ಸಿಐಎಸ್‌ಎಫ್‌ ಲೋಗೊ ಇರುವ ಒಂದು ಮೊಬೈಲ್‌ ಸಂಖ್ಯೆ ಹಾಗೂ ಬೆಳಗಾವಿ ಜಿಲ್ಲೆಯ ಮುರುಗೋಡ ಪೊಲೀಸ್‌ ಠಾಣೆಯ ಸಿಪಿಐ ಮೌನೇಶ್ವರ ಅವರ ಫೋಟೋ ಇರುವ ಮತ್ತೊಂದು ಹೆಸರಿನ ಮೊಬೈಲ್‌ ಸಂಖ್ಯೆಯಲ್ಲಿ ಆಗಂತುಕರು ವ್ಯವಹರಿಸುತ್ತಿದ್ದಾರೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ(ಆ.04): ಲಕ್ಷಾಂತರ ರುಪಾಯಿ ಮೌಲ್ಯದ ಸಾಮಗ್ರಿಗಳನ್ನು ಕೇವಲ ಹತ್ತಾರು ಸಾವಿರ ರುಪಾಯಿಗೆ ನೀಡಲಾಗುತ್ತದೆ ಎನ್ನುವ ಸಂದೇಶವುಳ್ಳ ಮಾಹಿತಿಯನ್ನು ಪೊಲೀಸ್‌ ಇಲಾಖೆಯ ಲೋಗೊ, ಅಧಿಕಾರಿಯ ಫೋಟೋ ಡಿಪಿ ಇರುವ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿ, ನಂತರ ಹಣವನ್ನು ಬ್ಯಾಂಕಿಗೆ ವರ್ಗಾಯಿಸುವಂತೆ ಪೀಡಿಸುವ ಪ್ರಕರಣ ಬೆಳಕಿಗೆ ಬಂದಿದೆ.

ಸಿಐಎಸ್‌ಎಫ್‌ ಲೋಗೊ ಇರುವ ಒಂದು ಮೊಬೈಲ್‌ ಸಂಖ್ಯೆ ಹಾಗೂ ಬೆಳಗಾವಿ ಜಿಲ್ಲೆಯ ಮುರುಗೋಡ ಪೊಲೀಸ್‌ ಠಾಣೆಯ ಸಿಪಿಐ ಮೌನೇಶ್ವರ ಅವರ ಫೋಟೋ ಇರುವ ಮತ್ತೊಂದು ಹೆಸರಿನ ಮೊಬೈಲ್‌ ಸಂಖ್ಯೆಯಲ್ಲಿ ಆಗಂತುಕರು ವ್ಯವಹರಿಸುತ್ತಿದ್ದಾರೆ. ಸಿಪಿಐ ಮೌನೇಶ್ವರ ಹೆಸರಿನಲ್ಲಿ 8926319454 ಸಂಖ್ಯೆ ಹಾಗೂ ಸಿಐಎಸ್‌ಎಫ್‌ನ ಹೆಸರಿನಲ್ಲಿ 6371126538 ಮೊಬೈಲ್‌ ನಂಬರ್‌ಗಳ ಮೂಲಕ ವ್ಯಹರಿಸುತ್ತಿದ್ದಾರೆ.

ಕೊಪ್ಪಳ: ಹುಲಿಗೆಮ್ಮನ ದರ್ಶನ ಪಡೆದು ವಾಪಸ್‌ ಬರೋ ವೇಳೆ ಬೈಕ್‌ಗೆ ಬಸ್‌ ಡಿಕ್ಕಿ, ಇಬ್ಬರು ಭಕ್ತರ ದುರ್ಮರಣ

ಕೊಪ್ಪಳ ನಿವಾಸಿ ಪರಮೇಶ್ವರಡ್ಡಿ ಅವ್ವಣ್ಣೆವ್ವರ ಅವರ ಮೊಬೈಲ್‌ ಸಂಖ್ಯೆಯ ವಾಟ್ಸ್‌ಆ್ಯಪ್‌ಗೆ ಲಕ್ಷಾಂತರ ರುಪಾಯಿ ಮೌಲ್ಯದ ಪೀಠೋಪಕರಣಗಳ ಫೋಟೋಗಳನ್ನು ಹಾಕಿದ್ದಾರೆ. ಇವುಗಳೆಲ್ಲ ಕೇವಲ .60 ಸಾವಿರಕ್ಕೆ ನೀಡಲಾಗುತ್ತದೆ ಎನ್ನುವ ಮಾಹಿತಿ ಹಾಕಿದ್ದಾರೆ.

