ಕೆಎಎಸ್ ಅಧಿಕಾರಿಗಳ 2 ಆಯ್ಕೆ ಪಟ್ಟಿಅಸಿಂಧು
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕ ವಿಚಾರ ಕುರಿತು ಹೈಕೋರ್ಟ್ ಆದೇಶದಂತೆ ಕರ್ನಾಟಕ ಲೋಕಸೇವಾ ಆಯೋಗ 2019ರ ಜ.25 ಹಾಗೂ ಆ.22ರಂದು ಪ್ರಕಟಿಸಿದ್ದ ಎರಡು ಆಯ್ಕೆ ಪಟ್ಟಿಗಳನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ತಿರಸ್ಕರಿಸಿದೆ.
ಬೆಂಗಳೂರು (ಸೆ.09): 1998, 1999 ಹಾಗೂ 2004ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕ ವಿಚಾರ ಕುರಿತು ಹೈಕೋರ್ಟ್ ಆದೇಶದಂತೆ ಕರ್ನಾಟಕ ಲೋಕಸೇವಾ ಆಯೋಗ 2019ರ ಜ.25 ಹಾಗೂ ಆ.22ರಂದು ಪ್ರಕಟಿಸಿದ್ದ ಎರಡು ಆಯ್ಕೆ ಪಟ್ಟಿಗಳನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಅನೂರ್ಜಿತಗೊಳಿಸಿದೆ. ಅಲ್ಲದೆ, 2002ರಲ್ಲಿ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರಿದ್ದ ನ್ಯಾಯಪೀಠಗಳು ನೀಡಿದ್ದ ಆದೇಶಗಳಂತೆ ಹೊಸ ಆಯ್ಕೆ ಪಟ್ಟಿಪ್ರಕಟಿಸಬೇಕು ಎಂದು ಕೆಪಿಎಸ್ಸಿಗೆ ಸೂಚಿಸಿದೆ.
ಕೆಎಟಿ ಆದೇಶ ಪಾಲನೆಯಿಂದ ಕೆಪಿಎಸ್ಸಿ ಆಗಸ್ಟ್ 22ರಂದು ಹೊರಡಿಸಿರುವ ಎರಡನೇ ಆಯ್ಕೆ ಪಟ್ಟಿಯಂತೆ 173 ಹುದ್ದೆಗಳಲ್ಲಿ ಈಗಾಗಲೇ ಬದಲಾವಣೆಯಾಗಿದೆ. ಇದೀಗ ಮತ್ತೊಮ್ಮೆ ಹುದ್ದೆಗಳಲ್ಲಿ ಏರುಪೇರಾಗಲಿದೆ. ಜೊತೆಗೆ, ಐಎಎಸ್ಗೆ ಬಡ್ತಿ ಹೊಂದಿದ್ದ 11 ಅಧಿಕಾರಿಗಳಿಗೆ ಮುಂದಿನ ಆಯ್ಕೆ ಪಟ್ಟಿಪ್ರಕಟವಾಗುವವರೆಗೂ ಅದೇ ಹುದ್ದೆಗಳಲ್ಲಿ ಮುಂದುವರೆಯಬಹುದಾಗಿದೆ. ಹೊಸದಾಗಿ ಪಟ್ಟಿರಚಿಸಿದರೆ ಮತ್ತೆ ಹುದ್ದೆಗಳು ಬದಲಾವಣೆ ಆಗಲಿವೆ. ಆದರೆ ಪ್ರಸ್ತುತ ಕೆಎಟಿ ನೀಡಿರುವ ಆದೇಶವನ್ನು ಪ್ರಶ್ನಿಸಿ ಕೆಪಿಎಸ್ಸಿಗೆ ಹೈಕೋರ್ಟ್ಗೆ ಮೊರೆ ಹೋಗಲು ಅವಕಾಶವಿದೆ.
ಉಪ ವಿಭಾಗಾಧಿಕಾರಿ ಹುದ್ದೆಯಿಂದ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಹುದ್ದೆಗೆ ಹಿಂಬಡ್ತಿ ಪಡೆದಿದ್ದ ಎಸ್.ಎಸ್.ಮಧುಕೇಶ್ವರ್ ಎಂಬುವರು ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿ ತೀರ್ಪು ಕಾಯ್ದಿರಿಸಿದ್ದ ಕೆಎಟಿ ಅಧ್ಯಕ್ಷ ಡಾ.ಕೆ.ಭಕ್ತವತ್ಸಲ ಮತ್ತು ಸದಸ್ಯ ಎಸ್.ಕೆ.ಪಟ್ನಾಯಕ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ನ್ಯಾ. ರವೀಂದ್ರನ್ ಆದೇಶದಲ್ಲಿ ಏನಿದೆ?
ಕೆಪಿಎಸ್ಸಿಯು ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಪ್ರತಿ ಪತ್ರಿಕೆಯ ಅಂಕಗಳಲ್ಲಿ 20ಕ್ಕೂ ಹೆಚ್ಚು ಅಥವಾ ಕಡಿಮೆಯಾಗಿದ್ದಲ್ಲಿ, ಜೊತೆಗೆ, ಒಟ್ಟಾರೆ ಎಲ್ಲ ಪತ್ರಿಕೆಗಳಲ್ಲಿನ ಅಂಕಗಳಲ್ಲಿ 20ಕ್ಕಿಂತ ಹೆಚ್ಚು- ಕಡಿಮೆಯಾದಲ್ಲಿ ಅಂತಹ ಪತ್ರಿಕೆಗಳನ್ನು ಮೂರನೇ ಮೌಲ್ಯಮಾಪನಕ್ಕೆ ಕಳುಹಿಸಬೇಕು