ಹಾಸ್ಟೆಲ್ ನಲ್ಲಿ ಇರುವ ಪಿಯುಸಿ ವಿದ್ಯಾರ್ಥಿನಿ ಗರ್ಭಿಣಿ ಆಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾಫಿನಾಡು ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿರುವ ಹಾಸ್ಟೆಲ್ ಒಂದರಲ್ಲಿ ಇಡೀ ನಾಗರೀಕ ಸಮಾಜ ತಲೆತಗ್ಗಿಸುವ ಘಟನೆ ನಡೆದಿದೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು (ಡಿ.16): ಹಾಸ್ಟೆಲ್ ಗಳು ವಿದ್ಯೆ ಕಲ್ಸೋ ದೇವಸ್ಥಾನಗಳಾಗಬೇಕು. ಬಡತನದ ಬೇಗೆಯಲ್ಲಿ ಹೆತ್ತವರು ಮಕ್ಕಳನ್ನ ಹಾಸ್ಟೆಲ್ ಗೆ ಸೇರಿಸುವಾಗ ಅಲ್ಲಿ ಮತ್ತೊಬ್ರು ತಂದೆ-ತಾಯಿ ಇರ್ತಾರೆಂದು ಭಾವಿಸಿರುತ್ತಾರೆ. ಆದ್ರೆ, ನಾಗರೀಕ ಸಮಾಜವೇ ತಲೆ ಮೇಲೆ ಕೈಹೊದ್ದು ಕೂರುವಂತಹಾ ಘಟನೆಗೆ ಕಾಫಿನಾಡು ಸಾಕ್ಷಿಯಾಗಿದೆ. ಹಾಸ್ಟೆಲ್ ನಲ್ಲಿ ಇರುವ ಪಿಯುಸಿ ವಿದ್ಯಾರ್ಥಿನಿ ಗರ್ಭಿಣಿ ಆಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾಫಿನಾಡು ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿರುವ ಹಾಸ್ಟೆಲ್ ಒಂದರಲ್ಲಿ ಇಡೀ ನಾಗರೀಕ ಸಮಾಜ ತಲೆತಗ್ಗಿಸುವ ಘಟನೆ ನಡೆದಿದೆ. ಈ ವಸತಿ ನಿಲಯದಲ್ಲಿ ಸುಮಾರು 200 ಹೆಣ್ಣು ಮಕ್ಕಳು ವ್ಯಾಸಂಗಕ್ಕಾಗಿ ಆಶ್ರಯ ಪಡೆದಿದ್ದಾರೆ. ಇದೇ ಹಾಸ್ಟೆಲ್ನಲ್ಲಿಯೇ ಓರ್ವ ದ್ವಿತಿಯ ಪಿಯುಸಿ ವಿದ್ಯಾರ್ಥಿನಿ ಗರ್ಭಿಣಿ ಆಗಿರುವ ವಿಚಾರ 7 ತಿಂಗಳು ಬಳಿಕ ಬೆಳಕಿಗೆ ಬಂದಿದೆ. ಪ್ರಕರಣವನ್ನ ಹೊರಬರಲು ಬಿಡದೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ, ಹಾಸ್ಟೆಲ್ ವಾರ್ಡನ್ ಮುಚ್ಚಿ ಹಾಕಿದ್ದಾರೆ ಎಂದು ದಲಿತ ಪರ ಸಂಘಟನೆಗಳು ಆರೋಪ ಮಾಡುವೆ. 

