ಕರಾವಳಿಯಲ್ಲಿ ಗ್ರಾಮೀಣ ಸೊಗಡಿನ ಹೊಸ್ತು ಹಬ್ಬ
ಹೊಸ ಫಲ ಅಥವಾ ಫಸಲನ್ನು ಮನೆಗೆ ತರುವ ಪ್ರಕ್ರಿಯೆಯನ್ನು ಕರಾವಳಿ ಭಾಗದಲ್ಲಿ ವಿಶೇಷ ಹೊಸ್ತು ಹಬ್ಬವಾಗಿ ಆಚರಿಸಲಾಗತ್ತದೆ. ಐತಿಹಾಸಿಕ ಗ್ರಾಮೀಣ ಸೊಗಡನ್ನು ಹೊಂದಿರುವ ಈ ವಿಶೇಷ ಹೊಸ್ತು ಹಬ್ಬವನ್ನು ಆಚರಿಸದಿದ್ದರೆ ಮುಂಬರುವ ಯಾವ ಹಬ್ಬವನ್ನೂ ಆಚರಿಸಲಾಗಲ್ಲ ಅನ್ನೋ ಪ್ರತೀತಿಯೂ ಇದೆ.
ವರದಿ: ಭರತ್ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣನ್ಯೂಸ್
ಕಾರವಾರ (ಅ.24): ಹೊಸ ಫಲ ಅಥವಾ ಫಸಲನ್ನು ಮನೆಗೆ ತರುವ ಪ್ರಕ್ರಿಯೆಯನ್ನು ಕರಾವಳಿ ಭಾಗದಲ್ಲಿ ವಿಶೇಷ ಹೊಸ್ತು ಹಬ್ಬವಾಗಿ (ತೆನೆ ಹಬ್ಬ) ಆಚರಿಸಲಾಗತ್ತದೆ. ಐತಿಹಾಸಿಕ ಗ್ರಾಮೀಣ ಸೊಗಡನ್ನು ಹೊಂದಿರುವ ಈ ವಿಶೇಷ ಹೊಸ್ತು ಹಬ್ಬವನ್ನು ಆಚರಿಸದಿದ್ದರೆ ಮುಂಬರುವ ಯಾವ ಹಬ್ಬವನ್ನೂ ಆಚರಿಸಲಾಗಲ್ಲ ಅನ್ನೋ ಪ್ರತೀತಿಯೂ ಇದೆ. ಈ ಹಬ್ಬದ ಹಿನ್ನೆಲೆ ಇಡೀ ಊರಿಗೆ ಊರೇ ಗ್ರಾಮಗಳ ಗದ್ದೆಗೆ ತೆರಳಿ, ಅಲ್ಲಿ ಪೂಜೆ ಮಾಡಿದ ಬಳಿಕ ಕದರು ತರುವ ಸಂಪ್ರದಾಯವಿದೆ. ತಲೆತಲಾತರಗಳಿಂದ ಆಚರಿಸಿಕೊಂಡು ಬರುತ್ತಿರುವ ಹಬ್ಬಗಳು ಇಂದಿನ ಆಧುನಿಕ ದಿನಗಳಲ್ಲಿ ಸದ್ದಿಲ್ಲದೇ ಮರೆಯಾಗುತ್ತಿದೆ. ಯುವ ಪೀಳಿಗೆ ಹಬ್ಬ, ಸಂಪ್ರದಾಯಗಳ ಆಚರಣೆಗಳಿಂದ ದೂರ ಸರಿಯುತ್ತಿದ್ದಾರೆ. ಈ ನಡುವೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ಇಡೀ ಊರಿಗೆ ಊರೇ ಜನರು ಒಟ್ಟು ಸೇರಿ ವಿಶೇಷ ಹೊಸ್ತಿನ ಹಬ್ಬವನ್ನು ಆಚರಿಸುತ್ತಾರೆ. ನೂರಾರು ವರ್ಷಗಳಿಂದ ಈ ಭಾಗದ ರೈತರು ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದು, ಇದನ್ನು ಹರಣ ಮೂರ್ತ, ಹೊಸ ಧಾನ್ಯ ಮುಂತಾದ ಹೆಸರುಗಳಿಂದ ಕರೆಯಲಾಗತ್ತದೆ. ಹಬ್ಬದ ದಿನದಂದು ವಾದ್ಯ ಮೇಳದೊಂದಿಗೆ ಭಕ್ತರು ಹಾಗೂ ಅರ್ಚಕರು ಈ ಹಬ್ಬಕ್ಕಾಗಿಯೇ ಮೀಸಲಾಗಿಡುವ ಗದ್ದೆಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಭತ್ತದ ತೆನೆ ಹೊತ್ತು ತರತ್ತಾರೆ. ಈ ಹಬ್ಬದಲ್ಲಿ ಕುಮಟಾದ ಬರ್ಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಎಲ್ಲಾ ಸಮುದಾಯದವರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.
