ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ, ಪ್ರೇಮ ವೈಫಲ್ಯದಿಂದ ಮನನೊಂದು 24 ವರ್ಷದ ಪವನ್ ಭಟ್ ಎಂಬ ಯುವ ಅರ್ಚಕ ನೇಣಿಗೆ ಶರಣಾಗಿದ್ದಾನೆ. ತಾನು ಪ್ರೀತಿಸಿದ ಯುವತಿ ಮದುವೆಗೆ ನಿರಾಕರಿಸಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕಾರವಾರ(ಜ.6): ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬ ನೇಣಿಗೆ ಶರಣಾದ ಮನಕಲುಕುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಸ್ಲಗದ್ದೆ ಗ್ರಾಮದಲ್ಲಿ ನಡೆದಿದೆ. 24 ವರ್ಷದ ಪವನ್ ಭಟ್ ಎಂಬ ಯುವಕ ಮೃತ ದುರ್ದೈವಿ. ವೃತ್ತಿಯಿಂದ ಅರ್ಚಕನಾಗಿದ್ದ ಪವನ್, ಪೌರೋಹಿತ್ಯ ಮಾಡಿಕೊಂಡು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದನು. ಆದರೆ, ಈಗ ಆತನ ಅಕಾಲಿಕ ಮರಣದಿಂದ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ..

Add Asianetnews Kannada as a Preferred SourcegooglePreferred

ಪ್ರೀತಿಸಿದ ಯುವತಿಯಿಂದ ಮದುವೆಗೆ ತಿರಸ್ಕಾರ

ಪವನ್ ಭಟ್ ಕಳೆದ ಕೆಲವು ಸಮಯದಿಂದ ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು ಎನ್ನಲಾಗಿದೆ. ಇಬ್ಬರ ನಡುವೆ ಪ್ರೀತಿಯ ಸಂಬಂಧವಿತ್ತು. ಈ ಸಂಬಂಧ ವಿವಾಹವಾಗಲು ಬಯಸಿದ್ದ ಪವನ್, ತನ್ನ ಪ್ರೇಯಸಿಯನ್ನು ಮದುವೆಯಾಗುವಂತೆ ಒತ್ತಾಯಿಸಿದ್ದನು. ಆದರೆ, ಯುವತಿ ಮಾತ್ರ ವಿವಾಹವಾಗಲು ಸಾರಾಸಗಟಾಗಿ ನಿರಾಕರಿಸಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

ಮನನೊಂದು ಸಾವಿನ ಮನೆ ಸೇರಿದ ಪವನ್

ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಯುವತಿಯೇ ಮದುವೆಗೆ ಒಪ್ಪದಿದ್ದಾಗ ಪವನ್ ತೀವ್ರವಾಗಿ ಮನನೊಂದಿದ್ದನು. ವಿವಾಹದ ಆಸೆ ಕೈಗೂಡದ ನೋವಿನಲ್ಲಿ ಅತೀವ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಪವನ್, ಇಂದು ನೇಣು ಬಿಗಿದುಕೊಂಡು ಆತ್ಮ೧ಹತ್ಯೆಗೆ ಶರಣಾಗಿದ್ದಾನೆ.

ಸ್ಥಳಕ್ಕೆ ಅಂಕೋಲಾ ಪೊಲೀಸರ ಭೇಟಿ

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಮಹಜರು ನಡೆಸಿದ್ದಾರೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಕೇವಲ 24 ವರ್ಷಕ್ಕೆ ಅರ್ಚಕ ವೃತ್ತಿಯಲ್ಲಿದ್ದ ಯುವಕ ಸಾವಿನ ಹಾದಿ ಹಿಡಿದಿರುವುದು ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.