ಗರ್ಭಿಣಿ ಎಂಬ ಅರಿವಿಲ್ಲದೇ ವಿಮಾನದಲ್ಲಿ ಪ್ರಯಾಣ: ಫ್ಲೈಟ್ ಟಾಯ್ಲೆಟ್‌ನಲ್ಲಿ ಮಗುವಿನ ಜನನ

ಪೋಕ್ಸೋ ಕೇಸ್ ದಾಖಲು : ಆರೋಪಿಗಾಗಿ ಶೋಧ 
ವಿಷಯ ತಿಳಿದ ಕೂಡಲೇ ಸಮಾಜ ಕಲ್ಯಾಣ ಅಧಿಕಾರಿಗೆ ಕೇಳಿದರೆ ಆಕೆ ಹೊಟ್ಟೆಗೆ ಬಟ್ಟೆ ಕಟ್ಟಿಕೊಳ್ಳುತ್ತಿದ್ದಳು. ಹಾಗಾಗಿ, ಆಕೆಯನ್ನ ಮನೆಗೆ ಕಳಿಸಿ ಹುಡುಗನ ಮೇಲೆ ಪೊಕ್ಸೋ ಕೇಸ್ ದಾಖಲಿಸಿದ್ದೇವೆ ಎಂದಿದ್ದಾರೆ. ವಿದ್ಯಾರ್ಥಿನಿಯ ಹಾಸ್ಟೆಲ್ ಗೆ ಬರುವ ಮುಂಚೆಯೇ ಗರ್ಭಿಣಿ ಆಗಿದ್ದು ಆ ವಿದ್ಯಾರ್ಥಿನಿಯ ಸ್ವಗ್ರಾಮದ ಸುರೇಶ್ ಎನ್ನುವ ಯುವಕನ ಮೇಲೆ ಪೋಕ್ಸೋ ಕೇಸ್ ದಾಖಲಾಗಿದ್ದು ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಹಾಸ್ಟೆಲ್ನಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ತಪಾಸಣೆ ಮಾಡಬೇಕು. ಅದನ್ನ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಅದನ್ನ ಮಾಡಿದ್ದರೆ ಈ ಪ್ರಕರಣ ಆಗಲೇ ಹೊರಗೆ ಬರುತ್ತಿತ್ತು. ಆದರೆ ವಿದ್ಯಾರ್ಥಿನಿಗೆ 7 ತಿಂಗಳು ಆಗುವ ತನಕ ಕಾದ್ದು ತದನಂತರ ಮನೆಗೆ ಕಳುಹಿಸಿದ್ದಾರೆ ಎಂದು ವಾರ್ಡನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಫ್ಲೆಕ್ಸ್‌ಗೆ ಬ್ಲೇಡ್ ಹಾಕಿದ ಕಿಡಿಗೇಡಿಗಳು..

ಜಿಲ್ಲಾ ಸಮಾಜ ಕಲ್ಯಾಣಧಿಕಾರಿಯೂ ಮಹಿಳೆಯಾಗಿ, ಹಾಸ್ಟೆಲ್ ವಾರ್ಡನ್ ಕೂಡ ಮಹಿಳೆಯಾಗಿದ್ದು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅವರಿಗೆ ಗೊತ್ತಿದ್ದೇ ಆಯ್ತಾ ಅಥವಾ ಗೊತ್ತಿಲ್ದೆ ಆಯ್ತಾ ಎಂಬ ಪ್ರಶ್ನೆ ಮೂಡಿದೆ ಎಂದು ವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ. ಮಕ್ಕಳ ಭವಿಷ್ಯದ ಬಗ್ಗೆ ಬೇಜವಾಬ್ದಾರಿ ಇರುವ ಇಂತಹಾ ವಾರ್ಡನ್ಗಳ ವಿರುದ್ಧ ಎಫ್.ಐ.ಆರ್.ದಾಖಲಿಸಿ ಕೆಲಸದಿಂದಲೇ ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ. ಒಟ್ಟಾರೆ, ನಿಜಕ್ಕೂ ಈ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವಂತದ್ದು. 7ತಿಂಗಳು ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ಯಾರಿಗೂ ಗೊತ್ತಾಗದಂತೆ ಅದ್ಹೇಗೆ ಇದ್ದಳು. ಸಹಪಾಠಿಗಳು, ಅಡುಗೆಯವರು, ಕಾಲೇಜಿನಲ್ಲಿ ಶಿಕ್ಷಕರು, ವಾರ್ಡ್ನ್ಗಳಿಗೆ ಒಂಚೂರು ಅನುಮಾನ ಬಾರದಂತೆ 7 ತಿಂಗಳು ಯಾಮಾರಿಸಿದಳಾ ಎಂಬ ಕಠೋರ ಪ್ರಶ್ನೆ ಕೂಡ ಕಾಡತೊಡಗಿದೆ.