ಸಚಿವ ಚಲುವರಾಯಸ್ವಾಮಿ ಸೂಚನೆ ಮೇರೆಗೆ ವರ್ಗಾವಣೆ ಆದ KSRTC ಬಸ್ ಡ್ರೈವರ್  ಒಬ್ಬರು ಡಿಪೋದಲ್ಲೇ ವಿಷ ಸೇವಿಸಿದ  ಘಟನೆ ನಡೆದಿದ್ದು, ನನ್ನ ಸಾವಿಗೆ ಸಚಿವರೇ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟಿದ್ದಾನೆ

ಮಂಡ್ಯ (ಜು.5): ಸಚಿವ ಚಲುವರಾಯಸ್ವಾಮಿ ಸೂಚನೆ ಮೇರೆಗೆ ವರ್ಗಾವಣೆ ಆದ KSRTC ಬಸ್ ಡ್ರೈವರ್ ಕಮ್ ಕಂಡಕ್ಟರ್ ಒಬ್ಬರು ಡಿಪೋದಲ್ಲೇ ವಿಷ ಸೇವಿಸಿದ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ನಾಗಮಂಗಲದ KSRTC ಬಸ್ ಡಿಪೋನಲ್ಲಿ ಘಟನೆ ನಡೆದಿದ್ದು, ಎಚ್.ಆರ್.ಜಗದೀಶ್, ಆತ್ಮಹತ್ಯೆಗೆ ಯತ್ನಿಸಿದ ಬಸ್ ಚಾಲಕ ಮತ್ತು ನಿರ್ವಾಹಕನಾಗಿದ್ದಾನೆ. ಅಧಿಕಾರಿಗಳು ಸಚಿವ ಚಲುವರಾಯಸ್ವಾಮಿ ಸೂಚನೆಯಂತೆ ವರ್ಗಾವಣೆ ಮಾಡಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಇಂದು ವರ್ಗಾವಣೆ ಆದೇಶ ನೀಡಲು ಅಧಿಕಾರಿಗಳು ಮುಂದಾಗಿದ್ದರು. ವಿಷಯ ತಿಳಿದು ವರ್ಗಾವಣೆ ಆದೇಶ ತೆಗೆದುಕೊಳ್ಳದೆ ಕ್ರಿಮಿನಾಶಕ ತಂದು ಡಿಪೋದಲ್ಲೇ ಸೇವನೆ ಮಾಡಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾತ್ರವಲ್ಲ ವಿಷ ಸೇವಿಸಿದ ಬಳಿಕ ಆಸ್ಪತ್ರೆಗೆ ಹೋಗದೆ ಜಗದೀಶ್ ಸತಾಯಿಸಿದ್ದಾನೆ. ಸಹೋದ್ಯೋಗಿಗಳು ಎಷ್ಟೇ ಎಳದ್ರೂ ಆಸ್ಪತ್ರೆಗೆ ತೆರಳದೇ ಪಟ್ಟು ಹಿಡಿದಿದ್ದು, ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಕಳೆದ ಚುನಾವಣೆಯಲ್ಲಿ ಜಗದೀಶ್ ತಂದೆ ಜೆಡಿಎಸ್ ಪರ ಪ್ರಚಾರ ಮಾಡಲು ಓಡಾಡಿದ್ದಾರೆಂದು ಚಲುವರಾಯಸ್ವಾಮಿ ಟಾರ್ಗೆಟ್ ಮಾಡಿದ್ದಾರಂತೆ. ಕೊನೆಗೆ ಮನವೊಲಿಸಿ ತಾಲೂಕು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಜಗದೀಶ್ ತೀವ್ರ ಅಸ್ವಸ್ಥಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ಐಸಿಯುನಲ್ಲಿ ಜಗದೀಶ್ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆತ್ಮಹತ್ಯೆಗೆ ಯತ್ನಿಸುವ ಮುನ್ನ ಕಂಡಕ್ಟರ್ ಜಗದೀಶ್ ಡೆತ್ ನೋಟ್ ಬರೆದಿರುವುದು ಬೆಳಕಿಗೆ ಬಂದಿದೆ. ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ನನ್ನ ವರ್ಗಾವಣೆಗೆ ಕಾರಣ ಏನೆಂದು ಡಿಪೋ ಮ್ಯಾನೇಜರ್ ಕೇಳಿದೆ. ನಿಯಂತ್ರಣಾಧಿಕಾರಿಗಳು ವರ್ಗಾವಣೆ ಮಾಡಿದ್ದಾರೆ ಎಂದರು. ಅವರನ್ನ ಕೇಳಿದಾಗ ಕೃಷಿ ಸಚಿವರ ಆದೇಶದ ಮೇರೆಗೆ ವರ್ಗಾವಣೆ ಎಂದ್ರು. ನನ್ನ ಮೇಲೆ ಸಚಿವರಿಗೆ ಯಾಕಿಷ್ಟು ಕೋಪವೆಂದು ತಿಳಿಯದೆ ನೊಂದಿದ್ದೇನೆ. ಈ ಒತ್ತಡ, ಅವಮಾನವನ್ನ ಸಹಿಸಲು ನನ್ನಿಂದ ಆಗುತ್ತಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದು, ನನ್ನ ಆತ್ಮಹತ್ಯೆಗೆ ಶಾಸಕರೇ ಕಾರಣ ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದಾನೆ.