Asianet Suvarna News Asianet Suvarna News

ಮಹಾರಾಷ್ಟ್ರಕ್ಕೆ ಗಾಂಜಾ ಸಾಗಿಸುತ್ತಿದ್ದವರ ಬಂಧನ: 47 ಲಕ್ಷ ಮೌಲ್ಯದ ಮಾದಕ ವಸ್ತು ವಶ

ಆಂಧ್ರಪ್ರದೇಶದ ರಾಜಮಂಡ್ರಿಯಿಂದ ಗಾಂಜಾ ಸಂಗ್ರಹಿಸಿಟ್ಟುಕೊಂಡು, ನಂತರ ಭಾಲ್ಕಿ ಮಾರ್ಗವಾಗಿ ಸೋಲ್ಲಾಪೂರಕ್ಕೆ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಮೂರು ಜನ ಆರೋಪಿಗಳನ್ನು ಬೀದರ್‌ ನಾಂದೇಡ ರಾಷ್ಟ್ರೀಯ ಹೆದ್ದಾರಿ 50ರ ಹಾಲಹಿಪ್ಪರ್ಗಾ ಕ್ರಾಸ್‌ ಬಳಿ ಬಂಧಿಸಿ ಅವರಿಂದ 25.65ಲಕ್ಷ ರು. ಮೌಲ್ಯದ 25.65ಕೆಜಿ ಗಾಂಜಾ ವಶಪಡಿಸಿಕೊಂಡಿದೆ. 
 

Four Arrested For Attempt Marijuana Transport to Maharashtra grg
Author
First Published Oct 13, 2023, 1:01 PM IST

ಬೀದರ್‌(ಅ.13): ನಗರದಲ್ಲಿ ಖಾಸಗಿ ವ್ಯವಹಾರ ನಡೆಸುವ ನೆಪದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ಗಾಂಜಾ ಸಾಗಾಣಿಕೆ ಹಾಗೂ ಮನೆಗಳ್ಳತನ ಹಾಗೂ ಬೈಕ್‌ಗಳ ಕಳ್ಳತನ ಮಾಡಿದ್ದ 7 ಜನರ ಪೈಕಿ ಮೂವರನ್ನು ಬಂಧಿಸಿ 47 ಲಕ್ಷ ರು. ಮೌಲ್ಯದ ಗಾಂಜಾ ವಶಕ್ಕೆ ಪಡೆದು ನಾಲ್ವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ತಿಳಿಸಿದರು.

ಅವರು ಈ ಕುರಿತಂತೆ ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಆಂಧ್ರಪ್ರದೇಶದ ರಾಜಮಂಡ್ರಿಯಿಂದ ಗಾಂಜಾ ಸಂಗ್ರಹಿಸಿಟ್ಟುಕೊಂಡು, ನಂತರ ಭಾಲ್ಕಿ ಮಾರ್ಗವಾಗಿ ಸೋಲ್ಲಾಪೂರಕ್ಕೆ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಮೂರು ಜನ ಆರೋಪಿಗಳನ್ನು ಬೀದರ್‌ ನಾಂದೇಡ ರಾಷ್ಟ್ರೀಯ ಹೆದ್ದಾರಿ 50ರ ಹಾಲಹಿಪ್ಪರ್ಗಾ ಕ್ರಾಸ್‌ ಬಳಿ ಬಂಧಿಸಿ ಅವರಿಂದ 25.65ಲಕ್ಷ ರು. ಮೌಲ್ಯದ 25.65ಕೆಜಿ ಗಾಂಜಾ ವಶಪಡಿಸಿಕೊಂಡಿದೆ. ಇದೇ ತಂಡ ಬೀದರ್‌ನ ಗುನ್ನಳ್ಳಿ ರಸ್ತೆ ಬಳಿಯ ರಿಕ್ಷಾ ಕಾಲೋನಿಯ ಮನೆಯೊಂದರಲ್ಲಿ ಶೇಖರಣೆ ಮಾಡಿಟ್ಟಿದ್ದ 21.40 ಲಕ್ಷ ರು. ಮೌಲ್ಯದ 21.44 ಕೆಜಿ ಗಾಂಜಾ ಪತ್ತೆ ಮಾಡಿ ಓರ್ವ ಆರೋಪಿಯನ್ನು ಬಂಧಿಸಿದ್ದು, ಒಟ್ಟಾರೆ ಈ ಪ್ರಕರಣದಲ್ಲಿ ಒಟ್ಟು 47.05 ಲಕ್ಷ ರು. ಮೌಲ್ಯದ 47.09 ಕೆಜಿ ಗಾಂಜಾ ಹಾಗೂ ಸಾಗಾಣಿಕೆಗೆ ಬಳಸಲಾದ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಬಸವಕಲ್ಯಾಣ: ಎಟಿಎಂ ದೋಚಿ ಖದೀಮರು ಪರಾರಿ, ಯಂತ್ರ ಒಡೆದರೂ ಬಾರಿಸದ ಎಚ್ಚರಿಕೆ ಗಂಟೆ..!

