* ವಿದ್ಯಾರ್ಥಿನಿಯರ ತಿರುಗಾಟಕ್ಕೆ ನಿರ್ಬಂಧ ವಿಧಿಸಿ ಹೊರಡಿಸಿದ್ದ ಆದೇಶ ವಾಪಸ್* ಸುತ್ತೋಲೆಯನ್ನು ವಾಪಸ್ ಪಡೆದ ಮೈಸೂರು ವಿಶ್ವವಿದ್ಯಾಲಯ * ಸಂಜೆ 6.30ರ ನಂತರ ವಿದ್ಯಾರ್ಥಿನಿಯರ ತಿರುಗಾಟಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದ ವಿವಿ

ಮೈಸೂರು, (ಆ.28): ಮಾನಸಗಂಗೋತ್ರಿ ಆವರಣದಲ್ಲಿ ಸಂಜೆ 6.30ರ ನಂತರ ವಿದ್ಯಾರ್ಥಿನಿಯರ ತಿರುಗಾಟಕ್ಕೆ ನಿರ್ಬಂಧ ವಿಧಿಸಿ ಹೊರಡಿಸಿದ್ದ ಸುತ್ತೋಲೆಯನ್ನು ಮೈಸೂರು ವಿಶ್ವವಿದ್ಯಾಲಯ ವಾಪಸ್‌ ಪಡೆದಿದೆ.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಸೂಚನೆ ಮೇರೆಗೆ ಸೂಚನೆ ಮೇರೆಗೆ ಆದೇಶ ಹಿಂಪಡೆಯಲಾಗಿದೆ. ಈ ಬಗ್ಗೆ ಇಂದು (ಆ.28) ಮೈಸೂರು ವಿವಿಯ ಕುಲಸಚಿವರು ಹೊಸ ಸುತ್ತೋಲೆ ಹೊರಡಿಸಿದ್ದಾರೆ.

ಶಿಕ್ಷಣ ಸಚಿವ ಸೂಚನೆ ಮೇರೆಗೆ ಮೈಸೂರು ವಿವಿಯಲ್ಲಿ ವಿದ್ಯಾರ್ಥಿನಿಯರ ಸಂಚಾರ ನಿರ್ಬಂಧ ಆದೇಶ ವಾಪಸ್

 ಮಾನಸಗಂಗೋತ್ರಿ ಆವರಣದಲ್ಲಿ ಸಂಜೆ ನಂತರ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು. ನಿತ್ಯ ಸಂಜೆ 6ರಿಂದ 9ರವರೆಗೆ ಗಸ್ತು ತಿರುಗಲು ಭದ್ರತಾ ಸಿಬ್ಬಂದಿ ನಿಯೋಜಿಸಲಾಗುವುದು. ಸಂಜೆ 6.30ರ ನಂತರ ಸುರಕ್ಷತಾ ದೃಷ್ಟಿ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಕುಕ್ಕರಹಳ್ಳಿ ಕೆರೆ ಆವರಣ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಹೊಸ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಸಾಂಸ್ಕೃತಿಕ ನಗರಿಯಲ್ಲಿ ವಿದ್ಯಾರ್ಥಿನಿಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಬಿಳಿಕ ಕ್ಯಾಂಪಸ್‌ನಲ್ಲಿ ಸಂಜೆ 6.30ರ ನಂತರ ಹೆಣ್ಣು ಮಕ್ಕಳು ಒಂಟಿಯಾಗಿ ತಿರುಗಾಡುವುದನ್ನು ಹಾಗೂ ಕೂರುವುದನ್ನು ನಿಷೇಧಿಸಲಾಗಿದೆ ಎಂದು ಆ.26ರಂದು ಕುಲಸಚಿವ ಪ್ರೊ.ಆರ್‌.ಶಿವಪ್ಪ ಸುತ್ತೋಲೆ ಹೊರಡಿಸಿದ್ದರು.

ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಿಕ್ಕಾಪಟೆ ಟ್ರೋಲ್ ಆಗಿತ್ತು.

ಇದರ ಬೆನ್ನಲೇ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಸೂಚನೆ ಮೇರೆಗೆ ವಿದ್ಯಾರ್ಥಿನಿಯರ ಓಡಾಟಕ್ಕೆ ನಿರ್ಬಂಧ ಆದೇಶವನ್ನು ಮೈಸೂರು ವಿಶ್ವವಿದ್ಯಾಲಯ ಹಿಂಪಡೆದಿದೆ. ಆದರೆ ಮೈಸೂರಿನ ಕುಕ್ಕರವಳ್ಳಿ ಕೆರೆ ಸುತ್ತ ನಿರ್ಬಂಧ ಮುಂದುವರೆಸಿದೆ.