ಶಾಲೆ ಪ್ರಾರಂಭ ಸದ್ಯಕ್ಕಿಲ್ಲ: ಮಕ್ಕಳ ಕಲಿಕೆಯನ್ನು ನಿರಂತರವಾಗಿಸಲು ಸರ್ಕಾರ ಪ್ಲಾನ್
ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಚಿವ ಸುರೇಶ್ ಕುಮಾರ್ ವೆಬಿನಾರ್ ಸಭೆ ನಡೆಸಿದ್ದು,
ಮಕ್ಕಳ ಕಲಿಕೆಯನ್ನು ನಿರಂತರವಾಗಿಸಲು ಸರ್ಕಾರವು ತೆಗೆದುಕೊಳ್ಳಬಹುದಾದ ಪ್ರಾಯೋಗಿಕ ಕ್ರಮಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು.
ಬೆಂಗಳೂರು, (ಜುಲೈ.28): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಸದ್ಯಕ್ಕೆ ಶಾಲಾ-ಕಾಲೇಜುಗಳನ್ನ ಪ್ರಾರಂಭಿಸುವ ಮಾತೇ ಇಲ್ಲ ಅಂತ ಈಗಾಗಲೇ ಸರ್ಕಾರವೇ ಹೇಳಿ. ಇನ್ನು ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಕೊರೋನಾ ವೈರಸ್ ಇನ್ನಷ್ಟು ಹೆಚ್ಚಾಗಲಿದೆ ಎಂದು ಸ್ವತಃ ಡಿಸಿಎಂ ಅಶ್ವತ್ಥ್ ನಾರಾಯಣ ಅವರು ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಇನ್ನೆರಡು ತಿಂಗಳು ಶಾಲೆ ಪ್ರಾರಂಭಿಸುವ ಸಾಧ್ಯತೆಗಳ ಕಡಿಮೆ. ಇದನ್ನು ಅರಿತಿರುವ ರಾಜ್ಯ ಸರ್ಕಾರ, ಮಕ್ಕಳ ಕಲಿಕೆಯನ್ನು ನಿರಂತರವಾಗಿಸಲು ಅನ್ಯ ಮಾರ್ಗೋಪಾಯಗಳನ್ನು ಕಂಡು ಹಿಡಿಯುತ್ತಿದೆ. ಇದಕ್ಕಾಗಿ ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ.
ಈ ಬಗ್ಗೆ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡ 36ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸುರೇಶ್ ಕುಮಾರ್ ಇಂದು (ಮಂಗಳವಾರ) ವೆಬಿನಾರ್ ಮೂಲಕ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕೊರೋನಾ ಸೋಂಕು ಹೆಚ್ಚುತ್ತಿರುವ ಸಮಯದಲ್ಲಿ ಶಾಲೆಗಳನ್ನು ತೆರೆಯುವ ಅವಸರ ಸರ್ಕಾರದ ಮುಂದಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸದ್ಯಕ್ಕೆ ಶಾಲೆಗಳನ್ನು ತೆರೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸಚಿವ ಸುರೇಶ್ ಕುಮಾರ್ ಮಹತ್ವದ ಮಾಹಿತಿ..!
ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಬೇಕು ಎಂಬ ಕಾರಣಕ್ಕೆ ತಂತ್ರಜ್ಞಾನ ಆಧಾರಿತ ಶಿಕ್ಷಣ ಮತ್ತು ಶಾಲಾ ಚಟುವಟಿಕೆ ಪ್ರಾರಂಭಿಸಲು ಸರ್ಕಾರ ಆಲೋಚಿಸುತ್ತಿದೆ ಎಂದು ಹೇಳಿದರು
ವಿದ್ಯಾರ್ಥಿಗಳ ಕಲಿಕೆಗೆ ಬೇರೆ ಮಾರ್ಗ
ವಠಾರ ಶಾಲೆ, ಪಡಶಾಲೆ ಶಾಲೆ, ಮನೆಶಾಲೆ, ತಂತ್ರಜ್ಞಾನ ಬಳಕೆ ಮಾಡಿಕೊಂಡು ಆಕಾಶವಾಣಿ, ಚಂದನ ದೂರದರ್ಶನ, ಶಿಕ್ಷಣ ಇಲಾಖೆಯ ಚಾನೆಲ್ ಸೇರಿ ಲಭ್ಯ ಆಗಬಹುದಾದ ಎಲ್ಲ ಅವಕಾಶಗಳನ್ನೂ ಮುಕ್ತವಾಗಿರಿಸಿಕೊಂಡು ಮಕ್ಕಳ ಹಿತದೃಷ್ಟಿಯಿಂದ ಯಾವ ಮಾದರಿ ಉತ್ತಮ ಎಂದು ಆಲೋಚಿಸುತ್ತಿದೆ ಎಂದು ತಿಳಿಸಿದರು.
ಯೂ ಟ್ಯೂಬ್, ವಾಟ್ಸ್ಆ್ಯಪ್ ಮೂಲಕ ಬೋಧನೆ, ಶಾಲೆಗಳ ಗ್ರಂಥಾಲಯದಲ್ಲಿ ಪುಸ್ತಕ ಪಡೆದು ಒಂದು ದಿನ ಓದಿ ಮತ್ತೊಂದು ದಿನ ಒಪ್ಪಿಸುವುದು, ಸಿಲೆಬಸ್ ಪಾಠವೇ ಬೋಧನೆ ಮಾಡಬೇಕೆಂದಿಲ್ಲ, ಸ್ವಯಂ ಸೇವಕರನ್ನು ಬಳಸಿಕೊಂಡು ಗುಂಪು ಆಧಾರಿತ ಶಿಕ್ಷಣ ನೀಡುವುದು, ಮಾಡುವ ಬೋಧನೆ ತಲುಪುತ್ತಿದೆಯೇ ಎಂದು ನಿರ್ವಹಣೆ ಮಾಡಬೇಕು ಎಂಬುತ್ಯಾದಿ ವಿಚಾರಗಳು ಸಂವಾದಲ್ಲಿ ಪ್ರಸ್ತಾಪವಾದವು ಮಾಹಿತಿ ನೀಡಿದರು.