ಇದಾದ ನಂತರ ಸಿಪಿಐ ಮೌನೇಶ್ವರ ಹೆಸರಿನಲ್ಲಿರುವ ಮತ್ತೊಂದು ಸಂಖ್ಯೆಯಿಂದಲೂ ಸಂದೇಶ ಬರುತ್ತದೆ. ‘ಸಿಐಎಸ್‌ಎಫ್‌ ಅಧಿಕಾರಿ ಕಳುಹಿಸಿರುವ ಸಂದೇಶದಲ್ಲಿರುವ ಪೀಠೋಕರಣಗಳು ಚೆನ್ನಾಗಿವೆ. ನೀವು ಅವುಗಳನ್ನು ತೆಗೆದುಕೊಳ್ಳಿ. ನಾನು ಈಗ ಸದ್ಯ ಮೀಟಿಂಗ್‌ನಲ್ಲಿ ಇದ್ದೇನೆ’ ಎನ್ನುವ ಸಂದೇಶ ಬರುತ್ತದೆ.

ಇದಾದ ಮೇಲೆ ಕರೆ ಮಾಡಿ, ‘ಏನಾಯಿತು’ ಎಂದು ಪರಮೇಶ ರಡ್ಡಿ ಅವರನ್ನು ಪದೇಪದೇ ಪೀಡಿಸುತ್ತಾರೆ. ‘ಹಣವನ್ನು ತಕ್ಷಣ ವರ್ಗಾಯಿಸಿ, ನಾವು ಪೀಠೋಪಕರಣ ಕಳುಹಿಸಿಕೊಡುತ್ತೇವೆ’ ಎಂದು ಕಾಡಲು ಶುರು ಮಾಡುತ್ತಾರೆ.
‘ನಾನು ಬ್ಯಾಂಕಿನ ಮೂಲಕ ಹಣ ವರ್ಗಾವಣೆ ಮಾಡುವುದಿಲ್ಲ. ನೀವು ಎಲ್ಲಿದ್ದೀರಿ ಹೇಳಿ, ಅಲ್ಲಿಗೆ ಹಣ ಕಳುಹಿಸುತ್ತೇನೆ. ನನಗೆ ಪೀಠೋಕರಣಗಳನ್ನು ಕೊಡಿ’ ಎಂದು ಪರಮೇಶ್ವರಡ್ಡಿ ಅವ್ವಣ್ಣೆವ್ವರ ಆಗಂತುಕನನ್ನುದ್ದೇಶಿಸಿ ಹೇಳುತ್ತಾರೆ.
ಆಗ ಆಗಂತುಕ, ‘ನಾನು ಈಗ ಬೆಂಗಳೂರು ಏರ್‌ಪೋರ್ಚ್‌ನಲ್ಲಿದ್ದೇನೆ’ ಎನ್ನುವ ಮಾಹಿತಿ ನೀಡುತ್ತಾನೆ.

ಇದಕ್ಕೆ ಪರಮೇಶ್ವರಡ್ಡಿ ಅವ್ವಣ್ಣೆವ್ವರ, ‘ಹಾಗಾದ್ರೆ ಲೋಕೇಶನ್‌ ಶೇರ್‌ ಮಾಡಿ, ತಕ್ಷಣ ಹಣ ತೆಗೆದುಕೊಂಡು ನನ್ನ ಗೆಳೆಯ ಅಲ್ಲಿಗೆ ಬರುತ್ತಾನೆ’ ಎಂದು ಹೇಳುತ್ತಾರೆ. ಇದಕ್ಕೆ ಉತ್ತರಿಸುವ ಆಗಂತುಕ, ಇದಕ್ಕೆ ಹಾಗೆಲ್ಲ ಭೇಟಿಯಾಗಲು ಆಗುವುದಿಲ್ಲ. ನೀವು ಬ್ಯಾಂಕಿನ ಮೂಲಕವೇ ವರ್ಗಾವಣೆ ಮಾಡಿ, ನಿಮ್ಮ ಅಕೌಂಟ್‌ ಡಿಟೇಲ್‌ ನೀಡಿದರೆ ಒಟಿಪಿ ಬರುತ್ತದೆ. ಒಟಿಪಿ ಮಾಹಿತಿ ನೀಡಿ’ ಎನ್ನುತ್ತಾನೆ. ಇದಕ್ಕೆ ಪ್ರತಿಕ್ರಿಯಿಸುವ ಪರಮೇಶ್ವರಡ್ಡಿ ಅವ್ವಣ್ಣೆವ್ವರ, ‘ಇದೆಲ್ಲ ಆಗುವುದಿಲ್ಲ’ ಎನ್ನುತ್ತಿದ್ದಂತೆ ಕರೆ ಕಟ್‌ ಆಗುತ್ತದೆ. ನಂತರ ಆಗಂತುಕರು ಆ ಎಲ್ಲ ಡಿಪಿಗಳನ್ನು ತೆಗೆದಿದ್ದಾರೆ.