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಇವರು ಬೀದರ್‌ನ ಗುನ್ನಳ್ಳಿ ರಸ್ತೆ ಬಳಿಯ ರಿಕ್ಷಾ ಕಾಲೋನಿಯ ಮನೆಯೊಂದರಲ್ಲಿ ಗಾಂಜಾ ಶೇಖರಣೆ ಮಾಡಿಟ್ಟು ಸಾಗಾಣಿಕೆ ಮಾಡುತ್ತಿರುವುದು, ಜಿಲ್ಲೆಯ ಖಾನಾಪೂರ ಗ್ರಾಮದಲ್ಲಿ ಈ ಹಿಂದೆ ನಡೆದ ಮೂರು ದ್ವಿಚಕ್ರ ವಾಹನಗಳ ಮತ್ತು ಒಂದು ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು ಬೆಳಕಿಗೆ ಬಂದಿದೆ. ಈ ಗಾಂಜಾ ಸಾಗಾಣಿಕೆ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನು ಮೂರು ಜನ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಶೋಧ ಕಾರ್ಯ ನಡೆದಿದೆ ಎಂದು ಮಾಹಿತಿ ನೀಡಿದರು.

ಸದರಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಭಾಲ್ಕಿ ಪೊಲೀಸ್‌ ಉಪಾಧೀಕ್ಷಕ ಶಿವಾನಂದ ಪವಾಡಶೆಟ್ಟಿ, ಭಾಲ್ಕಿ ಗ್ರಾಮೀಣ ವೃತ್ತ ಸಿಪಿಐ ಗುರುಪಾದ ಎಸ್‌ ಬಿರಾದಾರ, ಪಿಎಸ್‌ಐ ವಿಶ್ವರಾಧ್ಯ ಸೇರಿದಂತೆ ಈ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಬೀದರ್‌ ಪೊಲೀಸರ ಭರ್ಜರಿ ಕಾರ್ಯಾಚರಣೆ: 11 ಖದೀಮರ ಬಂಧನ

ಆನ್‌ಲೈನ್‌ ಕ್ರಿಕೆಟ್ ಬೆಟ್ಟಿಂಗ್‌ ಮೇಲೆ ನಿಗಾಕ್ಕೆ ಸೂಚನೆ

ಇತ್ತಿಚೇಗೆ ಬೀದರ್‌ ಜಿಲ್ಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದ ಮೂರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆನ್‌ಲೈನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಮಾಹಿತಿ ಇದೆ, ಆದ್ದರಿಂದ ಪೊಷಕರು ತಮ್ಮ ಮಕ್ಕಳ ಬ್ಯಾಂಕ್ ಖಾತೆಯ ಹಣ ವರ್ಗಾವಣೆಯ ಮೇಲೆ ನಿಗಾವಹಿಸಬೇಕು. ಜಿಲ್ಲೆಯ ನಾಗರಿಕರು ಹಾಗೂ ಯುವಕರು ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಭಾಗಿಯಾಗಬಾರದು. ಇಂತಹ ಕೃತ್ಯದಲ್ಲಿ ಭಾಗಿಯಾದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.

ಜಿಲ್ಲೆಯಲ್ಲಿ ಮನೆ ಕಳ್ಳತನ ಪ್ರಕರಣಗಳನ್ನು ನಿಯಂತ್ರಿಸಲು ಜಿಲ್ಲೆಯ ಸಾರ್ವಜನಿಕರು ಸಹಕರಿಸಬೇಕು. ತಮ್ಮ ಮನೆಗಳಿಗೆ ಸಿಸಿಟಿವಿ ಅಳವಡಿಸಬೇಕು. ತಾವು ಊರಿಗೆ ತೆರಳುವಾಗ ತಮ್ಮ ಮನೆಯ ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಿ ತಮ್ಮ ಮನೆಯ ಮೇಲೆ ನಿಗಾ ಇಡುವಂತೆ ಹೇಳಬೇಕು. ಹೆಚ್ಚಿನ ದಿನಕ್ಕಾಗಿ ಊರಿಗೆ ತೆರಳುವಂತಿದ್ದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ತಮ್ಮ ಬಡಾವಣೆಯಲ್ಲಿ ಅಪರಿಚಿತ ವ್ಯಕ್ತಿಗಳು ಸಂಚರಿಸುದನ್ನು ಕಂಡುಬಂದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಹೇಳಿದರು.

Follow Us:
Download App:
  • android
  • ios