ಮಲೆನಾಡಲ್ಲಿ ದೀಪಾವಳಿಗೆ ಹುಲಿ, ಸಿಂಹ, ಕರಡಿಗಳ ಅಬ್ಬರ!
ಇನ್ನು ಈ ಹಬ್ಬದಂದು ಗ್ರಾಮ ದೇವತೆಗಳಾದ ಯಜಮಾನ, ಘಟಭೀರ ದೇವರ ಕಳಸ ಹೊತ್ತು ನೂರಾರು ಭಕ್ತರು ಮೆರವಣಿಗೆಯಲ್ಲಿ ಸಾಗಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬರುತ್ತಾರೆ. ಬಳಿಕ ಹೊಸ್ತಿನ ಹಬ್ಬಕ್ಕೆ ಮೀಸಲಾಗಿಡುವ ಗದ್ದೆಗೆ ಆರ್ಚಕರು ಹಾಗೂ ಗ್ರಾಮದ ಜನರು ತೆರಳಿ ಕದಿರು ಕೊಯ್ಯಲಾಗುತ್ತದೆ. ನಂತರ ಪ್ರತಿಯೊಬ್ಬರು ತಲೆಯ ಮೇಲೆ ಕದಿರು ಹೊತ್ತು ಅವರವರ ಮನೆಗೆ ತೆರಳುತ್ತಾರೆ. ಮನೆಯಲ್ಲಿ ಸದಾ ಧಾನ್ಯ ಲಕ್ಷ್ಮಿ ನೆಲೆಸಬೇಕು ಅನ್ನೋ ಪ್ರಾರ್ಥನೆಯೊಂದಿಗೆ ದೇವಸ್ಥಾನದಿಂದ ಮನೆ ತರಲಾದ ಕದಿರನ್ನು ತಮ್ಮ ತಮ್ಮ ಮನೆಯ ಬಾಗಿಲು, ಕೃಷಿ ಉಪಕರಣಗಳು ಹಾಗೂ ಅಕ್ಕಿ ಸಂಗ್ರಹಿಸುವ ದೊಡ್ಡ ಪಾತ್ರೆ ಅಥವಾ ಮಡಿಕೆಗಳಿಗೆ ಕಟ್ಟಲಾಗುತ್ತದೆ.
Appu Food Festival ವಿವಿ ಪುರಂನಲ್ಲಿ ಪತಿ ಫೇವರೆಟ್ ದೋಸೆ ಸವಿದ ಅಶ್ವಿನಿ ಮತ್ತು ಮಗಳು!
ಒಟ್ಟಿನಲ್ಲಿ ಅನಾದಿ ಕಾಲದಿಂದಲೂ ಕುಮುಟಾದ ಬರ್ಗಿ ಹಾಗೂ ಇತರ ಗ್ರಾಮಗಳಲ್ಲಿ ಈ ವಿಶೇಷ ಹೊಸ್ತಿನ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಗ್ರಾಮೀಣ ಸೊಡಗಿನೊಂದಿಗೆ ವಿಶೇಷ ಅರ್ಥಗಳನ್ನು ಹೊಂದಿರುವ ಈ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಯೂ ನಡೆಸಿಕೊಂಡು ಹೋಗಬೇಕಿದೆ.