ಸುಲಿಗೆಗೆ ಪೊಲೀಸರ ಹೆಸರು ಬಳಕೆ:

ಫೇಸ್‌ಬುಕ್‌ ಮೆಸೆಂಜರ್‌ ಮೂಲಕ ಹಣ ಸುಲಿಗೆ ಹಳೆಯ ಸಂಗತಿ. ಈಗ ಪೊಲೀಸ್‌ ಇಲಾಖೆಯ ಅಧಿಕಾರಿಗಳ ಡಿಪಿ ಮೂಲಕ, ಮೊಬೈಲ್‌ ಸಂಖ್ಯೆಯ ಮೂಲಕ ವಂಚನೆಗೆ ಮುಂದಾಗಿರುವುದು ಹೊಸ ಬೆಳವಣಿಗೆಯಾಗಿದೆ. ಇದನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿ, ಆರೋಪಿಗಳ ಹೆಡೆಮುರಿ ಕಟ್ಟಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

ಸಾಕ್ಷಿದಾರನ ಕೈಗೆ ಕೋಳ ಹಾಕಿದ ಪೊಲೀಸರು: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ನನಗೆ ಈ ಬಗ್ಗೆ ಮಾಹಿತಿ ಇಲ್ಲ. ನನ್ನ ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಿ, ಮೆಸೆಂಜರ್‌ ಮೂಲಕ ಆಗಂತುಕರು ಹಣ ಕೇಳುತ್ತಿದ್ದರು. ಇದಕ್ಕೆ ಹಣ ಹಾಕಬೇಡಿ ಎನ್ನುವ ಸಂದೇಶವನ್ನು ನನ್ನ ಫೇಸ್‌ಬುಕ್‌ ಮುಖಪುಟದಲ್ಲಿ ಹಾಕಿಕೊಂಡಿದ್ದೆ. ಆದರೆ, ಈಗ ನನ್ನ ಹೆಸರಿನಲ್ಲಿಯೇ ಮೊಬೈಲ್‌ ನಂಬರ್‌ ಮೂಲಕ ಪೀಠೋಕರಣ ಕಳುಹಿಸಿಕೊಡುವ ನೆಪದಲ್ಲಿ ಹಣ ಪೀಕುತ್ತಿರುವ ಮಾಹಿತಿ ಈಗ ಗೊತ್ತಾಗಿದೆ. ಈ ಕುರಿತು ದೂರು ನೀಡುತ್ತೇನೆ ಎಂದು ಮುರುಗೋಡ ಸಿಪಿಐ ಮೌನೇಶ್ವರ ಹೇಳಿದ್ದಾರೆ.

ನನ್ನ ವಾಟ್ಸ್‌ಆ್ಯಪ್‌ಗೆ ಪೊಲೀಸ್‌ ಅಧಿಕಾರಿಗಳು ಮತ್ತು ಇಲಾಖೆಯ ಲೋಗೋ ಇರುವ ಡಿಪಿಯ ಮೂಲಕ ಸಂದೇಶ ಹಾಗೂ ಕರೆಗಳು ಬರುತ್ತಿವೆ. ಪೀಠೋಪಕರಣವನ್ನು ಕಡಿಮೆ ಬೆಲೆಗೆ ನೀಡಲಾಗುತ್ತದೆ. ಹಣ ವರ್ಗಾಯಿಸಿ ಎಂದು ಪೀಡಿಸಿದರು. ನಾನು ಯಾವುದೇ ಹಣ ವರ್ಗಾವಣೆ ಮಾಡಿಲ್ಲ ಎಂದು ಕೊಪ್ಪಳ ನಿವಾಸಿ ಪರಮೇಶರಡ್ಡಿ ಅವ್ವಣ್ಣೆವರ ತಿಳಿಸಿದ್ದಾರೆ.