*   ಮಾರತ್ತಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದ ಖದೀಮರು*   ತನ್ನೂರಿನ ಯುವಕನನ್ನು ಬಳಸಿ ವಿವಿಧೆಡೆ ಕದ್ದ*   ಕಳ್ಳ ಜ್ಞಾನ ಪ್ರಕಾಶ್‌, ಆತನ ಸಹಾಯಕನ ಸೆರೆ 

ಬೆಂಗಳೂರು(ಜೂ.10): ತನಗೆ ಕಣ್ಣು ಸರಿಯಾಗಿ ಕಾಣುವುದಿಲ್ಲ ಎಂದು ಮನೆಗಳ್ಳತನಕ್ಕೆ ಮತ್ತೊಬ್ಬನ ನೆರವು ಪಡೆದು ಕೃತ್ಯ ಎಸಗುತ್ತಿದ್ದ ಕುಖ್ಯಾತ ಖದೀಮ ಹಾಗೂ ಆತನ ಸಹಾಯಕ ಮಾರತ್ತಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೋಲಾರ ಜಿಲ್ಲೆ ಕೆಜಿಎಫ್‌ ತಾಲೂಕಿನ ಆ್ಯಂಡರ್‌ಸನ್‌ಪೇಟೆಯ ಜ್ಞಾನಪ್ರಕಾಶ್‌ ಹಾಗೂ ಅರವಿಂದ ಅಲಿಯಾಸ್‌ ಮುಟಾಮಿ ಬಂಧಿತರಾಗಿದ್ದು, ಆರೋಪಿಗಳಿಂದ 80 ಗ್ರಾಂ ಚಿನ್ನಾಭರಣ ಹಾಗೂ 1.15 ಕೆಜಿ ಬೆಳ್ಳಿ ಹಾಗೂ ಲ್ಯಾಪ್‌ಟಾಪ್‌ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಮುನೇಕೊಳಲದ ಭುವನೇಶ್ವರಿ ಲೇಔಟ್‌ನಲ್ಲಿ ಮನೆ ಬೀಗ ಮುರಿದು ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವೇಶ್ಯೆಯರ ಸಂಗಕ್ಕಾಗಿ ಸರ ಕದಿಯುತ್ತಿದ್ದ ಎಚ್‌ಐವಿ ಸೋಂಕಿತರ ಬಂಧನ

ಕೆಜಿಎಫ್‌ನ ಜ್ಞಾನಪ್ರಕಾಶ್‌ ವೃತ್ತಿಪರ ಕ್ರಿಮಿನಲ್‌ ಆಗಿದ್ದು, ಮೂರು ದಶಕಗಳಿಂದ ಮನೆಗಳ್ಳತನ ಕೃತ್ಯದಲ್ಲಿ ಆತ ಸಕ್ರಿಯವಾಗಿದ್ದಾನೆ. ಈ ಸಂಬಂಧ ಬೆಂಗಳೂರು ಸೇರಿದಂತೆ ವಿವಿಧೆಡೆ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ 43 ವರ್ಷದ ಜ್ಞಾನಪ್ರಕಾಶ್‌ಗೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಹಾಗಾಗಿ ಕಳ್ಳತನಕ್ಕೆ ನೆರವಾಗುವಂತೆ ಹಣದಾಸೆ ತೋರಿಸಿ ತನ್ನೂರಿನ ಯುವಕ ಅರವಿಂದ್‌ನನ್ನು ಬಳಸಿಕೊಂಡಿದ್ದ. ಇತ್ತೀಚೆಗೆ ಮುನೇಕೊಳಲು ಸೇರಿದಂತೆ ಜ್ಞಾನಪ್ರಕಾಶ್‌ ಎಸಗಿದ ಮನೆಗಳ್ಳತನಕ್ಕೆ ಅರವಿಂದ್‌ ಸಾಥ್‌ ಕೊಟ್ಟಿದ್ದ. ಆರೋಪಿಗಳ ಬಂಧನದಿಂದ ಬಾಣಸವಾಡಿ ಹಾಗೂ ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.