OLX ಜಾಹೀರಾತು ನೋಡಿ ಖರೀದಿಸುವ ನೆಪದಲ್ಲಿ ಸುಲಿಗೆ: ಹೈಟೆಕ್ ಕಳ್ಳರ ಬಂಧನ
ಖತರ್ನಾಕ್ ಮೊಬೈಲ್ ಕಳ್ಳರ ಬಂಧನ| ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಓಎಲ್ಎಕ್ಸ್ನಲ್ಲಿ ಜಾಹೀರಾತು ನೋಡಿ ಮೊಬೈಲ್ ಖರೀದಿಸುವ ನೆಪದಲ್ಲಿ ಬಂದು ಸಾರ್ವಜನಿಕರಿಂದ ಬೆಲೆ ಬಾಳುವ ಮೊಬೈಲಗಳನ್ನು ಸುಲಿಗೆ|
ಬಂಧಿತರಿಂದ ಎರಡು ದ್ವಿಚಕ್ರ ವಾಹನ ವಶ|
ಹುಬ್ಬಳ್ಳಿ(ಜೂ.15): ಒಎಲ್ಎಕ್ಸ್ನಲ್ಲಿ ಜಾಹೀರಾತು ನೋಡಿ ಮೊಬೈಲ್ ಖರೀದಿಸುವ ನೆಪದಲ್ಲಿ ಬಂದು ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಯುವಕರನ್ನು ನವನಗರ ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 8 ಮೊಬೈಲ್ ವಶಪಡಿಸಿಕೊಂಡಿದೆ. ಕೇಶ್ವಾಪುರದ ಮುಕ್ತಿಧಾಮ ಬಳಿಯ ಪಾಟೀಲಚಾಳ ನಿವಾಸಿ ಆಕಾಶ ಮುರಳಿಧರ ಮುದಲಿಯಾರ್ (20) ಹಾಗೂ ವಿದ್ಯಾನಗರದ ಶೆಟ್ಟರ್ ಲೇಔಟ್ ನಿವಾಸಿ ಆಕಾಶ ಮಾರುತಿ ಮೂಳೆ (20) ಬಂಧಿತರು.
ಇವರು ಹುಬ್ಬಳ್ಳಿ-ಧಾರವಾಡ ಮಹಾ ನಗರದಲ್ಲಿ ಓಎಲ್ಎಕ್ಸ್ನಲ್ಲಿ ಜಾಹೀರಾತು ನೋಡಿ ಮೊಬೈಲ್ ಖರೀದಿಸುವ ನೆಪದಲ್ಲಿ ಬಂದು ಸಾರ್ವಜನಿಕರಿಂದ ಬೆಲೆ ಬಾಳುವ ಮೊಬೈಲಗಳನ್ನು ಸುಲಿಗೆ ಮಾಡುತ್ತಿದ್ದರು. ನವನಗರ ಪೊಲೀಸರ ಬಲೆಗೆ ಬಿದ್ದ ಇವರಿಂದ ಒಟ್ಟು 286498ರು. ಮೌಲ್ಯದ 8 ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ ಒಂದು ಲಕ್ಷ ರು. ಕಿಮ್ಮತ್ತಿನ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ವೀಕೆಂಡ್: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸಾಮಾನ್ಯ ಜನಸಂಚಾರ
ವಿಚಾರಣೆ ವೇಳೆ ಎಪಿಎಂಸಿ ನವನಗರ ಠಾಣಾ ವ್ಯಾಪ್ತಿಯ ಗಾಮನಗಟ್ಟಿಕರಿಯಮ್ಮದೇವಿ ಗುಡಿ ಹತ್ತಿರ, ಎಪಿಎಂಸಿ ಗೇಟ್ ಹತ್ತಿರ, ಹುಬ್ಬಳ್ಳಿ ದೇಸಾಯಿ ಸರ್ಕಲ್ ಹತ್ತಿರ ಧಾರವಾಡ ಎನ್ಟಿಟಿಎಫ್ ಹತ್ತಿರ, ಕೆಸಿಡಿ ಸರ್ಕಲ್ ಹತ್ತಿರ, ಮಾಳಮಡ್ಡಿ ರೋಡ ಬಾಗಲಕೋಟೆ ಪೆಟ್ರೋಲ್ ಬಂಕ್ ಹತ್ತಿರ, ಸತ್ತೂರ ಉದಯಗಿರಿಯಲ್ಲಿ ಮೊಬೈಲಗಳನ್ನು ಸುಲಿಗೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಎಪಿಎಂಸಿ ಠಾಣೆ ಇನ್ಸ್ಪೆಕ್ಟರ್ ಪ್ರಭು ಬಿ.ಸೂರಿನ, ಎಎಸ್ಐ ಎಂ.ಎಚ್.ಶಿವರಾಜ ಅವರನ್ನು ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್ ಶ್ಲಾಘಿಸಿ, ಬಹುಮಾನ ಘೋಷಿಸಿದ್ದಾರೆ.