ವೀಸಾ ವೆರಿಫಿಕೇಶನ್‌ ಸೋಗಿನಲ್ಲಿ ಸಿವಿಲ್‌ ಕಾಂಟ್ರಾಕ್ಟರೊಬ್ಬರ ಮನೆಗೆ ನುಗ್ಗಿ ಹಲ್ಲೆಗೈದು ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಪೇಯಿಂಗ್‌ ಗೆಸ್ಟ್‌ ಮಾಲೀಕ ಸೇರಿ ಮೂವರನ್ನು ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಮೇ.23) : ವೀಸಾ ವೆರಿಫಿಕೇಶನ್‌ ಸೋಗಿನಲ್ಲಿ ಸಿವಿಲ್‌ ಕಾಂಟ್ರಾಕ್ಟರೊಬ್ಬರ ಮನೆಗೆ ನುಗ್ಗಿ ಹಲ್ಲೆಗೈದು ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಪೇಯಿಂಗ್‌ ಗೆಸ್ಟ್‌ ಮಾಲೀಕ ಸೇರಿ ಮೂವರನ್ನು ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕುಮಾರಸ್ವಾಮಿ ಲೇಔಟ್‌ನ ಬಿ.ಆರ್‌.ಸ್ವರೂಪ್‌(27), ಆತ್ಮಾನಂದಜಂಬಗಿ(27) ಹಾಗೂ ಶಾಲಿಂ ರಾಜ(21) ಬಂಧಿತರು. ಆರೋಪಿಗಳಿಂದ .2.20 ಲಕ್ಷ ನಗದು, .13 ಲಕ್ಷ ಮೌಲ್ಯದ 222 ಗ್ರಾಂ ತೂಕದ ಚಿನ್ನ, ವಜ್ರದ ಆಭರಣಗಳು, .1.50 ಲಕ್ಷ ಮೌಲ್ಯದ ಬೆಳ್ಳಿ ಒಡವೆಗಳನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರು: ಕೈ-ಕಾಲು ಕಟ್ಟಿ ದರೋಡೆ: ಮನೆಗೆಲಸದವಳ ಅಪ್ಪ-ಅಣ್ಣ ಅರೆಸ್ಟ್‌

ಕುಮಾರಸ್ವಾಮಿ ಲೇಔಟ್‌(Kumaraswamy layout police)ನ 1ನೇ ಹಂತದ ಟೀಚ​ರ್‍ಸ್ ಕಾಲೋನಿ ನಿವಾಸಿ ಸಿವಿಲ್‌ ಕಾಂಟ್ರಾಕ್ಟರ್‌ ಮುರಳೀಧರ್‌ (Civil Contractor Muralidhar)ಎಂಬುವವರ ಮನೆಗೆ ಆರೋಪಿಗಳು ಏ.10ರಂದು ಬೆಳಗ್ಗೆ 9ಕ್ಕೆ ವೀಸಾ ವೆರಿಫಿಕೇಶನ್‌ ಮಾಡುವ ನೆಪದಲ್ಲಿ ಹೋಗಿದ್ದಾರೆ. ಈ ವೇಳೆ ಆಧಾರ್‌ ಕಾರ್ಡ್‌ ತರಲು ಒಳಗೆ ಹೋದ ಮುರಳೀಧರ್‌ ಅವರನ್ನು ತಳ್ಳಿ ನೆಲಕ್ಕೆ ಬೀಳಿಸಿ ಕೈ-ಕಾಲು ಕಟ್ಟಿಬೀರು ಕೀ ಪಡೆದು ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ಸ್ವರೂಪ್‌ ಬಿಇ ಪದವೀಧರನಾಗಿದ್ದು, ಕುಮಾರಸ್ವಾಮಿ ಲೇಔಟ್‌ನಲ್ಲಿ ಪೇಯಿಂಗ್‌ ಗೆಸ್ಟ್‌(ಪಿಜಿ) ನಡೆಸುತ್ತಿದ್ದಾನೆ. ಆರೋಪಿ ಆತ್ಮಾನಂದ ಜಂಬಗಿ ಬಿಇ, ಎಲ್‌ಎಲ್‌ಬಿ ಪದವಿಧರನಾಗಿದ್ದು, ಇದೇ ಪಿಜಿಯಲ್ಲಿ ನೆಲೆಸಿ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ. ಆರೋಪಿ ಶಾಲಿಂ ರಾಜ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದಾನೆ. ಈತ ಕೂಡ ಇದೇ ಪಿಜಿಯಲ್ಲಿ ನೆಲೆಸಿದ್ದಾನೆ.

