‘ಕ್ರಿಕೆಟ್ ಜಗಳ’ ಬಿಡಿಸಿದ ಗೆಳೆಯನಿಗೆ ಚಾಕು ಇರಿತ..!
ಕ್ಷುಲ್ಲಕ ವಿಚಾರಕ್ಕೆ ಗಲಾಟೆ| ಬೆಂಗಳೂರಿನ ಇಟ್ಟುಮಡುವಿನಲ್ಲಿ ಘಟನೆ| ಪ್ರಕರಣ ದಾಖಲಿಸಿಕೊಂಡ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು|
ಬೆಂಗಳೂರು(ಡಿ.10): ಕ್ರಿಕೆಟ್ ಆಡುವ ವಿಚಾರಕ್ಕೆ ಯುವಕರ ಎರಡು ಗುಂಪುಗಳ ನಡುವೆ ಉಂಟಾದ ಗಲಾಟೆಯಲ್ಲಿ ಒಬ್ಬಾತನಿಗೆ ಚೂರಿ ಇರಿತವಾಗಿದೆ.
ಬನಶಂಕರಿ ಸಮೀಪದ ಇಟ್ಟುಮಡು ನಿವಾಸಿ ಪ್ರೇಮ್ಕುಮಾರ್ ಎಂಬಾತ ಹಲ್ಲೆಗೊಳಗಾಗಿದ್ದು, ಗಾಯಾಳು ನೀಡಿದ ದೂರಿನನ್ವಯ ಮಹೇಂದ್ರ, ವೇಲು, ನವೀನ್ ಸೇರಿದಂತೆ ಇತರರ ಪತ್ತೆಗೆ ಕ್ರಮ ಕೈಗೊಂಡಿದ್ದೇವೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾಮಪಿಶಾಚಿ; ಕೆಲಸ ಅರಸಿ ಬಂದ ಬಳ್ಳಾರಿ ಬಾಲಕಿ ಮಂಡ್ಯದ ಹೊಲದಲ್ಲಿ ಶವವಾದಳು!
ಕತ್ರಿಗುಪ್ಪೆಯ ರಾಮರಾವ್ ಮೈದಾನದಲ್ಲಿ ತನ್ನ ಸ್ನೇಹಿತರಾದ ಆಶಿಕ್, ಮಣಿ, ಗಿರೀಶ್, ನಾಗೇಶ್, ಮನೀಶ್ ಜೊತೆ ಪ್ರೇಮ್ ಕುಮಾರ್ ಕ್ರಿಕೆಟ್ ಆಡುತ್ತಿದ್ದ. ಅದೇ ಮೈದಾನಕ್ಕೆ ಮಧ್ಯಾಹ್ನ 3 ಗಂಟೆಯಲ್ಲಿ ಮಹೇಂದ್ರ, ವೇಲು, ನವೀನ್ ಮತ್ತು ಆತನ ಗೆಳೆಯರು ಬಂದಿದ್ದರು. ಆಗ ಎರಡು ತಂಡಗಳನ್ನು ರಚಿಸಿ ಕ್ರಿಕೆಟ್ ಆಡುತ್ತಿದ್ದರು. ಕ್ಷುಲ್ಲಕ ವಿಚಾರಕ್ಕೆ ಆಶಿಕ್ ಮತ್ತು ಮಹೇಂದ್ರ ಮಧ್ಯೆ ಜಗಳವಾಗಿದೆ. ಈ ಹಂತದಲ್ಲಿ ಎರಡು ತಂಡಗಳ ಮಧ್ಯೆ ಬಿರುಸಿನ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಇದರಿಂದ ಕೆರಳಿದ ಆಶಿಕ್ ಬ್ಯಾಟ್ನಿಂದ ಮಹೇಂದ್ರಗೆ ಹೊಡೆಯಲು ಯತ್ನಿಸಿದ್ದ. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಪ್ರೇಮ್ ಕುಮಾರ್ ಪರಿಸ್ಥಿತಿ ತಿಳಿಸಿದ್ದ.
ಅದೇ ರಾತ್ರಿ 8 ಗಂಟೆಯಲ್ಲಿ ಪ್ರೇಮ್ಕುಮಾರ್ನ ಮನೆಗೆ ತೆರಳಿದ್ದ ಮಹೇಂದ್ರ ಮತ್ತು ಆತನ ಗೆಳೆಯರು, ಆಶಿಕ್ ಬಗ್ಗೆ ವಿಚಾರಿಸಿದ್ದರು. ಪ್ರೇಮ್ಕುಮಾರ್ ತನಗೆ ಗೊತ್ತಿಲ್ಲ ಎಂದಿದ್ದ. ಇಷ್ಟಕ್ಕೆ ಕೋಪಗೊಂಡ ಆರೋಪಿಗಳು, ಪ್ರೇಮ್ಕುಮಾರ್ಗೆ ಚಾಕುವಿನಿಂದ ಇರಿದಿದ್ದಾರೆ. ಬಳಿಕ ಮದ್ಯದ ಬಾಟಲ್ನಿಂದ ಹೊಡೆದಿದ್ದರು. ಪ್ರೇಮ್ ಕುಮಾರ್ ಚೀರಾಡುತ್ತಿದ್ದ ಶಬ್ದ ಕೇಳಿ ಆತನ ಪೋಷಕರು ಮನೆಯಿಂದ ಹೊರಬರುತ್ತಿದ್ದಂತೆ, ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.