ತಮ್ಮನ್ನು ಡ್ರಗ್ಸ್ ತಪಾಸಣೆ ನಡೆಸುವುದಾಗಿ ಪೊಲೀಸರ ಸೋಗಿನಲ್ಲಿ ಅಡ್ಡಗಟ್ಟಿಬೆದರಿಸಿ ಕಿಡಿಗೇಡಿಗಳು ಹಣ ದೋಚಿದ್ದಾರೆ ಎಂದು ಸುಳ್ಳು ನಾಟಕ ಸೃಷ್ಟಿಸಿದ್ದ ಚಾಲಾಕಿ ಸೋದರರು ಬ್ಯಾಟರಾಯನಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು (ಜು.14): ತಮ್ಮನ್ನು ಡ್ರಗ್ಸ್ ತಪಾಸಣೆ ನಡೆಸುವುದಾಗಿ ಪೊಲೀಸರ ಸೋಗಿನಲ್ಲಿ ಅಡ್ಡಗಟ್ಟಿಬೆದರಿಸಿ ಕಿಡಿಗೇಡಿಗಳು ಹಣ ದೋಚಿದ್ದಾರೆ ಎಂದು ಸುಳ್ಳು ನಾಟಕ ಸೃಷ್ಟಿಸಿದ್ದ ಚಾಲಾಕಿ ಸೋದರರು ಬ್ಯಾಟರಾಯನಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪಾದರಾಯನಪುರದ ಅಬ್ದುಲ್‌ ಶಾಹದ್‌ ಹಾಗೂ ಆತನ ಸೋದರ ಅಜೀಜ್‌ ಬಂಧಿತರಾಗಿದ್ದು, ಆರೋಪಿಗಳಿಂದ 3.40 ಲಕ್ಷ ರು ನಗದು ಹಾಗೂ ಬೈಕ್‌ ಜಪ್ತಿ ಮಾಡಲಾಗಿದೆ. ಎರಡು ದಿನಗಳ ಹಿಂದೆ ಕಸ್ತೂರಿ ಬಾ ನಗರದಲ್ಲಿ ದರೋಡೆ ನಡೆದಿದ್ದಾಗಿ ಅಬ್ದುಲ್‌ ಸೋದರರು ಹೇಳಿದ್ದರು. 

Add Asianetnews Kannada as a Preferred SourcegooglePreferred

ಆದರೆ ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಪತ್ತೆದಾರಿಕೆ ನಡೆಸಿದಾಗ ಸೋದರರ ಕಪಟ ನಾಟಕ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೈಸೂರು ರಸ್ತೆ ಸಮೀಪ ಎಲೆಕ್ಟ್ರೋ ಶೆಲ್‌ ಫೋನ್‌ ಡಿಸ್ಟ್ರಿಬ್ಯೂಟರ್‌ ಮಳಿಗೆಯಲ್ಲಿ ಸೋದರರು ನೌಕರಿಯಲ್ಲಿದ್ದರು. ತಮ್ಮ ಮಳಿಗೆಗೆ ಹಂಚಿಕೆದಾರರಿಂದ ಹಣ ಸಂಗ್ರಹಿಸಿ ಕಚೇರಿ ಸೋದರರು ಮರಳುತ್ತಿದ್ದರು. ಆಗ ಹಣ ದೋಚಲು ಸಂಚು ರೂಪಿಸಿದ ಆರೋಪಿಗಳು, ತಮ್ಮನ್ನು ಬೆದರಿಸಿ ಹಣ ಸುಲಿಗೆ ನಡೆಯುವಂತೆ ನಾಟಕ ಹೆಣೆದಿದ್ದರು.

ಆ್ಯಂಬುಲೆನ್ಸ್​​ನಲ್ಲೇ ಹೆರಿಗೆ: ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಅಂತೆಯೇ ಎರಡು ದಿನಗಳ ಹಿಂದೆ ಹಣ ಸಂಗ್ರಹಿಸಿಕೊಂಡು ತನ್ನ ಸಹೋದ್ಯೋಗಿ ಜತೆ ಅಬ್ದುಲ್‌ ಮಳಿಗೆಗೆ ಮರಳುತ್ತಿದ್ದ. ಆಗ ಕಸ್ತೂರಿ ಬಾ ನಗರದ ಬಳಿ ಪೊಲೀಸರು ಎಂದು ಹೇಳಿ ಅಬ್ದುಲ್‌ ಸೋದರ ಹಾಗೂ ಮತ್ತೊಬ್ಬ ಸ್ನೇಹಿತ ಅಡ್ಡಗಟ್ಟಿದ್ದರು. ನಂತರ ಡ್ರಗ್ಸ್ ತಪಾಸಣೆ ಮಾಡುತ್ತಿದ್ದೇವೆ ಎಂದು ಹೇಳಿ ಅಬ್ದುಲ್‌ನಿಂದ ಹಣ ಹಾಗೂ ಬೈಕ್‌ ದೋಚಿ ಕಿಡಿಗೇಡಿಗಳು ಪರಾರಿಯಾಗಿದ್ದರು. ಬಳಿಕ ತನ್ನ ಸಹೋದ್ಯೋಗಿಯನ್ನು ಸಾಕ್ಷಿಯಾಗಿಸಿಕೊಂಡಿದ್ದ ಅಬ್ದುಲ್‌, ಅಂಗಡಿಗೆ ತೆರಳಿ ವ್ಯವಸ್ಥಾಪಕನ ಬಳಿ ಸುಲಿಗೆ ನಡೆದಿರುವುದಾಗಿ ಸುಳ್ಳು ಹೇಳಿದ್ದ. 

ವಿದ್ಯಾರ್ಥಿನಿಯ ಆತ್ಮಹತ್ಯೆ: ಪ್ರೀತಿಸುವಂತೆ ಪೀಡಿಸಿದ ವ್ಯಕ್ತಿ ಬಂಧನ

ಈ ಮಾತು ಕೇಳಿ ಗಾಬರಿಗೊಂಡ ವ್ಯವಸ್ಥಾಪಕ, ತಕ್ಷಣವೇ ಬ್ಯಾಟರಾಯನಪುರ ಠಾಣೆಗೆ ತೆರಳಿ ದೂರು ನೀಡಿದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು, ಅಬ್ದುಲ್‌ನ ನಡವಳಿಕೆ ಮೇಲೆ ಅನುಮಾನಗೊಂಡಿದ್ದಾರೆ. ಬಳಿಕ ಕೃತ್ಯದ ನಡೆದಿರುವ ಸ್ಥಳ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಗಳು ಸುಳ್ಳು ಹೇಳಿರುವ ಸುಳಿವು ಸಿಕ್ಕಿದೆ. ಕೂಡಲೇ ಅಬ್ದುಲ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ಅಧಿಕಾರಿಗಳು ಹೇಳಿದ್ದಾರೆ.