ಪರಿಚಿತರೇ ಟಾರ್ಗೆಟ್‌:

ಪಿಜಿ ಮಾಲಿಕ ಸ್ವರೂಪ್‌ ಸಾಲ ಮಾಡಿಕೊಂಡಿದ್ದ. ಈತನ ಪಿಜಿಯಲ್ಲಿ ತಂಗಿದ್ದ ಆತ್ಮಾನಂದ ಜಂಬಗಿ ಮತ್ತು ಶಾಲಿಂ ರಾಜ ಆರ್ಥಿಕ ತೊಂದರೆ ಅನುಭವಿಸುತ್ತಿದ್ದರು. ಹೀಗಾಗಿ ಸುಲಭವಾಗಿ ಹಣ ಗಳಿಸಲು ಮೂವರು ಸೇರಿ ಪರಿಚಿತರನ್ನೇ ಸುಲಿಗೆ ಮಾಡಲು ಪ್ಲಾನ್‌ ಮಾಡಿದ್ದರು. ಪ್ರಮುಖ ಆರೋಪಿ ಸ್ವರೂಪ್‌, ತನಗೆ ಪರಿಚಯವಿರುವ ಸಿವಿಲ್‌ ಕಾಂಟ್ರಾಕ್ಟರ್‌ ಮುರಳೀಧರ್‌ ಅವರನ್ನು ಸುಲಿಗೆ ಮಾಡಲು ಯೋಜನೆ ರೂಪಿಸಿದ್ದ. ಅದರಂತೆ ಏ.10ರಂದು ಆರೋಪಿಗಳು ವೀಸಾ ವೆರಿಫಿಕೇಶನ್‌ ಸೋಗಿನಲ್ಲಿ ಮನೆಗೆ ನುಗ್ಗಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಿಚಿತ ಪಿಜಿ ಮಾಲಿಕನ ಸುಲಿಗೆ!

ಮೊದಲ ಪ್ರಯತ್ನದಲ್ಲಿ ಯಶಸ್ಸು ಕಂಡ ಆರೋಪಿಗಳು ಮತ್ತೊಮ್ಮೆ ಪರಿಚಿತರನ್ನೇ ಸುಲಿಗೆ ಮಾಡಲು ಪ್ಲಾನ್‌ ಮಾಡಿದ್ದರು. ಅದರಂತೆ ಪ್ರಮುಖ ಆರೋಪಿ ಸ್ವರೂಪ್‌ಗೆ ಚೆನ್ನಾಗಿ ಗೊತ್ತಿದ್ದ ಕುಮಾರಸ್ವಾಮಿ ಲೇಔಟ್‌ನ ಪಿಜಿ ಮಾಲಿಕ ಅನಿಲ್‌ ಶೆಟ್ಟಿಅವರನ್ನು ಸುಲಿಗೆ ಮಾಡಲು ಟಾರ್ಗೆಟ್‌ ಮಾಡಿದ್ದರು. ಅದರಂತೆ ಏ.26ರಂದು ಅಪರಿಚಿತರ ಸೋಗಿನಲ್ಲಿ ಅನಿಲ್‌ ಶೆಟ್ಟಿಗೆ ಕರೆ ಮಾಡಿ, ನಾವು ಪಿಜಿ ನಡೆಸುತ್ತಿದ್ದು, ನಷ್ಟವಾಗುತ್ತಿದೆ. ನೀವು ಪಿಜಿ ನಡೆಸುವುದಾದರೆ ವ್ಯವಹಾರದ ಬಗ್ಗೆ ಮಾತನಾಡೋಣ ಎಂದು ಸುಬ್ರಹ್ಮಣ್ಯಪುರ ಗುಬ್ಬಲಾದ ನಿರ್ಮಾಣ ಹಂತದ ಕಟ್ಟಡವೊಂದರ ಬಳಿ ಕರೆಸಿಕೊಂಡಿದ್ದಾರೆ.

