಾಡಿ ಪ್ರಸಾದ ನೀಡುತ್ತಿದ್ದಾರೆ. ಮುಸ್ಲಿಂ ಮಹಿಳೆಯಾದರೂ ಇವರ ಈ ಕೆಲಸಕ್ಕೆ ಸ್ಥಳಿಯರು ಕೂಡ ಇವರಿಗೆ ಸಾಥ್ ನೀಡಿದ್ದಾರೆ. 

ಗಣೇಶ ಚತುರ್ಥಿ 2022: ಗಣಪತಿ ಶ್ಲೋಕಗಳು ಮತ್ತು ಅವುಗಳ ಅರ್ಥ

ಒಟ್ಟಾರೆ, ಚುನಾವಣೆ ವರ್ಷ ಎಂದೋ ಅಥವಾ ಜನಗಳ ಮನಸ್ಥಿತಿಯೇ ಬದಲಾಗ್ತಿದ್ಯೋ ಗೊತ್ತಿಲ್ಲ. ಆದರೆ, ದಿನದಿಂದ ದಿನಕ್ಕೆ ಸಮಾಜ ಆತಂಕದಲ್ಲೇ ಬದುಕುತ್ತಿರುವ ಸ್ಥಿತಿಯಂತೂ ನಿರ್ಮಾಣವಾಗಿದೆ. ನಾವೆಲ್ಲಾ ಭಾರತೀಯರು, ನಾವೆಲ್ಲಾ ಒಂದು ಎಂಬಂತಹ ವಿವಿಧತೆಯಲ್ಲಿ ಏಕತೆ ಇರಬೇಕಾದ ಮನಸ್ಥಿತಿ ಪ್ರಸ್ತುತ ಸಮಾಜಕ್ಕೆ ಅತ್ಯಗತ್ಯವಾಗಿದೆ. ಇನ್ನಾದ್ರು ಗೌರಿ-ಗಣೇಶ ಎಲ್ಲಾ ಜಾತಿ-ಧರ್ಮದವರಿಗೆ ಆ ಮನಸ್ಥಿತಿ ನೀಡಲೆಂದು ನಾವು ಬೇಡಿಕೊಳ್ಳೋಣ.

Follow Us:
Download App:
  • android
  • ios