ಈ ವೇಳೆ ಆರೋಪಿಗಳು ಅನಿಲ್‌ ಶೆಟ್ಟಿಯನ್ನು ಬಿಗಿಯಾಗಿ ಹಿಡಿದಿದ್ದಾರೆ. ಒಂದು ಇಂಜೆಕ್ಷನ್‌ ತೋರಿಸಿ, ಇದನ್ನು ಚುಚ್ಚಿದರೆ ನಿನಗೆ ಲಕ್ವಾ ಹೊಡೆಯುತ್ತದೆ ಎಂದು ಹೆದರಿಸಿದ್ದಾರೆ. ಬಳಿಕ ಅನಿಲ್‌ ಶೆಟ್ಟಿಯ ಮೈಮೇಲಿದ್ದ ಒಡವೆಗಳು ಹಾಗೂ ನಗದು ಕಿತ್ತುಕೊಂಡಿದ್ದಾರೆ. ಬಳಿಕ ಜೇಬಿನಲ್ಲಿದ್ದ ಮನೆಯ ಕೀ ತೆಗೆದುಕೊಂಡು ಇಬ್ಬರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮತ್ತೊಬ್ಬ ಅನಿಲ್‌ ಶೆಟ್ಟಿಕಣ್ಣಿಗೆ ಟೇಪ್‌ ಸುತ್ತಿದ್ದಾನೆ. ಕೆಲ ಹೊತ್ತಿನ ಬಳಿಕ ಅನಿಲ್‌ ಶೆಟ್ಟಿಗೆ ಕರೆ ಮಾಡಿರುವ ಆರೋಪಿಗಳು ಮನೆಯಲ್ಲಿ ಎಲ್ಲಿ ಚಿನ್ನಾಭರಣ ಇರಿಸಲಾಗಿದೆ ಎಂಬುದನ್ನು ತಿಳಿದುಕೊಂಡು ದೋಚಿದ್ದಾರೆ. ಕೆಲ ಸಮಯದ ಬಳಿಕ ಅನಿಲ್‌ ಶೆಟ್ಟಿಯನ್ನು ಆ ಕಟ್ಟಡದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ವೀಸಾ ವೆರಿಫಿಕೇಶನ್‌ ಪ್ರಕರಣದ ತನಿಖೆ ವೇಳೆ ಈ ಪ್ರಕರಣವೂ ಬೆಳಕಿಗೆ ಬಂದಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಡುಗೆ ಮಾಡುವ ವಿಚಾರಕ್ಕೆ ಕೊಲೆ ಮಾಡಿ ಪರಾರಿಯಾಗಿದ್ದ ಅಪ್ರಾಪ್ತನ ಬಂಧನ

ತಾಂತ್ರಿಕ ಸುಳಿವು ಆಧರಿಸಿ ಬಂಧನ

ಆರೋಪಿಗಳು ಯಾವುದೇ ಸುಳಿವು ನೀಡದಂತೆ ಸುಲಿಗೆ ಮಾಡಿದ್ದರು. ಪ್ರಮುಖ ಆರೋಪಿ ಸ್ವರೂಪ್‌ಗೆ ಸಿವಿಲ್‌ ಕಾಂಟ್ರಾಕ್ಟರ್‌ ಮುರಳೀಧರ್‌ ಹಾಗೂ ಪಿಜಿ ಮಾಲಿಕ ಅನಿಲ್‌ ಶೆಟ್ಟಿಪರಿಚಿತರಾಗಿದ್ದರು. ಈ ಇಬ್ಬರ ವ್ಯವಹಾರದ ಬಗ್ಗೆ ಸ್ವರೂಪ್‌ ಚೆನ್ನಾಗಿ ತಿಳಿದುಕೊಂಡಿದ್ದ. ಬಳಿಕ ಉಳಿದಿಬ್ಬರು ಆರೋಪಿಗಳ ಜತೆ ಸೇರಿ ಈ ಇಬ್ಬರನ್ನೇ ಟಾರ್ಗೆಟ್‌ ಮಾಡಿ ಸುಲಿಗೆ ಮಾಡಲು ಯೋಜನೆ ರೂಪಿಸಿ ಕಾರ್ಯಗತಗೊಳಿಸಿದ್ದ. ಬಳಿಕ ಯಾವುದೇ ಅನುಮಾನಬಾರದ ಹಾಗೆ ಆರೋಪಿಗಳು ನಡೆದುಕೊಂಡಿದ್ದರು. ಆದರೆ, ತನಿಖೆ ವೇಳೆ ಸಿಕ್ಕ ಸಣ್ಣ ತಾಂತ್ರಿಕ ಸುಳಿವು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.